ಹಾವೇರಿ: ಜಿಲ್ಲೆಯ ಆಹಾರ ಸಂಸ್ಕರಣಾ ಘಟಕಗಳ ಮೇಲೆ ಆಹಾರ ಸುರಕ್ಷತಾ ಅಧಿಕಾರಿಗಳು ಹಾಗೂ ರಾಣೇಬೆನ್ನೂರು ತಹಶೀಲ್ದಾರ್ ನೇತೃತ್ವದ ತಂಡ ದಾಳಿ ನಡೆಸಿದೆ. ಈ ವೇಳೆ ಒಟ್ಟು 1,033 ಕೆಜಿ ಆಹಾರ ಪದಾರ್ಥಗಳನ್ನು ಸೀಜ್ ಮಾಡಲಾಗಿದೆ.
ರಾಣೇಬೆನ್ನೂರು ತಾಲೂಕಿನ ಕೃಷ್ಣಾಪುರ, ತರೇದಹಳ್ಳಿ ಹಾಗೂ ಹನುಮನಹಳ್ಳಿ ಗ್ರಾಮದಲ್ಲಿರುವ ಆಹಾರ ಸಂಸ್ಕರಣಾ ಘಟಕಗಳ ಮೇಲೆ ಇತ್ತೀಚೆಗೆ ದಿಢೀರ್ ತಪಾಸಣೆ ನಡೆಸಲಾಯಿತು.
ಈ ವೇಳೆ ಆಹಾರ ಪದಾರ್ಥಗಳನ್ನು ಸರಿಯಾಗಿ ಪ್ಯಾಕ್ ಮಾಡದೆ ಸಾಗಣೆ ಮಾಡುತ್ತಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ. ಹೀಗಾಗಿ ಸ್ಥಳ ಮಹಜರು ನಡೆಸಿ, ಸಂಬಂಧಿಸಿದ ಘಟಕಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ.
ಕೃಷ್ಣಾಪುರ ಮತ್ತು ತರೇದಹಳ್ಳಿ ಗ್ರಾಮದ ವೆಂಕಟೇಶ್ವರ ಹ್ಯಾಚರೀಸ್ ಪ್ರೈವೇಟ್ ಲಿಮಿಟೆಡ್ನಿಂದ 382 ಕೆಜಿ ಆಹಾರ ಪದಾರ್ಥಗಳನ್ನು ಸೀಜ್ ಮಾಡಲಾಗಿದೆ. ಹನುಮನಹಳ್ಳಿ ಗ್ರಾಮದ ವೆಸ್ಟ್ವಿಂಡ್ ಫುಡ್ ಪ್ರೊಸೆಸಿಂಗ್ನಿಂದ 651 ಕೆಜಿ ಆಹಾರ ಪದಾರ್ಥಗಳನ್ನು ವಶಕ್ಕೆ ಪಡೆಯಲಾಗಿದೆ.
ಒಟ್ಟು 1,033 ಕೆಜಿ ಆಹಾರ ಪದಾರ್ಥಗಳನ್ನು ಸೀಜ್ ಮಾಡಲಾಗಿದ್ದು, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006ರ ಅನ್ವಯ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಂಬಂಧಿಸಿದ ಆಹಾರ ಉದ್ದಿಮೆದಾರರು ನೋಟಿಸ್ಗೆ ನೀಡುವ ಉತ್ತರವನ್ನು ಆಧರಿಸಿ ಮುಂದಿನ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಉಪ ವಿಭಾಗಾಧಿಕಾರಿ ಹಾಗೂ ಪ್ರಭಾರ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಅಂಕಿತ ಅಧಿಕಾರಿ ಕುಮಾರಿ ಕಲ್ಯಾಣಿ ಕಾಂಬಳೆ ತಿಳಿಸಿದ್ದಾರೆ.




