ಚಿಕ್ಕೋಡಿ: ತಾಲೂಕಿನ ಖಡಕಲಾಟ ಗ್ರಾಮದಲ್ಲಿ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನನ್ನು (Husband) ಕೊಲೆಗೈದು ಕಥೆ ಕಟ್ಟಿದ್ದ ಖತರನಾಕ್ ಪತ್ನಿ ಹಾಗೂ ಪ್ರೀಯಕರನನ್ನು 6 ತಿಂಗಳ ಬಳಿಕ ಪೊಲೀಸರು ಬಂಧಿಸಿದ್ದಾರೆ.
ರಾಘು ಗಾವಡೆ (40) ಹೆಂಡತಿಯಿಂದಲೇ ಕೊಲೆಯಾದ ದುರ್ದೈವಿ. ರಾಘು ಗಾವಡೆ ಕುರಿ ಕಾಯುವ ಕೆಲಸ ಮಾಡಿಕೊಂಡಿದ್ದ. ಈತನನ್ನು ಸಂಚು ರೂಪಿಸಿ ಬಂಗಾರಿ ಗಾವಡೆ ಹಾಗೂ ರಾಮಾ ರಾಣ ಇಬ್ಬರು ಸೇರಿ ಕೊಲೆಗೈದಿದ್ದರು. ಬಳಿಕ ಹೊಲದಲ್ಲಿ ಶವವನ್ನು ಹೂತು ಹಾಕಿದ್ದರು.
ಆರೋಪಿ ರಾಘು ಗಾವಡೆ ಸಹೋದರ ಸಂಬಂಧಿಯಾಗಿದ್ದ. ಆತನ ಜೊತೆ ಆರೋಪಿ ಬಂಗಾರಿ ಅಕ್ರಮ ಸಂಬಂಧ ಹೊಂದಿದ್ದಳು. ಇದಕ್ಕೆ ಅಡ್ಡಿಯಾಗಿದ್ದ ಗಂಡನನ್ನು ಇಬ್ಬರು ಸೇರಿ ಹತ್ಯೆ ಮಾಡಿದ್ದರು. ಬಳಿಕ ಗಂಡ ಕುರಿ ಕಾಯಲು ಬೇರೆ ಜಿಲ್ಲೆಗೆ ಹೋಗಿದ್ದಾನೆ ಎಂದು ಮನೆಯಲ್ಲಿ ನಂಬಿಸಿದ್ದರು.
ಹತ್ಯೆಯಾದ ರಾಘುವಿನ ಅಣ್ಣ ಲಘಮಣ್ಣ ಹಾಗೂ ಹಿರಿಯರು ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಕುಟುಂಬಸ್ಥರು ಪೋಲಿಸ್ ಠಾಣೆಗೆ ತೆರಳಿ ಪ್ರಕರಣ ದಾಖಲಿಸಿದ್ದಾರೆ. ತಕ್ಷಣ ಪೊಲೀಸರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

