ಬೆಂಗಳೂರು: ಕರ್ನಾಟಕದಲ್ಲಿ ಅತೀ ಹೆಚ್ಚು ಶಿವ ಭಕ್ತರು ಭೇಟಿ ನೀಡುವ ದೇವಾಲಯ ಅಂದರೆ ಅದು ಧರ್ಮಸ್ಥಳ. ಬೆಂಗಳೂರು ಸೇರಿದಂತೆ ಪ್ರತಿನಿತ್ಯ ಸಾವಿರಾರು ಭಕ್ತರು ಧರ್ಮಸ್ಥಳ ಮಂಜುನಾಥನ ದರ್ಶನಕ್ಕಾಗಿ ಹೋಗುತ್ತಾರೆ. ಜೊತೆಗೆ ಅಲ್ಲಿ ಗಂಟೆಗಟ್ಟಲೆ ಕ್ಯೂನಲ್ಲಿ ನಿಂತು ದರ್ಶನ ಮಾಡಿಕೊಂಡು ಬರುತ್ತಾರೆ. ಇದೀಗ ರಾಜಧಾನಿಯಿಂದ ಧರ್ಮಸ್ಥಳಕ್ಕೆ ತೆರಳುವ ಭಕ್ತಾದಿಗಳಿಗೆ ಕೆಎಸ್ಟಿಡಿಸಿ ಗುಡ್ ನ್ಯೂಸ್ ನೀಡಿದೆ. ಇನ್ಮುಂದೆ ರಾಜಧಾನಿಗರು ಶೀಘ್ರದಲ್ಲೇ ಮಂಜುನಾಥನ ದರ್ಶನ ಮಾಡಬಹುದಾಗಿದೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಕೇವಲ ಧಾರ್ಮಿಕ ಸ್ಥಳ ಮಾತ್ರವಲ್ಲ, ಅದೊಂದು ಶಕ್ತಿ, ರಾಜ್ಯದ ಕೋಟ್ಯಂತರ ಭಕ್ತರ ನಂಬಿಕೆ. ಈ ಧರ್ಮಕ್ಷೇತ್ರಕ್ಕೆ ಪ್ರತಿನಿತ್ಯ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸತ್ತಾರೆ. ಅದರಂತೆ ಬೆಂಗಳೂರಲ್ಲೂ ಮಂಜುನಾಥನ ಭಕ್ತಗಣ ದೊಡ್ಡದಿದ್ದು, ರಾಜಧಾನಿಯಿಂದ ಧರ್ಮಸ್ಥಳ, ಕುಕ್ಕೆ, ಸೌತಡ್ಕಕ್ಕೆ ಭೇಟಿ ನೀಡುವ ಭಕ್ತರಿಗೆ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಅಥವಾ ಕೆಎಸ್ಟಿಡಿಸಿ ಸಿಹಿ ಸುದ್ದಿ ನೀಡಿದೆ. ಇಂದಿನಿಂದ ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಸೌತಡ್ಕಕಕ್ಕೆ ಟೂರ್ ಪ್ಯಾಕೇಜ್ ಆರಂಭಿಸುತ್ತಿದೆ. ಮೊದಲ ಹಂತದಲ್ಲಿ ಟ್ರಯಲ್ ಆಗಿ ವಾರದಲ್ಲಿ ಒಮ್ಮೆ ಈ ಟೂರ್ ಪ್ಯಾಕೇಜ್ ಆರಂಭಿಸುತ್ತಿದ್ದು, ಇಂದಿನಿಂದ ಪ್ರಾರಂಭವಾಗುತ್ತಿದೆ.
ಈ ಪ್ಯಾಕೇಜ್ 2 ದಿನ ಮತ್ತು 1 ರಾತ್ರಿ ಒಳಗೊಂಡಿದೆ. ಈ ಪ್ಯಾಕೇಜ್ನ ವಿಶೇಷತೆಯೆಂದರೆ ಈ ಹಿಂದೆ ತಿರುಪತಿಗೆ ಶೀಘ್ರ ದರ್ಶನದ ವ್ಯವಸ್ಥೆ ಹೇಗೆ ಕಲ್ಪಿಸಲಾಗಿತ್ತೋ, ಹಾಗೆಯೇ ಧರ್ಮಸ್ಥಳದಲ್ಲಿಯೂ ಈ ಪ್ಯಾಕೇಜ್ ಮೂಲಕ ಹೋಗುವ ಭಕ್ತಾದಿಗಳಿಗೆ ಪ್ರತ್ಯೇಕ ಲೈನ್ ಇರಲಿದ್ದು, ಮಂಜುನಾಥನ ದರ್ಶನಕ್ಕೆ ಶೀಘ್ರ ವ್ಯವಸ್ಥೆ ಕಲ್ಪಿಸಲಾಗಿದೆ. ಇದರಿಂದ ಮಕ್ಕಳು ಹಾಗೂ ವಯಸ್ಸಾದವರು ಕಾಯುವ ಅಗತ್ಯವಿರುವುದಿಲ್ಲ. ಇದರಲ್ಲಿ ಎರಡು ಹಂತದ ಪ್ಯಾಕೇಜ್ಗಳಿದ್ದು, ಪ್ರೀಮಿಯಂ ಪ್ಯಾಕೇಜ್ ಒಬ್ಬ ವ್ಯಕ್ತಿಗೆ 4,450 ರೂ, ಹೋಟೆಲ್ ವಾಸ್ತವ್ಯ ಮತ್ತು ಉಪಹಾರವನ್ನು ಒಳಗೊಂಡಿರುತ್ತದೆ. ಬಜೆಟ್ ಫ್ರೆಂಡ್ಲಿ ಪ್ಯಾಕೇಜ್ನಲ್ಲಿ ಒಬ್ಬ ವ್ಯಕ್ತಿಗೆ 3,450 ರೂ. ಆಗಲಿದೆ. ಪ್ರವಾಸಕ್ಕೆ ಎಸಿ ಡಿಲಕ್ಸ್ ಬಸ್ ಅನ್ನು ಒದಗಿಸಲಾಗುತ್ತಿದೆ.
ಕೆಎಸ್ಟಿಡಿಸಿ ಭಕ್ತರಿಗೆ ಮತ್ತು ಪ್ರವಾಸ ಆಸಕ್ತರಿಗೆ ಅನುಕೂಲವಾಗುವಂತೆ ಈ ಪ್ಯಾಕೇಜ್ ನೀಡತ್ತಿದ್ದು, ಮಂಜುನಾಥನ ಶೀಘ್ರ ದರ್ಶನಕ್ಕೆ ಅವಕಾಶ ಕಲ್ಪಿಸಿರುವುದು ವಿಶೇಷ.



