ಯಾದಗಿರಿ: ಗಣೇಶನ ಮೆರವಣಿಗೆ ವೇಳೆ ಎರಡು ಗುಂಪುಗಳ ನಡುವೆ ಗಲಾಟೆಯಾಗಿ, ಬಳಿಕ ಮಾರಾಮಾರಿಯಾಗಿರುವ ಘಟನೆ ಯಾದಗಿರಿ ನಗರದ ದುರ್ಗಾದೇವಿ ಮಂದಿರದ ಬಳಿ ನಡೆದಿದೆ. ಈ ಸಂಬಂಧ ಇದೀಗ 19 ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಗಣೇಶೋತ್ಸವ ಮೆರವಣಿಗೆ ವೇಳೆ ಒಂದು ಗುಂಪಿನ ಯುವಕನ ಮೇಲೆ ಬೈಕ್ ಹಾದುಹೋಗಿದೆ. ಆಗ ಪರಸ್ಪರ ಮಾತಿಗೆ ಮಾತು ಬೆಳೆದು ಗಲಾಟೆ ಶುರುವಾಗಿದೆ. ಬಳಿಕ `ನಮ್ಮ ಏರಿಯಾದಲ್ಲಿ ಗಣೇಶ ಮೂರ್ತಿಯನ್ನು ಹೇಗೆ ಪ್ರತಿಷ್ಠಾಪನೆ ಮಾಡ್ತೀರಾ ನೋಡ್ತೀವಿ, ನಾವು ಹೇಳಿದಂತೆಯೇ ನಡೆಯಬೇಕು’ ಎಂದು ಮತ್ತೊಂದು ಗುಂಪು ಬೆದರಿಕೆ ಹಾಕಿ, ಕಿರಿಕ್ ಮಾಡಿದೆ.
ಮಾತು ತಾರಕಕ್ಕೇರಿ ಕಲ್ಲುತೂರಾಟ ಹಾಗೂ ದೊಣ್ಣೆಯಿಂದ ಮಾರಾಮಾರಿ ನಡೆದಿದೆ. ಘಟನೆಯಲ್ಲಿ ಮೂವರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಯಾದಗಿರಿ ನಗರ ಪೊಲೀಸ್ ಠಾಣೆಯಲ್ಲಿ 19 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
ಸದ್ಯ ಘಟನಾ ಸ್ಥಳದಲ್ಲಿ ಬಿಗುವಿನ ವಾತಾವರಣವಿದ್ದು, ಯಾವುದೇ ಅಹಿತಕರ ಘಟನೆಗಳು ನಡೆದಂತೆ ಮುನ್ನೆಚ್ಚರಿಕೆಗಾಗಿ ಸ್ಥಳದಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ.
