ಮಂಗಳೂರು: ಇಸ್ಲಾಂ ಧರ್ಮ ಶ್ರೇಷ್ಠ ಮತ್ತು ಮಠ-ಮಂದಿರಗಳಿಗೆ ಹೋಗಬಾರದು ಎಂಬ ಸಚಿವ ಬಸವರಾಜ ರಾಯರೆಡ್ಡಿ ಅವರ ಹೇಳಿಕೆಗೆ ಮಂಗಳೂರು ನಗರ ಉತ್ತರ ಕ್ಷೇತ್ರದ ಬಿಜೆಪಿ ಶಾಸಕ ಡಾ. ವೈ. ಭರತ್ ಶೆಟ್ಟಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಅವರನ್ನು ತಕ್ಷಣವೇ ಸಚಿವ ಸಂಪುಟದಿಂದ ಕೈಬಿಡಬೇಕು ಎಂದು ಆಗ್ರಹಿಸಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು, ಹೊಟ್ಟೆಪಾಡಿಗಾಗಿ ಬಗೆಬಗೆಯ ವೇಷ ಎಂಬ ಮಾತು ಕಾಂಗ್ರೆಸ್ ನಾಯಕರಿಗೆ ಸರಿಯಾಗಿ ಹೊಂದುತ್ತದೆ. ಕೇವಲ ಮತಕ್ಕಾಗಿ ಇವರು ಏನೆಲ್ಲಾ ನಾಟಕ ಮಾಡುತ್ತಾರೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಶಿಕ್ಷಣದ ಸುಧಾರಣೆ ಬಗ್ಗೆ ಗಮನಹರಿಸಬೇಕಾದ ಸಚಿವರು, ವೋಟ್ ಬ್ಯಾಂಕ್ಗಾಗಿ ಸ್ವಧರ್ಮಕ್ಕಿಂತ ಪರಧರ್ಮವೇ ಶ್ರೇಷ್ಠ ಎಂದು ಹೇಳಿ ಎಲ್ಲ ಧರ್ಮಗಳಿಗೂ ಅವಮಾನ ಮಾಡಿದ್ದಾರೆ ಎಂದು ಕಿಡಿಕಾರಿದರು.
ನಿಮಗೆ ಸಂಸ್ಕಾರ, ಸಂಸ್ಕೃತಿ ನೀಡಿದ್ದೇ ಹಿಂದೂ ಧರ್ಮ. ಇಷ್ಟೇ ಅಲ್ಲದೆ ಮತಾಂತರಗೊಳ್ಳುವ ಸ್ವಾತಂತ್ರ್ಯವನ್ನೂ ಹಿಂದೂ ಧರ್ಮವೇ ಕೊಟ್ಟಿದೆ. ಮತಾಂತರವಾದರೆ ಹಿಂದೂಗಳು ಕೊಲ್ಲಲು ಬರುವುದಿಲ್ಲ. ಹೀಗಿರುವಾಗ ಹಿಂದೂ ಧರ್ಮದಲ್ಲಿ ಹುಟ್ಟಿದ ನೀವು ಇಸ್ಲಾಂ ಧರ್ಮ ಶ್ರೇಷ್
ರಾಹುಲ್ ಗಾಂಧಿ, ಬಸವರಾಜ ರಾಯರೆಡ್ಡಿ ಹಾಗೂ ಪ್ರಿಯಾಂಕ್ ಖರ್ಗೆ ಅವರಿಗೆ ಭಗವದ್ಗೀತೆ, ವೇದಗಳು ಮತ್ತು ಹಿಂದೂ ಧರ್ಮದ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುವ ಧೈರ್ಯವಿದೆ. ಆದರೆ ಕುರಾನ್, ಬೈಬಲ್ ಅಥವಾ ಇತರ ಧರ್ಮಗಳ ಬಗ್ಗೆ ಹೀಗೆ ಮಾತನಾಡುವ ತಾಕತ್ತಿದೆಯೇ? ಚುನಾವಣೆ ಬಂದಾಗ ಶರ್ಟ್ ಮೇಲೆ ಜನಿವಾರ ಹಾಕುವ ರಾಹುಲ್ ಗಾಂಧಿ ಹಿಂಬಾಲಕರು ನೀವು. ಚುನಾವಣೆ ಸಮಯದಲ್ಲಿ ಮಠಗಳಿಗೆ ತೆರಳಿ ಸ್ವಾಮೀಜಿಗಳ ಕಾಲಿಗೆ ಅಡ್ಡಬಿದ್ದು ಸಾಷ್ಟಾಂಗ ನಮಸ್ಕಾರ ಹಾಕುತ್ತೀರಿ, ಚುನಾವಣೆ ಮುಗಿದ ಮೇಲೆ ಮಠ-ಮಂದಿರಗಳಿಗೆ ಹೋಗಲ್ಲ ಎನ್ನುತ್ತೀರಿ ಎಂದು ದೂರಿದರು.
ಸಮಾಜದಲ್ಲಿ ಇಂತಹ ವಿಷಬೀಜ ಬಿತ್ತುವ ವ್ಯಕ್ತಿ ಸಚಿವನಾಗಿ ಮುಂದುವರಿಯುವುದು ಸಮಾಜಕ್ಕೆ ಒಳ್ಳೆಯದಲ್ಲ. ಮುಖ್ಯಮಂತ್ರಿಗಳು ತಕ್ಷಣವೇ ರಾಯರೆಡ್ಡಿ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು ಅಥವಾ ಅವರೇ ಸ್ವಯಂಪ್ರೇರಿತರಾಗಿ ರಾಜೀನಾಮೆ ನೀಡಬೇಕು ಎಂದು ಭರತ್ ಶೆಟ್ಟಿ ಆಗ್ರಹಿಸಿದರು.




