ಬೆಂಗಳೂರು: ಹೋಬಳಿಗೊಂದು ವಸತಿ ಶಾಲೆ ನಿರ್ಮಾಣಕ್ಕೆ 650 ಕೋಟಿ ಮೀಸಲು ಇಡಲಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಮುನಿಯಪ್ಪ ತಿಳಿಸಿದರು.
ವಿಧಾನಸೌಧದಲ್ಲಿ ನಡೆದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಉದ್ಘಾಟನೆ ಮಾಡಿ ಮಾತಾಡಿದ ಅವರು, ಯುವಕರೇ ಈ ದೇಶದ ಶಕ್ತಿ ದೇಶದ ಪ್ರಜಾಪ್ರಭುತ್ವವನ್ನು ಉಳಿಸಲು ಮತ್ತು ಬಾಬಾಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರು ನೀಡಿದ ಸಂವಿಧಾನದ ಮೌಲ್ಯಗಳನ್ನು ರಕ್ಷಿಸಲು ಯುವಪೀಳಿಗೆಯ ಜಾಗೃತಿ ಅತ್ಯಂತ ಮಹತ್ವದ್ದು ಎಂದರು.
ಯುವ ಸಂಸತ್ ಹಾಗೂ ಚರ್ಚಾ ಸ್ಪರ್ಧೆಗಳಂತಹ ವೇದಿಕೆಗಳ ಮೂಲಕ ಯುವಜನರಲ್ಲಿ ಸಾಂವಿಧಾನಿಕ ಅರಿವು ಮೂಡಿಸುವ ಕಾರ್ಯ ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಗ್ರಾಮೀಣ ಭಾಗದ ಬಡ ಹಾಗೂ ಕೂಲಿ ಕಾರ್ಮಿಕರ ಮಕ್ಕಳಿಗೆ ಸಮಾನ, ಗುಣಮಟ್ಟದ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕೈಗೊಂಡ ವಸತಿ ಶಾಲೆಗಳ ಕ್ರಾಂತಿ ಮಹತ್ವದ ಫಲಿತಾಂಶ ನೀಡುತ್ತಿದೆ. ರಾಜ್ಯದ 874 ವಸತಿ ಶಾಲೆಗಳಲ್ಲಿ 2.23 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಲಿಯುತ್ತಿದ್ದು, ಶೇ. 95 ರಿಂದ 99 ರಷ್ಟು ಅತ್ಯುನ್ನತ ಫಲಿತಾಂಶ ದಾಖಲಿಸುವ ಮೂಲಕ ಶೈಕ್ಷಣಿಕ ಗುಣಮಟ್ಟವನ್ನು ಸಾಬೀತುಪಡಿಸಿದ್ದಾರೆ ಎಂದು ತಿಳಿಸಿದರು.
ಪ್ರತಿ ಹೋಬಳಿಗೂ ಒಂದು ವಸತಿ ಶಾಲೆ ನಿರ್ಮಿಸುವ ಗುರಿಯನ್ನು ಸಂಪೂರ್ಣಗೊಳಿಸಲು ಈಗಾಗಲೇ 660 ಕೋಟಿ ರೂ. ಅನುದಾನ ಮೀಸಲಿಡಲಾಗಿದ್ದು, ಬಾಕಿ ಉಳಿದಿರುವ 65 ರಿಂದ 70 ಶಾಲೆಗಳಿಗೆ ಶೀಘ್ರವೇ ಅನುಮೋದನೆ ನೀಡುವಂತೆ ಮುಖ್ಯಮಂತ್ರಿಗಳಿಗೆ ಕೋರಲಾಗಿದೆ ಎಂದರು.
ಇದೇ ವೇಳೆ ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿರುವ 2,011 ಹಾಸ್ಟೆಲ್ಗಳಲ್ಲಿ ವ್ಯಾಸಂಗ ಮಾಡುತ್ತಿರುವ 2.22 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಶೇ.86ರಷ್ಟು ಫಲಿತಾಂಶ ಸಾಧಿಸುತ್ತಿದ್ದಾರೆ. ದಶಕಗಳಷ್ಟು ಹಳೆಯದಾದ ಈ ಹಾಸ್ಟೆಲ್ಗಳನ್ನು ಸಮಗ್ರವಾಗಿ ನವೀಕರಿಸಿ, ವಸತಿ ಶಾಲೆಗಳ ಮಾದರಿಯಲ್ಲೇ ಸುಸಜ್ಜಿತ ಶೌಚಾಲಯ ಹಾಗೂ ಪೂರಕ ಪರಿಸರ ಕಲ್ಪಿಸಿದರೆ ಈ ವಿದ್ಯಾರ್ಥಿಗಳ ಸಾಧನೆಯೂ ಶೇ.99ಕ್ಕೆ ತಲುಪಲು ಸಾಧ್ಯವಿದೆ. ಜೊತೆಗೆ, ಕಳೆದ 20 ವರ್ಷಗಳಿಂದ ಸೇವಾ ಬಡ್ತಿ ಕಾಣದೆ ಉಳಿದಿರುವ 540 ವಾರ್ಡನ್ಗಳು ಮತ್ತು ಅಡುಗೆ ಸಿಬ್ಬಂದಿಗೆ ಸೂಕ್ತ ಬಡ್ತಿ ನೀಡಿ ನ್ಯಾಯ ಒದಗಿಸಬೇಕಾದ ಅಗತ್ಯವಿದೆ ಅಂತ ತಿಳಿಸಿದರು.
ಮಹಾತ್ಮ ಗಾಂಧೀಜಿಯವರ ಆಶಯದಂತೆ ನಾಳಿನ ಭವ್ಯ ಭಾರತವನ್ನು ನಿರ್ಮಿಸುವ ಹೊಣೆ ಇಂದಿನ ಯುವಕರ ಹೆಗಲ ಮೇಲಿದೆ. ಶಿಕ್ಷಕರ ಸೂಕ್ತ ಮಾರ್ಗದರ್ಶನ ಮತ್ತು ಉತ್ತಮ ಶೈಕ್ಷಣಿಕ ವಾತಾವರಣದ ಬಲದಿಂದ ರಾಜ್ಯದ ವಿದ್ಯಾರ್ಥಿಗಳು ದೇಶದಲ್ಲೇ ಮುಂಚೂಣಿಗೆ ಬರಲಿದ್ದು, ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗಟ್ಟಿಗೊಳಿಸುವಲ್ಲಿ ಯುವ ಸಮೂಹ ದಿಟ್ಟ ಹೆಜ್ಜೆ ಇಡಬೇಕಿದೆ ಎಂದು ಕರೆ ನೀಡಲಾಯಿತು ಎಂದರು.
ಅಂದು ನಾನು ಕೇಂದ್ರದಲ್ಲಿ ಸಚಿವನಿದ್ದಾಗ ಸಮಾಜ ಕಲ್ಯಾಣ ಇಲಾಖೆಯ ಸಲಹಾ ಸಮಿತಿ ಸದಸ್ಯನಾಗಿ ಹಲವಾರು ಸಲಹೆಗಳನ್ನು ನೀಡಿ ಗ್ರಾಮೀಣ ಮಟ್ಟದಲ್ಲಿ ವಸತಿ ಶಾಲೆಗಳ ಆರಂಭಿಸಿವ ಉದ್ದೇಶದ ಫಲ ಇಂದು ಉತ್ತಮ ಗುಣಮಟ್ಟದ ಶಿಕ್ಷಣವನ್ನು ಪಡೆಯಲು ವಸತಿ ಶಾಲೆಗಳು ಸಹಕಾರಿಯಾಗಿವೆ ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರವರ ಧೃಡ ಸಂಕಲ್ಪದಿಂದಾಗಿ ಹೋಬಳಿಗೊಂದು ವಸತಿ ಶಾಲೆ ನಿರ್ಮಾಣ ಮಾಡಿದ ಹಿನ್ನಲೆಯಲ್ಲಿ ಗ್ರಾಮೀಣ ಮಟ್ಟದಲ್ಲಿ ಉತ್ತಮ ಶಿಕ್ಷಣವನ್ನು ಪಡೆಯಲು ಸಹಕಾರಿಯಾಗಿದೆ ಎಂದರು.
ಯುವ ಸಂಸತ್ತು ಕಾರ್ಯಕ್ರಮಕ್ಕೆ ಇಂದು ಎಲ್ಲಾ ಜಿಲ್ಲೆಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಚಾಲನೆ ನೀಡಿದ್ದು ತಾಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟಕ್ಕೆ ಪ್ರತಿ ವಿಧಾನಸಭಾ ಕ್ಷೇತ್ರದಿಂದ ಒಬ್ಬರಂತೆ ಆಯ್ಕೆಯಾದ 224 ವಿಧ್ಯಾರ್ಥಿಗಳನ್ನೊಳಗೊಂಡ ವಿದ್ಯಾರ್ಥಿಗಳ ಚರ್ಚಾ ಕಾರ್ಯ್ರಕಮವನ್ನು ನವೆಂಬರ್ 26 ರಂದು ಆಯೋಜಿಸಲಾಗುವುದು ಎಂದರು.
