ಬೆಳಗಾವಿ: ಶಿವಂ ಅಸೋಸಿಯೇಟ್ ಕಂಪನಿ ಮಾಲೀಕ ಶಿವಾನಂದ ನೀಲಣ್ಣವರ್ ವಿರುದ್ಧದ ಬಹುಕೋಟಿ ವಂಚನೆ ಕೇಸ್ಗೆ ಇಡಿ (ಜಾರಿ ನಿರ್ದೇಶನಾಲಯ) ಎಂಟ್ರಿಯಾಗಿದೆ.
ಮಂಗಳೂರು ಮತ್ತು ಗೋವಾದಿಂದ ಆಗಮಿಸಿದ ಇಡಿ ಅಧಿಕಾರಿಗಳ ತಂಡ ಬೆಳಗಾವಿಯ ಮೂರು ಕಡೆಗಳಲ್ಲಿ ದಾಳಿ ನಡೆಸಿದೆ. ಶಿವ ಬಸವನಗರದ ಎಂಎಸ್ ಟವರ್ನಲ್ಲಿರೋ ಅಪಾರ್ಟ್ಮೆಂಟ್ನಲ್ಲಿರುವ ಅವರ ನಿವಾಸ, ಬಡಕುಂದ್ರಿ ಗ್ರಾಮದಲ್ಲಿರುವ ನಿವಾಸ ಹಾಗೂ ಚಿಕ್ಕೋಡಿಯಲ್ಲಿರುವ ಪಾರ್ಟ್ನರ್ ಸುಭಾಷ್ ನಂದರಗಿಯ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಶಿವಾನಂದ ನೀಲಣ್ಣವರ್ ಹಾಗೂ ಪತ್ನಿ ಸಂಗೀತಾ ಇಬ್ಬರನ್ನೂ ಅಧಿಕಾರಿಗಳು ವಿಚಾರಣೆ ಮಾಡುತ್ತಿದ್ದಾರೆ.
ಶಿವಾನಂದ್ ವಿರುದ್ಧ 40,000 ಕ್ಕೂ ಹೆಚ್ಚು ಜನರಿಗೆ 4,500 ಕೋಟಿ ರೂ. ವಂಚನೆ ಮಾಡಿದ ಆರೋಪವಿದೆ. ಈ ಸಂಬಂಧ ಮೇ.15ರಂದು ಬೆಳಗಾವಿಯ ಮಾಳಮಾರುತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಸಿಐಡಿಗೆ ಕೇಸ್ ವರ್ಗಾವಣೆಯಾಗಿತ್ತು. ಈಗ ಸಿಐಡಿಯಿಂದ ನೀಲಣ್ಣವರ್ ಕೇಸ್ ತನಿಖೆ ನಡೆಯುತ್ತಿದೆ.
ಶಿವಾನಂದ್ ಆರ್ಬಿಐ ಅಥವಾ ಸೆಬಿಯಿಂದ ಯಾವುದೇ ಅನುಮೋದನೆಗಳಿಲ್ಲದೇ ಹೆಚ್ಚಿನ ಬಡ್ಡಿದರದ ಭರವಸೆ ನೀಡಿ, ಹೂಡಿಕೆದಾರರಿಂದ ಸಾವಿರಾರು ಕೋಟಿ ಹಣ ಸಂಗ್ರಹಿಸಿದ್ದ. ಈ ಆರೋಪದಲ್ಲಿ ಆತನ ಬಂಧನವಾಗಿತ್ತು. ಜು.13 ರಂದು ಆರೋಪಿ ಶಿವಾನಂದ್ಗೆ ಮೂರು ಲಕ್ಷದ ವೈಯಕ್ತಿಕ ಬಾಂಡ್ ಹಾಗೂ ದೇಶ ಬಿಟ್ಟು ಹೋಗದಂತೆ ಷರತ್ತು ವಿಧಿಸಿ 93ನೇ ಸಿಟಿ ಸಿವಿಲ್ & ಸೆಷನ್ಸ್ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿತ್ತು.

