ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವಾಕಾಂಕ್ಷಿಗಳ ಪಟ್ಟಿ ಕೊನೆ ಕ್ಷಣದಲ್ಲಿ ಬದಲಾದ ವಿಚಾರ ಹಾಗೂ ಪಕ್ಷದ ಒಳಗಿನ ಗೊಂದಲಗಳ ಕುರಿತು ಹೊಸ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ದಾವಣಗೆರೆಯ ಶಾಸಕ ಎಸ್ಎಸ್ ಮಲ್ಲಿಕಾರ್ಜುನ್ ಸ್ಪಷ್ಟನೆ ನೀಡಿದ್ದಾರೆ.
ಪಟ್ಟಿಯಲ್ಲಿ ಕೊನೆ ಕ್ಷಣದಲ್ಲಿ ಯಾಕೆ ಬದಲಾವಣೆ ಆಯ್ತು ಎಂಬುದು ನನಗೆ ಗೊತ್ತಿಲ್ಲ. ಮುಖ್ಯಮಂತ್ರಿಗಳು ನಿನಗೆ ಅವಕಾಶ ನೀಡಲಾಗಿದೆ, ನೀನು ಬಾ ಎಂದು ಕರೆದರು, ಹಾಗಾಗಿ ಬಂದಿದ್ದೇನೆ. ಮಂಕಾಳು ವೈದ್ಯ ಅವರ ಹೆಸರು ತಪ್ಪಾಗಿ (ಬೈ ಮಿಸ್ಟೇಕ್) ಬಂದಿತ್ತು ಎಂದು ತಿಳಿಸಿದರು.
ಮಂತ್ರಿ ಸ್ಥಾನ ನೀಡದಿದ್ದರೆ ನೀವು ರಾಜೀನಾಮೆ ನೀಡುವ ಬೆದರಿಕೆ ಹಾಕಿದ್ರಾ ಎಂಬ ಮಾಧ್ಯಮಗಳ ಪ್ರಶ್ನೆಗೆ, ಸಚಿವ ಸ್ಥಾನಕ್ಕಾಗಿ ನಾನು ಯಾವುದೇ ರಾಜೀನಾಮೆ ಬೆದರಿಕೆ ಹಾಕಿಲ್ಲ. ಈ ಕುರಿತು ನನ್ನ ಬಳಿ ಯಾವುದೇ ಚರ್ಚೆಯೂ ಆಗಿಲ್ಲ ಎಂದು ಹೇಳಿದರು.
ನಮ್ಮ ಜಿಲ್ಲೆ ಮತ್ತು ಜಾತಿಯ ಸಮೀಕರಣವನ್ನು ಪರಿಗಣಿಸಿ ನನಗೆ ಈ ಅವಕಾಶ ನೀಡಿದ್ದಾರೆ. ಕಾಂಗ್ರೆಸ್ ಸರ್ಕಾರದಲ್ಲಿ ಲಿಂಗಾಯತರು ಸೇರಿದಂತೆ ಎಲ್ಲಾ ಸಮುದಾಯಗಳಿಗೂ ಸಮಾನ ಪಾಲು ಮತ್ತು ಪ್ರಾತಿನಿಧ್ಯ ನೀಡಲಾಗಿದೆ ಎಂದರು.
ಪಕ್ಷದಲ್ಲಾಗಿರುವ ಅಸಮಾಧಾನ ಅಥವಾ ಲಿಸ್ಟ್ ಬದಲಾವಣೆ ವಿಚಾರಗಳ ಬಗ್ಗೆ ನನಗೆ ಸ್ಪಷ್ಟ ಮಾಹಿತಿಯಿಲ್ಲ. ಈಗ ಹೋಗಿ ನೋಡಬೇಕಿದೆ. ಏನೇ ಗೊಂದಲಗಳಿದ್ದರೂ ಹಿರಿಯ ನಾಯಕರು ಹಾಗೂ ಸಿಎಂ ಎಲ್ಲವನ್ನೂ ಸರಿಪಡಿಸಲಿದ್ದಾರೆ. ಸಿಎಂ ಅವರನ್ನು ಭೇಟಿಯಾಗಿ ಮುಂದಿನ ಹೆಜ್ಜೆ ಇಡುತ್ತೇನೆ ಎಂದು ತಿಳಿಸಿದರು.

