ಚಿಕ್ಕಮಗಳೂರು: ಕೂಲಿ ವಿಚಾರವಾಗಿ ನಡೆದ ಗಲಾಟೆ ವೇಳೆ ಕಾರ್ಮಿಕರನ್ನು ಹೆದರಿಸಲು ಮಾಲೀಕ ಹಾರಿಸಿದ ಗುಂಡು ಮಗುವಿನ ತಲೆಗೆ ಹೊಕ್ಕು ಗಂಭೀರವಾಗಿ ಗಾಯಗೊಂಡ ಘಟನೆ ಮೂಡಿಗೆರೆ ತಾಲೂಕಿನ ಬಾಳೆಹಳ್ಳಿ ಗ್ರಾಮದಲ್ಲಿ ನಡೆದಿದೆ.
ಜಗದೀಶ್ ಗೌಡ ಗುಂಡು ಹಾರಿಸಿದ ತೋಟದ ಮಾಲೀಕ. ಈತನ ಮನೆಗೆ ಅಸ್ಸಾಂ ಮೂಲದ ಕಾರ್ಮಿಕರು ಕೆಲಸಕ್ಕೆ ಬಂದಿದ್ದರು. ಕಾರ್ಮಿಕರು 400 ರೂ. ಕೂಲಿ ಕೇಳಿದ್ದರು. ಆದರೆ ಜಗದೀಶ್ ಗೌಡ ಈಗ 350 ರೂ. ಕೊಡ್ತೀನಿ, ಆಮೇಲೆ 50 ರೂ. ಕೊಡ್ತೀನಿ ಎಂದು ತಿಳಿಸಿದ್ದ. ಇದೇ ವಿಚಾರಕ್ಕೆ ಕಾರ್ಮಿಕರು ಹಾಗೂ ಮಾಲೀಕನ ನಡುವೆ ಗಲಾಟೆಯಾಗಿದೆ.
ಈಗಲೇ 400 ರೂ. ಕೊಡಿ, ಇಲ್ಲ ಕೆಲಸ ಮಾಡಲ್ಲ ಎಂದು ಕಾರ್ಮಿಕರು ಹೊರಟಿದ್ದರು. ಈ ವೇಳೆ ಮಾತಿಗೆ ಮಾತು ಬೆಳೆದಿದೆ. ಅಲ್ಲದೇ ಕಾರ್ಮಿಕರಿಂದ ಮಾಲೀಕರ ಮೇಲೆ ಹಲ್ಲೆಗೆ ಯತ್ನ ನಡೆದಿದೆ ಎನ್ನಲಾಗಿದೆ. ಕಾರ್ಮಿಕರಿಗೆ ಹೆದರಿಸಲು ಹೋದಾಗ ತೋಟದ ಮಾಲೀಕ ಜಗದೀಶ್ ಗೌಡನಿಂದ ಮಿಸ್ ಫೈರ್ ಆಗಿದೆ. ಆಗ ಮಗುವಿನ ತಲೆಗೆ ಗುಂಡು ತಗುಲಿದೆ ಎಂದು ತಿಳಿದುಬಂದಿದೆ.
ಮಗುವಿಗೆ ಮೂಡಿಗೆರೆ ತಾಲೂಕು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ರವಾನಿಸಲಾಗಿದೆ. ಮಗುವಿನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.




