ಬಾಗಲಕೋಟೆ : ಮಾನಸಿಕ ಬೆಳವಣಿಗೆಯಲ್ಲಿ ವ್ಯಕ್ತಿತ್ವ ವಿಕಸನ ಪಾತ್ರ ಶ್ಲಾಘನೀಯ. ಜೀವನದಲ್ಲಿ ಆದರ್ಶ, ಸಂಸ್ಕೃತಿ, ಆಚಾರ, ವಿಚಾರ, ನಡವಳಿಕೆ, ಸಂವಹನ ಕಲೆಯನ್ನು ಸಕಾರಾತ್ಮಕವಾಗಿ ಸರಿದೂಗಿಸುವ ಸಾಮರ್ಥ್ಯ ಹೊಂದಿರುವುದೇ ವ್ಯಕಿತ್ವ ವಿಕಸನ ಎಂದು ಸುನಗ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕಿ ಗೀತಾ ಏಳೆಮ್ಮಿ ಹೇಳಿದರು.
ನಗರದ ಬಿವಿವಿ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕಗಳಿಂದ ದತ್ತು ಗ್ರಾಮವಾದ ಯಡಹಳ್ಳಿಯ ಶ್ರೀ ಗುರು ಅಜಾತ ನಾಗಲಿಂಗೇಶ್ವರ ಸಾಧುಮಠದಲ್ಲಿ ಹಮ್ಮಿಕೊಂಡ ವಾರ್ಷಿಕ ವಿಶೇಷ ಶಿಬಿರದ ಆರನೇ ದಿನದ ಕಾರ್ಯಕ್ರಮದಲ್ಲಿ ವ್ಯಕ್ತಿತ್ವ ವಿಕಸನ ಕುರಿತು ಉಪನ್ಯಾಸ ನೀಡಿದ ಅವರು ಸನ್ನಿವೇಶಕ್ಕೆ ತಕ್ಕಂತೆ ಮುಖವಾಡವನ್ನು ಪ್ರಜ್ಞಾಪೂರ್ವಕವಾಗಿ ಧರಿಸುವುದೇ ವ್ಯಕ್ತಿತ್ವ. ವ್ಯಕ್ತಿತ್ವ ಅನ್ನುವುದು ಅನೇಕ ವಿಷಯಗಳಿಂದ ಕೂಡಿದ್ದೂ, ಹೂವಿಗೆ ಸುಗಂಧ ಎಷ್ಟು ಮುಖ್ಯವೋ, ಮನುಷ್ಯನಿಗೆ ವ್ಯಕ್ತಿತ್ವವು ಅಷ್ಟೇ ಮುಖ್ಯ. ಆತ್ಮವಿಶ್ವಾಸ, ದೇಹಭಾಷೆ, ಮತ್ತೊಬ್ಬರೊಂದಿಗಿನ ವರ್ತನೆವೂ ಸಹ. ನಿಮ್ಮ ಬಗ್ಗೆ ನಿಮಗೆ ನಂಬಿಕೆಯಿದ್ದರೆ ಮನಸ್ಸು ಪ್ರಪುಲ್ಲವಾಗಿರುತ್ತದೆ. ನಿಮ್ಮ ಸಾಮರ್ಥ್ಯವನ್ನು ಅರಿತುಕೊಂಡು, ಮತ್ತೊಬ್ಬರ ಮಾತುಗಳನ್ನು ಗಮನಿಸದೇ ಮುಂದೆ ಸಾಗಿ. ಮನಸ್ಸನ್ನು ಗೆದ್ದರೆ ಇಡೀ ಜಗತ್ತೇ ಗೆದ್ದಂತೆ ಎಂದರು.
ಗುರಿಯೆಡೆಗೆ ಸಾಗಿದಾಗ ಮಾತ್ರ ಯಶಸ್ಸು. ಸಮಯವನ್ನು ಖರೀದಿಸಲು ಸಾಧ್ಯವಿಲ್ಲ. ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಫಲವೇನುವೆಂಬಂತೆ ಆಗದ ಕೆಲಸದ ಬಗ್ಗೆ ಯೋಚಿಸದೇ ಮುಂದೆ ಸಾಗಬೇಕು. ಯಶಸ್ಸು ನಮ್ಮ ಕೈಲಿದೆ ಪ್ರಯತ್ನ ಮಾಡಬೇಕಷ್ಟೆ. ವಿದ್ಯಾರ್ಥಿಗಳು ಸಿಟ್ಟನ್ನು ನಿಯಂತ್ರಣ ಮಾಡಬೇಕು. ತಂದೆತಾಯಿಗಳಿಂದ ಬೇಕಾದಷ್ಟು ಉಪಯೋಗ ತೆಗೆದುಕೊಂಡು, ಆಮೇಲೆ ಕಡೆಗಣಿಸುವ ಸ್ಥಿತಿಯಿದೆ. ನಾವು ಮಾಡಿದ ತಪ್ಪು ನಾವೇ ಅನುಭವಿಸಬೇಕು. ನಮ್ಮ ತನವನ್ನು ತಿಳಿದುಕೊಳ್ಳಿ. ಮತ್ತೊಬ್ಬರನ್ನು ನೋಡಿ ಕೊರಗಬೇಡಿ. ನಿಮ್ಮದೇ ಇತಿಹಾಸವನ್ನು ಸೃಷ್ಟಿಸಿಕೊಳ್ಳಿ. ಬಂದ ಕಾಲವನ್ನು ಅರಿತು ಜೀವಿಸಿದರೆ ಜೀವನ ಸಾರ್ಥಕ ಎಂದರು.
ಅಧ್ಯಕ್ಷತೆ ವಹಿಸಿದ ಎನ್ಎಸ್ಎಸ್ ಘಟಕ 1 ಅಧಿಕಾರಿ ಡಾ.ಎಮ್.ಎಚ್.ವಡ್ಡರ ಅವರು ಮಾತನಾಡಿ ಪೋಷಕರ ಬೆಲೆಯನ್ನು ಅರ್ಥೈಸಿಕೊಳ್ಳುವುದು ಮುಖ್ಯ. ಪ್ರಪಂಚದಲ್ಲಿ ನಮ್ಮನ್ನು ಸ್ವತಂತ್ರವಾಗಿ ಬಿಟ್ಟಿದ್ದಾರೆ. ಪೋಷಕರನ್ನು ಮೂಲಿಗುಂಪು ಮಾಡುವ ಸ್ಥಿತಿ ಉಲ್ಬನಗೊಂಡಿವೆ. ನಿಮ್ಮಲ್ಲಿರುವ ಭಯವನ್ನು ಕಿತ್ತೆಸೆಯಿರಿ. ಸಮಯ, ಸೌಹಾರ್ದತೆಯನ್ನು ಕಲಿಯುವುದು ಶಿಬಿರದಲ್ಲಿ ಮಾತ್ರ. ಶಿಸ್ತು, ಸಮಯಪ್ರಜ್ಞೆ, ನಾಯಕತ್ವ ಗುಣ ಇವೆಲ್ಲವೂಗಳಿಂದ ವ್ಯಕ್ತಿತ್ವ ವಿಕಸನವಾಗುತ್ತದೆ. ನಿಮ್ಮಲ್ಲಿರುವ ಕೌಶಲ್ಯಗಳನ್ನು ವ್ಯಕ್ತಪಡಿಸಲು ಹಿಂಜರಿಯುವುದು ಬೇಡ. ಇನ್ನೊಬ್ಬರನ್ನು ಜೀವನದಲ್ಲಿ ಅನುಸರಿಸಿಕೊಳ್ಳಿ. ಪ್ರತಿಯೊಬ್ಬರು ಕಾರ್ಯಕ್ರಮದ ಉಪನ್ಯಾಸಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದರು.
ಇತಿಹಾಸ ವಿಭಾಗದ ಉಪನ್ಯಾಸಕ ಡಾ. ವ್ಹಿ.ಆರ್. ಹಿರೇಮಠ್, ಕನ್ನಡ ವಿಭಾಗದ ಉಪನ್ಯಾಸಕ ಸತೀಶ್.ಎಸ್.ಆರ್, ಸಂಗೀತ ವಿಭಾಗದ ಉಪನ್ಯಾಸಕಿ ಶ್ರೇಯಾ ಜೋರಾಪುರ, ಶಿಬಿರದ ಸಂಘಟಕರು ಎನ್.ಆರ್.ಇಂಗಳಗಿ ಸೇರಿದಂತೆ ಬೋಧಕ - ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.



