- ಗಂಗಾ ಅಮಾತೆಪ್ಪನವರ
ಪರಿಸರ ಮತ್ತು ಮಾನವನ ನಡುವಿನ ಸಂಬಂಧ ಇಂದು ನಿನ್ನೆಯದಲ್ಲ. ಜೀವ ಸೃಷ್ಟಿಯಿಂದಲೂ ಅವಿನಾಭಾವವಾಗಿ ಬೆಸೆದುಕೊಂಡು ಬಂದಿದೆ. ಮಾನವ ಸಂಕುಲದ ಕಾಳಜಿಯನ್ನೂ, ಅತಿಮಾನುಷ ವರ್ತನೆಯನ್ನೂ ಸಮನಾಗಿಸಿಕೊಂಡು ಸಹಿಷ್ಣುತೆಯಿಂದಲೇ ವರ್ತಿಸುವ ಪರಿಸರ ಜೀವ ಸಂಕುಲದ ಜನನಿಯಾಗಿ ತನ್ನಲ್ಲಿರುವ ಸಕಲ ಜೀವಿಗಳಿಗೂ ಸಮನಾಗಿ ಆಶ್ರಯ ನೀಡುತ್ತದ್ದಾಳೆ. ಉಸಿರಾಡಲು ಗಾಳಿ, ಕುಡಿಯಲು ನೀರು, ಆಹಾರ ಮತ್ತು ವಾಸಿಸಲು ಆಶ್ರಯ ನೀಡಿದ ಪರಿಸರವನ್ನು ರಕ್ಷಿಸಿ ಸಹಜ ಸಮತೋಲನ ಕಾಪಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಪಕೃತಿಯಿಂದ ಪಡೆದುಕೊಳ್ಳುವ ನಾವು ಮರಳಿ ಅದಕ್ಕೆ ಏನು ಮಾಡುತ್ತಿದ್ದೇವೆ ಎಂದು ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳಬೇಕಿದೆ, ಪರಿಸರ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಪ್ರಕೃತಿಯ ಮಹತ್ವವನ್ನು ಸಾರಲು ಪ್ರತಿ ವರ್ಷ ಜೂ. 5ರಂದು ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ. ಇದು ಪರಿಸರವನ್ನು ಕಾಪಾಡಿಕೊಳ್ಳಲು ನಾವೆಲ್ಲರೂ ಕೈಗೊಳ್ಳಬೇಕಾದ ಸಂಕಲ್ಪದ ದಿನವಾಗಿದ್ದು ಇತ್ತಿಚೆಗೆ ಕೇವಲ ಒಂದು ದಿನದ ಆಚರಣೆಗೆ ಸೀಮಿತವಾಗಿ ಪರಿಸರದ ಬಗ್ಗೆ ಯೋಚಿಸದ ಕಾಲಮಾನ ಎದುರಾಗುತ್ತಿರುವುದು ವಿಷಾದನೀಯ.
ವಿಶ್ವ ಪರಿಸರ ದಿನಾಚರಣೆಯ ಇತಿಹಾಸ 1972ರ ಸ್ಟಾಕ್ಹೋಮ್ ಸಮ್ಮೇಳನದಿಂದ ಆರಂಭವಾಗುತ್ತದೆ. ವಿಶ್ವಸಂಸ್ಥೆಯು ಮಾನವ ಪರಿಸರ ಕುರಿತು ನಡೆಸಿದ ಈ ಮಹತ್ವದ ಸಮ್ಮೇಳನದಲ್ಲಿ ಪರಿಸರ ದಿನವನ್ನು ಆಚರಿಸಲು ನಿರ್ಧರಿಸಿ 1974 ರಲ್ಲಿ "ಒಂದೇ ಒಂದು ಭೂಮಿ" ಎಂಬ ಘೋಷವಾಕ್ಯದೊಂದಿಗೆ ಮೊದಲ ಬಾರಿಗೆ ಅಧಿಕೃತವಾಗಿ ಜೂ. 5 ರಂದು ಪರಿಸರ ದಿನವನ್ನು ಆಚರಿಸಲಾಗುತ್ತದೆ. ಅಂದಿನಿಂದ ಇಂದಿನವರೆಗೆ ಪ್ರತಿ ವರ್ಷವೂ ಪ್ರಸ್ತುತ ಎದುರಾಗುತ್ತಿರುವ ಪರಿಸರ ಸವಾಲುಗಳನ್ನು ಆಧರಿಸಿ ಒಂದು ನಿರ್ದಿಷ್ಟ ಧ್ಯೇಯವಾಕ್ಯದೊಂದಿಗೆ ಈ ದಿನವನ್ನು ವಿಶ್ವದಾದ್ಯಂತ ಆಚರಿಸಿಕೊಂಡು ಬರಲಾಗುತ್ತಿದೆ. ಈ ವರ್ಷದ ಧ್ಯೇಯ ವಾಕ್ಯ ಪ್ರಕೃತಿಯಿಂದ ಸ್ಫೂರ್ತಿ ಪಡೆದಿದ್ದು "ಹವಾಮಾನಕ್ಕಾಗಿ, ನಮ್ಮ ಭವಿಷ್ಯಕ್ಕಾಗಿ" ಎಂಬುದಾಗಿದೆ.
ಪ್ರಸ್ತುತ ಎದುರಾಗುತ್ತಿರುವ ಪರಿಸರ ಸವಾಲುಗಳ ಸರಮಾಲೆ ನಮ್ಮೆದುರಿಗಿದೆ. ಆಧುನಿಕ ಜಗತ್ತಿನಲ್ಲಿ ಮಾನವನ ಅತಿಯಾಸೆ ಮತ್ತು ಯಾಂತ್ರಿಕ ಜೀವನ ಶೈಲಿಯಿಂದಾಗಿ ಪ್ರಕೃತಿ ಸಂಪೂರ್ಣವಾಗಿ ತಪ್ಪಿಹೋಗಿದೆ. ಅರಣ್ಯ ನಾಶ ಮತ್ತು ವಾಯು ಮಾಲಿನ್ಯದಿಂದಾಗಿ ಭೂಮಿಯ ಉಷ್ಣಾಂಶ ದಿನದಿಂದ ದಿನಕ್ಕೆ ಏರುತ್ತಿದೆ. ಜಾಗತಿಕ ಮಟ್ಟದಲ್ಲಿ ತಾಪಮಾನದ ಸಮಸ್ಯೆ ದಿನದಿಂದ ದಿನಕ್ಕೆ ದೊಡ್ಡದಾಗಿ ಋತುಮಾನಗಳಲ್ಲಿ ತೀವ್ರ ಏರುಪೇರಾಗುತ್ತಿದೆ. ಅಕಾಲಿಕ ಮಳೆ, ಭೀಕರ ಬರಗಾಲಗಳು ಸೃಷ್ಟಿಯಾಗುತ್ತಿವೆ. ಈ ವರ್ಷ ರೈತರು ಮಳೆರಾಯನತ್ತ ಮುಖ ಮಾಡಿದ್ದಾರೆ. ಬರಗಾಲ ಬರತ್ತದೋ ಎನ್ನುವ ಭಯಕ್ಕೆ ಕಾರಣವಾಗಿದೆ. ಇದೆಲ್ಲವೂ ಒಂದು ಕಡೆಯಾದರೆ ಇನ್ನೊಂದು ಕಡೆ ನಿಲ್ಲದ ಪ್ಲಾಸ್ಟಿಕ್ ರಾದ್ದಾಂತ. ಒಮ್ಮೆ ಬಳಸಿ ಬಿಸಾಡುವ ಪ್ಲಾಸ್ಟಿಕ್ ಬ್ಯಾನ್ ಮಾಡಿದ್ದರೂ ಅದರ ಪ್ರಭಾವ ಕಡಿಮೆಯಾಗುತ್ತಿಲ್ಲ. ಇದು ಮಣ್ಣಿನಲ್ಲಿ ಕರಗದೆ ಫಲವತ್ತತೆಯನ್ನು ನಾಶ ಮಾಡುವುದರ ಜಿತೆಗೆ, ಮೂಕ ಪ್ರಾಣಿಗಳ ಜೀವಕ್ಕೂ ಕುತ್ತು ತರುತ್ತಿದೆ. ಕೈಗಾರಿಕೆಗಳ ರಾಸಾಯನಿಕ ತ್ಯಾಜ್ಯ ಮತ್ತು ವಾಹನಗಳ ದಟ್ಟ ಹೊಗೆಯಿಂದಾಗಿ ಕುಡಿಯುವ ನೀರು ಮತ್ತು ಉಸಿರಾಡುವ ಗಾಳಿ ವಿಷಪೂರಿತವಾಗುತ್ತಿದ್ದು, ಮಾರಕ ರೋಗಗಳ ಹುಟ್ಟಿಗೆ, ಜೀವ ಸಂಕುಲದ ನಾಶಕ್ಕೆ ನಾಂದಿಯಾಗುತ್ತಿವೆ.
ಅಭಿವೃದ್ಧಿ ಮತ್ತು ಐಶಾರಾಮಿ ಬೇಕು ಹಾಗಂತ ಮರಣ ಮೃದಂಗಕ್ಕೆ ಹತ್ತಿತವಾಗುವಷ್ಟು ಅದಕ್ಕೆ ಆಪ್ತವಾಗಬಾರದು. ಈಗ ಜಾಗೃತಗೊಳ್ಳಬೇಕಾದ ಸಮಯ, ಸಂಕಷ್ಟದಿಂದ ತಪ್ಪಿಸಿಕೊಳ್ಳುವುದು ಮಾತ್ರವಲ್ಲ, ಪರಿಸರವನ್ನು ರಕ್ಷಿಸುವ ಸಮಯ. ಪಕೃತಿ ರಕ್ಷಣೆ ಕೇವಲ ಸರ್ಕಾರ ಅಥವಾ ಸಂಘ-ಸಂಸ್ಥೆಗಳ ಕಾರ್ಯಯಲ್ಲ, ಪ್ರತಿಯೊಬ್ಬ ನಾಗರಿಕನೂ ತನ್ನ ದೈನಂದಿನ ಜೀವನದಲ್ಲಿ ಸಣ್ಣ ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ದೊಡ್ಡ ಬದಲಾವಣೆಗೆ ಬುನಾದಿ ಹಾಕಬೇಕಿದೆ. ಕೇವಲ ಜೂನ್ 5 ರಂದು ಗಿಡ ನೆಟ್ಟು ಫೋಟೋ ತೆಗೆಸಿಕೊಳ್ಳುವುದನ್ನು ಬಿಟ್ಟು, ಪ್ರತಿ ಮನೆಯ ಮುಂದೆಯೂ ಕನಿಷ್ಠ ಒಂದು ಗಿಡವನ್ನು ನೆಟ್ಟು ಪೋಷಿಸುವ ಹವ್ಯಾಸ ಬೆಳೆಸಿಕೊಳ್ಳಬೇಕು. ಮರ ಬೆಳೆಸುವ ಜಾಗೃತಿ ಮೂಡಿಸಲೆಂದೇ ಐಪಿಎಲ್ ನಲ್ಲಿ ಡಾಟ್ ಬಾಲ್ ಗಳಿಗೆ ಸಸಿ ನೆಡುವ ಯೋಜನಾ ಕಾರ್ಯವನ್ನು ಕ್ರಿಕೇಟ್ ಸಂಸ್ಥೆ ಮಾಡಿಕೊಂಡಿದೆ. ಲಕ್ಷಾಂತರ ಅಭಿಮಾನಿಗಳು ಕ್ರಿಕೆಟ್ ನೋಡಿ ಕುಣಿದು ಕುಪ್ಪಳಿಸಿ ಮನೆ ಸೇರುತ್ತಾರೆ ವಿನಃ ಸಸಿ ನೆಡುವ ಮನಸ್ಸು ಮಾಡುವುದಿಲ್ಲ. ಇನ್ನು ಮನೆಯ ಕಸವನ್ನು ಎಲ್ಲೆಂದರಲ್ಲಿ ಎಸೆಯದೆ ಹಸಿ ಕಸ ಮತ್ತು ಒಣ ಕಸವಾಗಿ ವಿಂಗಡಿಸಿ ವಿಲೇವಾರಿ ಮಾಡಬೇಕು. ವಸ್ತುಗಳ ಮರುಬಳಕೆಯನ್ನು ರೂಡಿಸಿಕೊಳ್ಳಬೇಕು.
"ಪರಿಸರ ಉಳಿದರೆ ಮಾತ್ರ ಮಾನವಕುಲದ ಉಳಿವು ಸಾಧ್ಯ" ಎಂಬ ಮಾತು ಕಹಿಯಾದರೂ ಅಷ್ಟೇ ಸತ್ಯವಾದದು. ಪ್ರಕೃತಿಯನ್ನು ನಾವು ಗೌರವಿಸಿದರೆ, ಪ್ರಕೃತಿ ನಮ್ಮನ್ನು ಪೋಷಿಸುತ್ತದೆ. ನಮ್ಮ ಮುಂದಿನ ಪೀಳಿಗೆಗೆ ನಾವು ಕೋಟ್ಯಂತರ ರೂಪಾಯಿ ಆಸ್ತಿ ಮಾಡದಿದ್ದರೂ ಪರವಾಗಿಲ್ಲ, ಆದರೆ ಅವರು ನೆಮ್ಮದಿಯಾಗಿ ಬದುಕಲು ಶುದ್ಧವಾದ ಹಸಿರು ತುಂಬಿದ ಪರಿಸರವನ್ನು ಕೊಡುಗೆಯಾಗಿ ನೀಡಲು ಸಿದ್ಧರಾಗೋಣ. ಈ ನಿಟ್ಟಿನಲ್ಲಿ ನಾವೆಲ್ಲರೂ ಒಟ್ಟಾಗಿ ಶ್ರಮಿಸೋಣ. ಪರಿಸರವನ್ನು ಪೂಜಿಸೋಣ.



