ಧಾರವಾಡ: ಇಲ್ಲಿನ ಕೇಂದ್ರ ಕಾರಾಗೃಹದ ಜೈಲರ್ ಸಿದ್ದರಾಮಪ್ಪ ವಡ್ಡರ (37) ಅವರು ತಮ್ಮ ವಸತಿಗೃಹದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಳೆದ ಕೆಲ ತಿಂಗಳ ಹಿಂದೆ ಅವರನ್ನು ಅಮಾನತ್ತು ಮಾಡಿ, ಆಡಳಿತಾತ್ಮಕ ಕಾರಣದಿಂದ ಮೈಸೂರಿಗೆ ವರ್ಗಾವಣೆ ಮಾಡಲಾಗಿತ್ತು. ವರ್ಗಾವಣೆ ಮಾಡಿದರೂ ಅವರು ಮಾತ್ರ ಮೈಸೂರು ಕಾರಾಗೃಹಕ್ಕೆ ಹೋಗಿ ರಿಪೋರ್ಟ್ ಮಾಡಿಕೊಂಡಿರಲಿಲ್ಲ. ಮಾನಸಿಕವಾಗಿ ಜರ್ಜರಿತರಾಗಿದ್ದ ಸಿದ್ದರಾಮಪ್ಪ ಅವರು ಧಾರವಾಡದ ಹೊಸ ಬಸ್ ನಿಲ್ದಾಣದ ಬಳಿಯ ವಸತಿಗೃಹದಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮನೆಯವರು ಕರೆ ಮಾಡಿದಾಗ ಸಿದ್ದರಾಮಪ್ಪ ಫೋನ್ ರಿಸಿವ್ ಮಾಡಿಲ್ಲ. ಪಕ್ಕದ ಮನೆಯವರು ಬಂದು ನೋಡಿದಾಗ ನೇಣು ಹಾಕಿಕೊಂಡಿದ್ದು ಗೊತ್ತಾಗಿದೆ. ತಕ್ಷಣ ಅವರ ಕುಟುಂಬಸ್ಥರಿಗೆ ಮಾಹಿತಿ ಮುಟ್ಟಿಸಿದ್ದರು.
ಜೈಲಿಗೆ ಹಾಕುತ್ತಾರೆ ಎಂದು ಡಿಜಿಪಿ ಅವರು ಸಿದ್ದರಾಮಪ್ಪ ಅವರಿಗೆ ಹೆದರಿಸಿದ್ದರಂತೆ. ಇದರಿಂದ ಮಾನಸಿಕವಾಗಿ ನೊಂದ ಸಿದ್ದರಾಮಪ್ಪ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಸ್ಥಳಕ್ಕೆ ಸುಕೊ ಟೀಂ ಭೇಟಿ ನೀಡಿ ಪರಿಶೀಲನೆ ಮಾಡಿದೆ. ಅಲ್ಲದೇ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಭೇಟಿ ನೀಡಿ, ಮನೆಯವರು ಯಾವ ರೀತಿ ದೂರು ನೀಡುತ್ತಾರೋ ಅದರ ಆಧಾರದ ಮೇಲೆ ತನಿಖೆ ನಡೆಸುತ್ತೇವೆ ಎಂದರು.



