ಬೆಳಗಾವಿ: ಕಡಲ ಸಾರಿಗೆ ಕಂಪನಿ ಹೆಸರಿನಲ್ಲಿ ನೌಕರಿ ಆಮಿಷ ತೋರಿಸಿ, ಯುವಕನಿಂದ 6.17 ಲಕ್ಷ ರೂ. ಜಮೆ ಮಾಡಿಸಿಕೊಂಡು ಮೋಸ ಮಾಡಿದ ಬಗ್ಗೆ ಜಿಲ್ಲಾ ಸೈಬರ್ ಅಪರಾಧಗಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸವದತ್ತಿ ತಾಲೂಕಿನ ಹೂಲಿ ಗ್ರಾಮದ ಸಿದ್ಧಾರೂಢ ಧಾರವಾಡ ಹಣ ಕಳೆದುಕೊಂಡ ಯುವಕ. ಇನ್ಸ್ಟಾಗ್ರಾಮ್ದಲ್ಲಿ ಕನ್ಸಲ್ಟನ್ಸಿ ಜಾಹೀರಾತಿನಲ್ಲಿ ಪ್ರತಿಷ್ಠಿತ ಕಡಲ ಸರಕು ಸಾಗಣೆ ಸಾರಿಗೆ ಕಂಪನಿಯಲ್ಲಿ ಮಾಸಿಕ 2.43 ಲಕ್ಷ ರೂ. ವೇತನದ ಉದ್ಯೋಗದ ಮಾಹಿತಿ ಇತ್ತು.
ಅಲ್ಲಿ ನೀಡಲಾದ ಮೊಬೈಲ್ ಸಂಖ್ಯೆಗೆ ಸಂಪರ್ಕಿಸಿದಾಗ, ಪ್ಯಾನ್ಕಾರ್ಡ್, ಆಧಾರ್ ಕಾರ್ಡ್ ವಾಟ್ಸಾಪ್ ಮೂಲಕ ಪಡೆದಿದ್ದರು. ಬಳಿಕ, ಉದ್ಯೋಗ ಭರವಸೆ ಪತ್ರ ಕಳುಹಿಸಿ, ವೀಸಾ, ಸೇವಾ ವೆಚ್ಚ, ವಿಮಾನ ಟಿಕೆಟ್ ವೆಚ್ಚದ ಹೆಸರಿನಲ್ಲಿ ಹಂತ ಹಂತವಾಗಿ 6,17,800 ರೂ. ಜಮೆ ಮಾಡಿಸಿಕೊಂಡು ಮೋಸ ಮಾಡಿದ್ದಾರೆಂದು ದೂರಿನಲ್ಲಿ ತಿಳಿಸಿದ್ದಾರೆ.

