“ಮತಪೆಟ್ಟಿಗೆಯಿಂದ ನಾಯಕ ಹುಟ್ಟುತ್ತಾನೆ” ಎನ್ನುವುದು ಪ್ರಜಾಪ್ರಭುತ್ವದ ಅತ್ಯಂತ ಸುಂದರವಾದ ಸೂತ್ರ. ಆದರೆ ಇಂದಿನ ರಾಜಕೀಯ ವಾಸ್ತವಿಕತೆ ನೋಡಿದರೆ, ಅದು ಕೇವಲ ಮಾತಿನ ಅಲಂಕಾರವಾಗಿ ಉಳಿದಿದೆ ಎಂಬುದನ್ನು ಒಪ್ಪಿಕೊಳ್ಳಲೇಬೇಕು.
ರಾಜ್ಯದಲ್ಲಿ ತೆರವಾದ ಎರಡು ಕ್ಷೇತ್ರಗಳಿಗೆ ಚುನಾವಣೆ ಘೋಷಣೆಯಾಗಿದೆ. ರಾಜಕೀಯ ಪಕ್ಷಗಳು ತಮ್ಮ ಶಕ್ತಿಪ್ರದರ್ಶನಕ್ಕೆ ಸಜ್ಜಾಗಿವೆ. ಆದರೆ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಯಲ್ಲಿನ ಅನ್ಯಾಯ, ವಿಶೇಷವಾಗಿ ‘ಬಿ ಫಾರ್ಮ್’ ಹಂಚಿಕೆ, ಕಾರ್ಯಕರ್ತರ ನಂಬಿಕೆಯನ್ನು ತುಳಿದಿದೆ. ವರ್ಷಗಳಕಾಲ ಪಕ್ಷಕ್ಕಾಗಿ ದುಡಿದವರನ್ನು ಕಡೆಗಣಿಸಿ, ಕುಟುಂಬಪರ ಹಾಗೂ ಪ್ರಭಾವಶಾಲಿ ವ್ಯಕ್ತಿಗಳಿಗೆ ಆದ್ಯತೆ ನೀಡಿರುವುದು ಒಂದು ರೀತಿಯಲ್ಲಿ ಪ್ರಜಾಪ್ರಭುತ್ವದ ಆತ್ಮವನ್ನೇ ಅವಮಾನಿಸುವಂತಾಗಿದೆ.
ಕ್ಷೇತ್ರಗಳು ಇಂದು ಜನರ ಪ್ರತಿನಿಧಿತ್ವದ ವೇದಿಕೆಗಳಾಗಿಲ್ಲ; ಅವು ಕುಟುಂಬಗಳ ಸ್ವಂತ ಆಸ್ತಿಗಳಾಗಿ ಮಾರ್ಪಡುತ್ತಿವೆ. ತಂದೆ ನಂತರ ಮಗ, ನಂತರ ಮೊಮ್ಮಗ ಇದು ಪ್ರಜಾಪ್ರಭುತ್ವವಲ್ಲ, ಇದು ಆಧುನಿಕ ರಾಜವಂಶ ವ್ಯವಸ್ಥೆ. ಜನರ ಮತದಿಂದ ಆಯ್ಕೆಯಾಗಬೇಕಾದ ನಾಯಕರು, ಈಗ ಕುಟುಂಬದ ಹೆಸರಿನಿಂದಲೇ ಆಯ್ಕೆಯಾಗುತ್ತಿದ್ದಾರೆ.
“ರಾಜನ ಹೊಟ್ಟೆಯಿಂದ ರಾಜ ಹುಟ್ಟುತ್ತಾನೆ” ಎಂಬ ಹಳೆಯ ಮಾತು, ಇಂದಿನ ಪ್ರಜಾಪ್ರಭುತ್ವದಲ್ಲಿ ಹೊಸ ರೂಪದಲ್ಲಿ ಮರಳಿ ಬಂದಿದೆ. ಮತಪೆಟ್ಟಿಗೆ ಕೇವಲ ಒಂದು ಪ್ರಕ್ರಿಯೆಯಾಗಿಬಿಟ್ಟಿದೆ. ನಾಯಕನ ಆಯ್ಕೆ ಈಗಾಗಲೇ ಕುಟುಂಬಗಳಲ್ಲಿ ನಿರ್ಧಾರವಾಗುತ್ತಿದೆ.
ಚುನಾವಣೆ ಎಂದರೆ ತತ್ವಗಳ ಹೋರಾಟವಾಗಬೇಕಿತ್ತು. ಆದರೆ ಅದು ಇಂದು ಜಾತಿ, ಮತ, ಹಣ ಮತ್ತು ಪ್ರಭಾವಗಳ ಸಮೀಕರಣವಾಗಿ ಕುಸಿಯುತ್ತಿದೆ ಎನ್ನುವುದನ್ನು ಮುಚ್ಚಿಡಲು ಸಾಧ್ಯವಿಲ್ಲ. ಕಾರ್ಯಕರ್ತರ ಶ್ರಮ, ನಿಷ್ಠೆ, ತ್ಯಾಗಗಳೆಲ್ಲವೂ ಕೇವಲ ಭಾಷಣಗಳಲ್ಲಿ ಮಾತ್ರ ಉಳಿದುಕೊಂಡಿವೆ.
ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಕ್ಷೇತ್ರಗಳಲ್ಲಿ ನಿಷ್ಠಾವಂತ ಕಾರ್ಯಕರ್ತರ ದೊಡ್ಡ ಬಳಗವಿದ್ದರೂ, ಅವರಿಗೆ ಅವಕಾಶ ನೀಡುವಲ್ಲಿ ಪಕ್ಷಗಳು ವಿಫಲವಾಗಿವೆ. ಇದು ಕೇವಲ ಒಂದು ತಪ್ಪಲ್ಲ; ಇದು ಕಾರ್ಯಕರ್ತರ ಆತ್ಮಗೌರವಕ್ಕೆ ನೀಡಿದ ದೊಡ್ಡ ಅವಮಾನ.
ಕಾರ್ಯಕರ್ತರು ಪಕ್ಷದ ಬೆನ್ನೆಲುಬು ಎಂದು ಹೇಳಲಾಗುತ್ತದೆ. ಆದರೆ ವಾಸ್ತವದಲ್ಲಿ, ಅವರನ್ನು ಕೇವಲ ಪ್ರಚಾರಕ್ಕೆ ಮತ್ತು ಚುನಾವಣಾ ಯಂತ್ರಗಳಂತೆ ಬಳಸಲಾಗುತ್ತಿದೆ. ಜಯ ಸಾಧಿಸುವಾಗ ಅವರ ಪರಿಶ್ರಮದ ಬಗ್ಗೆ ಮಾತನಾಡಿ ಅಧಿಕಾರ ಹಂಚುವಾಗ ಅವರನ್ನು ಸಂಪೂರ್ಣವಾಗಿ ಮರೆತುಬಿಡುತ್ತಿರುವುದು ಇಂದಿನ ಪರಿಸ್ಥಿತಿ.
ಹೀಗಾದರೆ ಪಕ್ಷಗಳು ಕಾರ್ಯಕರ್ತರಿಂದ ನಿರ್ಮಿತವಾಗಿವೆಯೇ? ಅಥವಾ ಕಾರ್ಯಕರ್ತರು ಪಕ್ಷಗಳ ಸೇವಕರಾಗಿ ಮಾತ್ರ ಉಳಿದಿದ್ದಾರೆಯೇ? ಎಂಬ ಪ್ರಶ್ನೆ ಮೂಡುತ್ತಿದ್ದು ಈ ಪ್ರಶ್ನೆಗೆ ಉತ್ತರ ನೀಡುವುದು ಈಗ ನಾಯಕರ ಹೊಣೆಗಾರಿಕೆ ಮಾತ್ರವಲ್ಲ ಪ್ರಜಾಪ್ರಭುತ್ವದ ಭವಿಷ್ಯವನ್ನು ನಿರ್ಧರಾಕ ಅಂಶವಾಗಿದೆ.
ವರದಿ: ರತ್ನಾಕರ ಗೌಂಡಿ



