ಬಾಗಲಕೋಟೆ: ಚಲಿಸುತ್ತಿದ್ದಾಗ ಟೈರ್ ದಿಢೀರ್ ಬ್ಲಾಸ್ಟ್ ಆಗಿ, ಚಾಲಕನ ನಿಯಂತ್ರಣ ತಪ್ಪಿದ ಟ್ರಕ್ ಸರ್ವಿಸ್ ರಸ್ತೆಗೆ ನುಗ್ಗಿ ಕಾರಿನ ಮೇಲೆ ಪಲ್ಟಿಯಾದ ಘಟನೆ ಇಳಕಲ್ ಸಮೀಪದ ರಾಷ್ಟ್ರೀಯ ಹೆದ್ದಾರಿಯ ನವಗ್ರಹ ಡಾಬಾ ಬಳಿ ನಡೆದಿದೆ.
ಆಗಸ್ಟ್ 29ರ ರಾತ್ರಿ ಸುಮಾರು 11 ಗಂಟೆಯ ಸುಮಾರಿಗೆ ಈ ಭೀಕರ ಅಪಘಾತ ಸಂಭವಿಸಿದೆ. ಬಾಗಲಕೋಟೆ ಜಿಲ್ಲೆಯ ಹುನಗುಂದದಿಂದ ಕೊಪ್ಪಳದ ಕುಷ್ಟಗಿ ಮಾರ್ಗವಾಗಿ ಹೊರಟಿದ್ದ ಗುಜರಾತ್ ಮೂಲದ ಲಾರಿಯ ಟೈರ್ ಬ್ಲಾಸ್ಟ್ ಆಗಿದೆ.
ಪರಿಣಾಮ ನಿಯಂತ್ರಣ ಕಳೆದುಕೊಂಡ ಟ್ರಕ್ ಸರ್ವಿಸ್ ರಸ್ತೆಯಲ್ಲಿದ್ದ ಹನಮಸಾಗರ ಪಟ್ಟಣದ ಕಾರಿನ ಮೇಲೆ ಉರುಳಿಬಿದ್ದಿದೆ. ಕಾರಿನಲ್ಲಿದ್ದವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಟ್ರಕ್ ಪಲ್ಟಿಯಾದ ರಭಸಕ್ಕೆ ಕಾರು ಹಾಗೂ ಲಾರಿ ಎರಡರ ಡೀಸೆಲ್ ಟ್ಯಾಂಕ್ ಒಡೆದು ತೈಲ ಸೋರಿಕೆಯಾಗತೊಡಗಿತು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ರಸ್ತೆಯ ಮೇಲೆ ನೀರು ಸಿಂಪಡಿಸಿ ಯಾವುದೇ ಬೆಂಕಿ ದುರಂತ ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡರು.
ಬಳಿಕ ಮುಂಜಾನೆ ಕ್ರೇನ್ ಸಹಾಯದಿಂದ ಕಾರಿನ ಮೇಲೆ ಬಿದ್ದಿದ್ದ ಟ್ರಕ್ ತೆರವುಗೊಳಿಸಲಾಯಿತು. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.




