ಮಂಡ್ಯ: ಬಾಯ್ಲರ್ ಟ್ಯಾಂಕ್ ಹೊತ್ತೊಯ್ಯುತ್ತಿದ್ದ ಬೃಹತ್ ಲಾರಿಯೊಂದು ಮರಕ್ಕೆ ಡಿಕ್ಕಿಯಾಗಿ, ಬಾಯ್ಲರ್ ರಸ್ತೆಗೆ ಉರುಳಿಬಿದ್ದ ಘಟನೆ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಮುರುಕನಹಳ್ಳಿ ಸಮೀಪ ಮೈಸೂರು-ಚನ್ನರಾಯಪಟ್ಟಣ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ.
ರಾಜಸ್ಥಾನದಿಂದ ನಂಜನಗೂಡು ಕೈಗಾರಿಕಾ ಪ್ರದೇಶಕ್ಕೆ ಬಾಯ್ಲರ್ ಟ್ಯಾಂಕ್ ಅನ್ನು ಸಾಗಿಸಲಾಗುತ್ತಿತ್ತು. ಮುರುಕನಹಳ್ಳಿ ಬಳಿ ಬರುತ್ತಿದ್ದಂತೆ ಲಾರಿಯಲ್ಲಿದ್ದ (Lorry) ಬಾಯ್ಲರ್ ಟ್ಯಾಂಕ್ ರಸ್ತೆ ಬದಿಯ ಮರಕ್ಕೆ ತಗುಲಿದ ಪರಿಣಾಮ ಹೆದ್ದಾರಿಗೆ ಅಡ್ಡಲಾಗಿ ಉರುಳಿದೆ.
ಅಪಘಾತದಿಂದಾಗಿ ಮೈಸೂರು-ಚನ್ನರಾಯಪಟ್ಟಣ ರಾಜ್ಯ ಹೆದ್ದಾರಿಯಲ್ಲಿ ಕೆಲಕಾಲ ಸಂಪೂರ್ಣ ಸಂಚಾರ ಸ್ತಬ್ಧವಾಯಿತು. ಬೆಳಗಿನ ಜಾವದ ವೇಳೆಯಾಗಿದ್ದರಿಂದ ಕಚೇರಿಗೆ ತೆರಳುವವರು, ಸಾರ್ವಜನಿಕರು ಹಾಗೂ ಇತರೆ ವಾಹನ ಸವಾರರು ಸಂಚರಿಸಲಾಗದೆ ಪರದಾಡುವಂತಾಯಿತು.
ಈ ವೇಳೆ ಸ್ಥಳೀಯ ಜನರು ಬದಲಿ ಮಾರ್ಗದಲ್ಲಿ ಸಂಚರಿಸಲು ಮುಂದಾದರು. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಕೆ.ಆರ್ ಪೇಟೆ ಗ್ರಾಮಾಂತರ ಠಾಣೆಯ ಪೊಲೀಸರು, ಸ್ಥಳೀಯರ ನೆರವಿನಿಂದ ರಸ್ತೆಗೆ ಬಿದ್ದಿದ್ದ ಬಾಯ್ಲರ್ ಟ್ಯಾಂಕನ್ನ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.




