ಉಡುಪಿ: ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ಶ್ರೀಕೃಷ್ಣ ದೇವರ ದರ್ಶನ ಪಡೆದರು. ಮಠದ ವತಿಯಿಂದ ಅಣ್ಣಾಮಲೈ ಅವರನ್ನು ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು.
ಕನಕ ನವಗ್ರಹ ಕಿಂಡಿಯ ಮೂಲಕ ಶ್ರೀಕೃಷ್ಣ ದೇವರ ದರ್ಶನ ಪಡೆದ ಅಣ್ಣಾಮಲೈ, ಬಳಿಕ ಶ್ರೀಮಠದ ಪ್ರಸಾದ ಸ್ವೀಕರಿಸಿದರು. ಈ ವೇಳೆ ಮಠದ ವತಿಯಿಂದ ಪ್ರಸಾದ ಹಾಗೂ ಕೃಷ್ಣದೇವರ ಭಾವಚಿತ್ರ ನೀಡಿ ಅವರನ್ನು ಗೌರವಿಸಲಾಯಿತು.
ಅಣ್ಣಾಮಲೈ ಅವರು ಈ ಹಿಂದೆ ಉಡುಪಿಯಲ್ಲಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ಹೀಗಾಗಿ ಅವರು ಮಠಕ್ಕೆ ಭೇಟಿ ನೀಡಿರುವ ಸುದ್ದಿ ತಿಳಿಯುತ್ತಿದ್ದಂತೆ ಅವರನ್ನು ಭೇಟಿಯಾಗಲು ಅನೇಕ ಅಭಿಮಾನಿಗಳು ಆಗಮಿಸಿದ್ದರು.
ಬಿಜೆಪಿಯನ್ನು ತೊರೆದು ‘ವೀ ದ ಲೀಡರ್ಸ್ ಮೂವ್ಮೆಂಟ್’ ಆರಂಭಿಸಿದ ಬಳಿಕ ಅಣ್ಣಾಮಲೈ ಉಡುಪಿಗೆ ನೀಡುತ್ತಿರುವ ಎರಡನೇ ಭೇಟಿ ಇದಾಗಿದೆ. ಈ ಹಿಂದೆ ಅವರು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೂ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದರು.
ಉಡುಪಿಯೊಂದಿಗೆ ಹಿಂದಿನ ಪೊಲೀಸ್ ಸೇವೆಯ ದಿನಗಳಿಂದಲೇ ಅಣ್ಣಾಮಲೈ ಅವರಿಗೆ ವಿಶೇಷ ನಂಟಿದ್ದು, ಅವರ ಭೇಟಿಯ ವೇಳೆ ಅಭಿಮಾನಿಗಳು ಹಾಗೂ ಸ್ಥಳೀಯರು ಆತ್ಮೀಯವಾಗಿ ಸ್ವಾಗತಿಸಿದರು.

