ಕೋಲಾರ: ವ್ಯಕ್ತಿಯೊಬ್ಬ ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿ ಕುಕ್ಕರ್ನಿಂದ ಹೊಡೆದು ಹತ್ಯೆ ಮಾಡಿದ ಘಟನೆ ಕೋಲಾರದ ಹಸಾಳ ಗ್ರಾಮದಲ್ಲಿ ನಡೆದಿದೆ.
ಸಹನಾ (24) ಪತಿಯಿಂದ ಹತ್ಯೆಯಾದ ಮಹಿಳೆ. ಮಂಜುನಾಥ್ ಪತ್ನಿಯನ್ನು ಹತ್ಯೆಗೈದ ಆರೋಪಿಯಾಗಿದ್ದಾನೆ. ದಂಪತಿಗೆ ಮದುವೆಯಾಗಿ 5 ವರ್ಷ ಕಳೆದಿದ್ದು, ಇಬ್ಬರು ಗಂಡುಮಕ್ಕಳಿದ್ದಾರೆ. ಈತ ಮದುವೆಯಾದಾಗಿನಿಂದ ಪದೇ ಪದೇ ಮಹಿಳೆಗೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದ. ಈ ಹಿಂದೆ ಮದುವೆಗೆ ಲಕ್ಷಾಂತರ ರೂಪಾಯಿ ಖರ್ಚಾಗಿದೆ ಎಂದು 2 ಲಕ್ಷ ರೂ. ಪಡೆದಿದ್ದನಂತೆ. ಅಲ್ಲದೇ ಮನೆ ಕಟ್ಟೋದಕ್ಕೆ 10 ಲಕ್ಷ ರೂ. ಹಣ ಬೇಕು ಎಂದು ಬೇಡಿಕೆ ಇಟ್ಟಿದ್ದನಂತೆ.
ಹಣಕ್ಕಾಗಿ ಪದೇ ಪದೇ ಮನೆಯಲ್ಲಿ ಗಲಾಟೆ ನಡೆಯುತ್ತಿತ್ತು. ಈ ಹಿಂದೆಯೂ ಹಲವು ನ್ಯಾಯ ಪಂಚಾಯಿತಿಗಳು ಸಹ ನಡೆದು ಇಬ್ಬರನ್ನು ಒಂದು ಮಾಡಲಾಗಿತ್ತು. ಜೂ.17 ರಂದು ಸಹನಾ ತಾಯಿ ಜಯಮ್ಮಗೆ ವಿಡಿಯೋ ಕಾಲ್ ಮಾಡಿ ಅಮ್ಮ ನನ್ನ ಹೊಡೆಯುತ್ತಿದ್ದಾರೆ. ನೋಡು ಮೂಗಲ್ಲಿ ರಕ್ತ ಬರುತ್ತಿದೆ ಎಂದು ಹೇಳಿಕೊಂಡಿದ್ದಳು. ಅದೇ ದಿನ ರಾತ್ರಿ ವೇಳೆ ಕುಕ್ಕರ್ ಸೇರಿದಂತೆ ಪಾತ್ರೆಗಳಲ್ಲಿ ತಲೆ ಮೇಲೆ ಮಂಜುನಾಥ್ ಹಲ್ಲೆ ಮಾಡಿದ್ದಾನೆ. ಪ್ರಜ್ಞೆತಪ್ಪಿ ಬೀಳುತ್ತಿದ್ದಂತೆ ನೇಣು ಬಿಗಿದಿದ್ದಾನೆ ಎಂದು ಮೃತಳ ಕುಟುಂಬಸ್ಥರು ಆರೋಪಿಸಿದ್ದಾರೆ.
ಕೋಲಾರ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಂಜುನಾಥ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.




