ಲಕ್ನೋ: ಪತಿಯನ್ನು ಕೊಂದು ನಾಟಕವಾಡಿದ ಹಂತಕಿಯರಾದ ಸೋನಂ, ಸಿಯಾ ಘಟನೆ ಮಾಸುವ ಮುನ್ನವೇ ಇದೀಗ ಉತ್ತರ ಪ್ರದೇಶದ ಆಗ್ರಾದಲ್ಲಿ ಬೆಚ್ಚಿಬೀಳಿಸುವ ಕೊಲೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ಪತ್ನಿಯೇ ತನ್ನ ಪತಿಯನ್ನು ಕೊಲೆ ಮಾಡಿ, ಶವವನ್ನು ಮನೆಯ ಬಾತ್ರೂಂ ನೆಲದಡಿ ಹೂತು, ಬಳಿಕ ಪತಿ ಕಾಣೆಯಾಗಿದ್ದಾನೆ ಎಂದು ನಾಟಕವಾಡಿದ ಘಟನೆ ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ.
ಘಟನೆ ನಡೆದು 45 ದಿನಗಳ ಬಳಿಕ ಪತ್ನಿ ರೂಬಿ ಶರ್ಮಾ ಪೊಲೀಸರ ಮುಂದೆ ಸತ್ಯ ಕಕ್ಕಿದ್ದು, ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ. ರೂಬಿ ತನ್ನ ಪತಿ ಸುರೇಂದ್ರ ಶರ್ಮಾ ಸುಮಾರು ಒಂದೂವರೆ ತಿಂಗಳ ಹಿಂದೆ ನಾಪತ್ತೆಯಾಗಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಳು. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದರು.
ತನಿಖೆ ನಡೆಯುತ್ತಿದ್ದ ಅವಧಿಯಲ್ಲಿ ರೂಬಿ ಕೂಡ ತನ್ನ ಪತಿಯನ್ನು ಹುಡುಕುವ ನೆಪದಲ್ಲಿ ಪೊಲೀಸರೊಂದಿಗೆ ಹುಡುಕಾಟದಲ್ಲಿ ಭಾಗಿಯಾಗುವಂತೆ ನಾಟಕವಾಡಿದ್ದಳು. ನೆರೆಹೊರೆಯವರ ಮುಂದೆ ಕಣ್ಣೀರು ಹಾಕುತ್ತಾ, ಪತಿ ಕಾಣೆಯಾಗಿರುವ ದುಃಖದಲ್ಲಿ ಮುಳುಗಿರುವಂತೆ ನಟಿಸಿ ಎಲ್ಲರ ಸಹಾನುಭೂತಿ ಗಳಿಸಲು ಪ್ರಯತ್ನಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಆದರೆ ಸುರೇಂದ್ರ ಶರ್ಮಾ ಅವರ ಸಹೋದರರಿಗೆ ರೂಬಿಯ ಹೇಳಿಕೆಗಳಲ್ಲಿ ಹಲವು ಅನುಮಾನಗಳು ಕಂಡುಬಂದವು. ಪತಿ ನಾಪತ್ತೆಯಾದ ದಿನದ ಬಗ್ಗೆ ಆಕೆ ನೀಡುತ್ತಿದ್ದ ಮಾಹಿತಿಯಲ್ಲಿ ಪದೇ ಪದೇ ಬದಲಾವಣೆ ಕಂಡುಬಂದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಪೊಲೀಸರಿಗೆ ಇದರ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.
ಕುಟುಂಬದವರ ಹೇಳಿಕೆಗಳನ್ನು ಮರುಪರಿಶೀಲಿಸಿ ಮನೆಯಲ್ಲೇ ಪೊಲೀಸರು ಶೋಧ ಕಾರ್ಯ ನಡೆಸಿದರು. ಬಾತ್ರೂಂನಲ್ಲಿ ಹೊಸದಾಗಿ ಅಳವಡಿಸಲಾಗಿದ್ದ ಟೈಲ್ಸ್ ಅನುಮಾನಕ್ಕೆ ಕಾರಣವಾದ ಹಿನ್ನೆಲೆಯಲ್ಲಿ ನೆಲವನ್ನು ಒಡೆದು ನೋಡಿದಾಗ ಕಾಂಕ್ರೀಟ್ ಅಡಿಯಲ್ಲಿ ಹೂತಿದ್ದ ಅಸ್ಥಿಪಂಜರ ಪತ್ತೆಯಾಗಿದೆ.
ಪೊಲೀಸರು ಶವವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಸಾವಿನ ನಿಖರ ಕಾರಣ ಹಾಗೂ ಕೊಲೆಗೆ ಬಳಸಿದ ವಿಧಾನ ಕುರಿತು ಸ್ಪಷ್ಟ ಮಾಹಿತಿ ದೊರೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮದ್ಯದ ಚಟ, ಹಣಕ್ಕಾಗಿ ಪತ್ನಿಗೆ ಕಿರುಕುಳ:
ಪೊಲೀಸರ ಪ್ರಾಥಮಿಕ ತನಿಖೆ ಪ್ರಕಾರ, ಮೃತ ಸುರೇಂದ್ರ ಶರ್ಮಾ ಕಳೆದ ಕೆಲ ವರ್ಷಗಳಿಂದ ನಿರುದ್ಯೋಗಿಯಾಗಿದ್ದು, ಮದ್ಯದ ಚಟಕ್ಕೆ ಬಿದ್ದಿದ್ದರು. ಮದ್ಯ ಖರೀದಿಸಲು ಪತ್ನಿ ರೂಬಿಯಿಂದ ಆಗಾಗ ಹಣ ಕೇಳುತ್ತಿದ್ದು, ಹಣ ನೀಡಲು ನಿರಾಕರಿಸಿದರೆ ಆಕೆಯ ಮೇಲೆ ಹಲ್ಲೆ ನಡೆಸುತ್ತಿದ್ದರು ಎನ್ನಲಾಗಿದೆ. ಈ ಕಾರಣಕ್ಕೆ ದಂಪತಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು ಎಂದು ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
16 ವರ್ಷದ ದಾಂಪತ್ಯ, ಇಬ್ಬರು ಪುತ್ರಿಯರು:
ಸುರೇಂದ್ರ ಶರ್ಮಾ ಮತ್ತು ರೂಬಿ ಸುಮಾರು 16 ವರ್ಷಗಳ ಹಿಂದೆ ವಿವಾಹವಾಗಿದ್ದರು. ದಂಪತಿಗೆ ಇಬ್ಬರು ಪುತ್ರಿಯರಿದ್ದಾರೆ. ಕುಟುಂಬದ ಪ್ರಮುಖ ಆದಾಯ ಮೂಲ ಸುರೇಂದ್ರ ಅವರ ತಂದೆಯ ಪಿಂಚಣಿಯಾಗಿದ್ದು, ಆ ಹಣವನ್ನು ಸುರೇಂದ್ರ ಹಾಗೂ ಅವರ ಸಹೋದರ ಅನಿಲ್ ಶರ್ಮಾ ಹಂಚಿಕೊಂಡು ಬಳಸುತ್ತಿದ್ದರು. ಮೇ 18ರಂದು ಸುರೇಂದ್ರ ಶರ್ಮಾ ಅವರನ್ನು ಕೊಲೆ ಮಾಡಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಪಾಯಸದಲ್ಲಿ ನಿದ್ರೆ ಮಾತ್ರೆ ಬೆರೆಸಿದ ಪತ್ನಿ:
ತನಿಖೆ ವೇಳೆ ಪೊಲೀಸರು ಬೆಚ್ಚಿಬೀಳಿಸುವ ಸಂಗತಿಯನ್ನು ಪತ್ತೆಹಚ್ಚಿದ್ದಾರೆ. ರೂಬಿ ಮೊದಲು ಪಾಯಸದಲ್ಲಿ ಹೆಚ್ಚಿನ ಪ್ರಮಾಣದ ನಿದ್ರೆ ಮಾತ್ರೆಗಳನ್ನು ಬೆರೆಸಿ ಪತಿಗೆ ನೀಡಿದ್ದಳು. ನಿದ್ರೆ ಮಾತ್ರೆಯ ಪರಿಣಾಮ ಸುರೇಂದ್ರ ಪ್ರಜ್ಞಾಹೀನರಾದ ಬಳಿಕ ಅವರನ್ನು ಕೊಲೆ ಮಾಡಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಆದರೆ ಸಾವಿಗೆ ನಿಖರ ಕಾರಣವೇನು ಎಂಬುದು ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕವೇ ಸ್ಪಷ್ಟವಾಗಲಿದೆ.
ಮಕ್ಕಳಿಗೂ ಬರಲಿಲ್ಲ ಅನುಮಾನ:
ಮದ್ಯ ಸೇವಿಸಿದ ನಂತರ ಸುರೇಂದ್ರ ಗಂಟೆಗಟ್ಟಲೆ ನಿದ್ರಿಸುವುದು ಮನೆಯವರಿಗೆ ಸಾಮಾನ್ಯವಾಗಿತ್ತು. ಹೀಗಾಗಿ ತಂದೆ ಹಾಸಿಗೆಯ ಮೇಲೆ ಚಲನೆಯಿಲ್ಲದೆ ಮಲಗಿರುವುದನ್ನು ಕಂಡರೂ ಇಬ್ಬರು ಪುತ್ರಿಯರಿಗೆ ಯಾವುದೇ ಅನುಮಾನ ಬಂದಿರಲಿಲ್ಲ ಎಂದು ತನಿಖೆ ವೇಳೆ ತಿಳಿದುಬಂದಿದೆ.
ಕೊಲೆ ನಡೆದ ಮರುದಿನ ರೂಬಿ ತನ್ನ ಇಬ್ಬರು ಪುತ್ರಿಯರನ್ನು ಸುರೇಂದ್ರ ಅವರ ಸಹೋದರ ಅನಿಲ್ ಶರ್ಮಾ ಅವರ ಮನೆಗೆ ಬಿಟ್ಟು, ತಾನೊಬ್ಬಳೇ ಮನೆಗೆ ಹಿಂದಿರುಗಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಎಟಿಎಂ ವಹಿವಾಟಿನಿಂದ ಬಯಲಾಯಿತು ರಹಸ್ಯ:
ಪ್ರಕರಣದಲ್ಲಿ ಮಹತ್ವದ ತಿರುವು ಸಿಕ್ಕಿದ್ದು ಬ್ಯಾಂಕ್ ಖಾತೆಯ ಎಟಿಎಂ ವಹಿವಾಟಿನಿಂದ. ಕುಟುಂಬದ ಪಿಂಚಣಿ ಹಣ ಜಮೆಯಾಗುತ್ತಿದ್ದ ಖಾತೆಯ ಎಟಿಎಂ ಕಾರ್ಡ್ ಸುರೇಂದ್ರ ಅವರ ಬಳಿಯೇ ಇತ್ತು. ಅವರು ಕಾಣೆಯಾದ ಬಳಿಕವೂ ಖಾತೆಯಿಂದ ಹಣ ಡ್ರಾ ಆಗುತ್ತಿರುವುದನ್ನು ಸಹೋದರ ಅನಿಲ್ ಗಮನಿಸಿದ್ದರು.
ಇದರಿಂದ ಅನುಮಾನಗೊಂಡ ಅವರು ಮತ್ತೊಮ್ಮೆ ಪೊಲೀಸರನ್ನು ಸಂಪರ್ಕಿಸಿ ಮಾಹಿತಿ ನೀಡಿದರು. ಇದೇ ತನಿಖೆಗೆ ಹೊಸ ತಿರುವನ್ನು ನೀಡಿತು.
ಪ್ರಸ್ತುತ ರೂಬಿಯನ್ನು ಬಂಧಿಸಿರುವ ಪೊಲೀಸರು, ಪ್ರಕರಣದ ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸುತ್ತಿದ್ದು, ಕೊಲೆಯ ಹಿಂದಿನ ಉದ್ದೇಶ, ಸಂಚು ಹಾಗೂ ಇತರರ ಪಾತ್ರದ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ.
ಉಪ ಪೊಲೀಸ್ ಆಯುಕ್ತ ಸಯ್ಯದ್ ಅಲಿ ಅಬ್ಬಾಸ್ ಮಾತನಾಡಿ, ಮಹಿಳೆ ಒಬ್ಬಳೇ ವ್ಯಕ್ತಿಯನ್ನು ಕೊಲೆ ಮಾಡಿ, ಮನೆಯೊಳಗೆ ಗುಂಡಿ ತೋಡಿ ಶವ ಹೂಳುವುದು ಸುಲಭದ ಕೆಲಸವಲ್ಲ. ಹೀಗಾಗಿ ಈ ಕೃತ್ಯದಲ್ಲಿ ಇನ್ನಾರಾದರೂ ಭಾಗಿಯಾಗಿರುವ ಸಾಧ್ಯತೆಯನ್ನು ಗಂಭೀರವಾಗಿ ಪರಿಶೀಲಿಸುತ್ತಿದ್ದೇವೆ. ಸದ್ಯ ರೂಬಿ ಹೊರತುಪಡಿಸಿ ಬೇರೆ ಯಾರ ಪಾತ್ರವಿದೆಯೇ ಎಂಬುದರ ಬಗ್ಗೆ ಸಾಕ್ಷ್ಯಗಳನ್ನು ಸಂಗ್ರಹಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.



