ಶಿವಮೊಗ್ಗ: ಚಾಲಕನ ನಿಯಂತ್ರಣ ತಪ್ಪಿ ಕೆರೆ ತಡೆಗೋಡೆಗೆ ಖಾಸಗಿ ಬಸ್ ಡಿಕ್ಕಿಯಾದ ಪರಿಣಾಮ 10 ಮಂದಿ ವಿದ್ಯಾರ್ಥಿಗಳು ಹಾಗೂ ಓರ್ವ ಉಪನ್ಯಾಸಕಿ ಗಾಯಗೊಂಡ ಘಟನೆ ಸಾಗರ ತಾಲೂಕಿನ ಕಾಸ್ಪಾಡಿ ಬಳಿ ನಡೆದಿದೆ.
ಸಾಗರ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜು ಕ್ರೀಡಾಕೂಟಕ್ಕೆ ವಿದ್ಯಾರ್ಥಿಗಳನ್ನ ಖಾಸಗಿ ಬಸ್ನಲ್ಲಿ ಕರೆದೊಯ್ಯಲಾಗಿತ್ತು. ಕ್ರೀಡಾಕೂಟ ಮುಗಿಸಿ, ವಾಪಸ್ ಬರುವ ವೇಳೆ ನಿಯಂತ್ರಣ ತಪ್ಪಿ ಕಾಸ್ಪಾಡಿ ಕೆರೆಯ ತಡೆಗೋಡೆಗೆ ಬಸ್ ಡಿಕ್ಕಿಯಾಗಿದೆ.
ಬಸ್ ನಲ್ಲಿದ್ದ 48 ಜನರ ಪೈಕಿ 10 ವಿದ್ಯಾರ್ಥಿಗಳು ಮತ್ತು ಓರ್ವ ಉಪನ್ಯಾಸಕಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳಿಗೆ ಆನಂದಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಬಸ್ ಕೆರೆಗೆ ಪಲ್ಟಿಯಾಗಿದ್ದರೆ ಭಾರೀ ಅನಾಹುತ ಸಂಭವಿಸುತ್ತಿತ್ತು. ಅದೃಷ್ಟವಶಾತ್ ದೊಡ್ಡ ಅನಾಹುತ ತಪ್ಪಿದಂತಾಗಿದೆ. ಆನಂದಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.




