ಬೆಳಗಾವಿ: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿ ಹೈಕೋರ್ಟ್ಗೆ ಚಿನ್ನಯ್ಯ ಸಲ್ಲಿಸಿರುವ ರಿಟ್ ಅರ್ಜಿಯಲ್ಲಿ ನಟ ಪ್ರಕಾಶ್ ರಾಜ್ ಅವರ ಹೆಸರು ಪ್ರಸ್ತಾಪವಾಗಿರುವ ಹಿನ್ನೆಲೆಯಲ್ಲಿ, ಬೆಳಗಾವಿಯಲ್ಲಿ ಶ್ರೀರಾಮ ಸೇನೆಯ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಳಗಾವಿ ಕನ್ನಡ ಸಾಹಿತ್ಯ ಭವನದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ, ಪ್ರಮೋದ್ ಮುತಾಲಿಕ್ ಅವರ ನೇತೃತ್ವದಲ್ಲಿ ಪ್ರಕಾಶ್ ರಾಜ್ ಅವರ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಲಾಗಿದೆ. ಪ್ರತಿಭಟನಾಕಾರರು ಧರ್ಮದ್ರೋಹಿ ಪ್ರಕಾಶ್ ರಾಜ್ ಎಂಬ ಘೋಷಣೆಗಳನ್ನೂ ಕೂಗಿದ್ದಾರೆ.
ಬಳಿಕ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಹಿಂದೂಗಳ ಪವಿತ್ರ ಧಾರ್ಮಿಕ ಕ್ಷೇತ್ರವಾದ ಧರ್ಮಸ್ಥಳದ ಹೆಸರು ಕೆಡಿಸುವ ಮತ್ತು ಅದಕ್ಕೆ ಅಪಖ್ಯಾತಿ ತರುವ ದೊಡ್ಡದೊಂದು ಪಿತೂರಿಯ ಹಿಂದೆ ಬಹುಭಾಷಾ ನಟ ಪ್ರಕಾಶ್ ರಾಜ್ ಕೈವಾಡವಿದ್ದು, ಕೂಡಲೇ ವಿಶೇಷ ತನಿಖಾ ತಂಡ ಅವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ನಟನ ಮೇಲೆ ಸ್ವಯಂಪ್ರೇರಿತ ಪ್ರಕರಣ ದಾಖಲಾಗಬೇಕು. ಧರ್ಮಸ್ಥಳದ ತಲೆಬುರುಡೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಚಿನ್ನಯ್ಯ ಎಂಬಾತನೇ ಈ ಇಡೀ ಪ್ರಕರಣದ ಮುಖ್ಯ ಸಂಚುಕೋರ ನಟ ಪ್ರಕಾಶ್ ರಾಜ್ ಎಂದು ಹೆಸರಿಸಿದ್ದಾನೆ. ಹೀಗಾಗಿ ಎಸ್ಐಟಿ ಅಧಿಕಾರಿಗಳು ತಕ್ಷಣವೇ ಕಾರ್ಯಪ್ರವೃತ್ತರಾಗಿ ಪ್ರಕಾಶ್ ರಾಜ್ ಅವರನ್ನು ವಶಕ್ಕೆ ಪಡೆಯಬೇಕು. ಇದರೊಂದಿಗೆ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ತೀವ್ರ ಧಕ್ಕೆ ತಂದಿರುವ ನಟನ ವಿರುದ್ಧ ಪೊಲೀಸರು ತಾವಾಗಿಯೇ ಮುಂದೆ ಬಂದು ಸ್ವಯಂಪ್ರೇರಿತ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಳ್ಳಬೇಕು ಎಂದು ಮುತಾಲಿಕ ಒತ್ತಾಯಿಸಿದರು.
ರಾಜ್ಯದಲ್ಲಿ ಸನಾತನ ಧರ್ಮ ಹಾಗೂ ಹಿಂದೂ ಧಾರ್ಮಿಕ ಕ್ಷೇತ್ರಗಳನ್ನು ಗುರಿಯಾಗಿಸಿಕೊಂಡು ನಿರಂತರವಾಗಿ ಅಪಪ್ರಚಾರ ಹಾಗೂ ಸಂಚು ರೂಪಿಸಲಾಗುತ್ತಿದೆ. ಈ ಪಿತೂರಿಯಲ್ಲಿ ಕಾಂಗ್ರೆಸ್ ನಾಯಕರು, ಎಡಪಂಥೀಯರು, ಕೆಲವು ಬುದ್ದಿಜೀವಿಗಳು ಹಾಗೂ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಮುದಾಯಗಳ ಒಂದು ಭಾಗ ಶಾಮೀಲಾಗಿದೆ. ಹಿಂದೂ ಧರ್ಮದ ವಿರುದ್ಧ ಸದಾ ವಿಷ ಕಾರುವ ನಟ ಪ್ರಕಾಶ್ ರಾಜ್ ಅವರನ್ನು ಚಿತ್ರರಂಗದಿಂದಲೇ ಸಂಪೂರ್ಣವಾಗಿ ಬಹಿಷ್ಕರಿಸಬೇಕು. ಈ ನಿಟ್ಟಿನಲ್ಲಿ ಅವರನ್ನು ಸಿನಿಮಾಗಳಿಂದ ದೂರ ಇಡುವಂತೆ ಒತ್ತಾಯಿಸಿ ಕನ್ನಡ, ತೆಲುಗು ಹಾಗೂ ತಮಿಳು ಚಲನಚಿತ್ರ ವಾಣಿಜ್ಯ ಮಂಡಳಿಗಳಿಗೆ ಶ್ರೀರಾಮ ಸೇನೆ ವತಿಯಿಂದ ಅಧಿಕೃತವಾಗಿ ದೂರು ಸಲ್ಲಿಸಲಾಗುವುದು ಎಂದು ತಿಳಿಸಿದರು.
ಧರ್ಮಸ್ಥಳದ ಘನತೆಗೆ ಮಸಿ ಬಳಿಯುವ ಏಕೈಕ ಉದ್ದೇಶದಿಂದಲೇ ಈ ಇಡೀ ಪ್ರಕರಣದಲ್ಲಿ ಸುಜಾತಾ ಭಟ್ ಎಂಬಾಕೆಯನ್ನು ದಾಳವಾಗಿ ಬಳಸಿಕೊಳ್ಳಲಾಗಿದೆ. ನಿಜವಾಗಿ ಅಸ್ತಿತ್ವದಲ್ಲೇ ಇಲ್ಲದ ಅನನ್ಯಾ ಭಟ್ ಎಂಬ ಯುವತಿಯನ್ನು ಅಪಹರಿಸಿ ಕೊಲೆ ಮಾಡಲಾಗಿದೆ ಎಂದು ಸುಳ್ಳು ಮತ್ತು ಗಂಭೀರ ಆರೋಪಗಳನ್ನು ಸೃಷ್ಟಿಸಲಾಯಿತು. ಪವಿತ್ರ ಕ್ಷೇತ್ರವನ್ನು ತೇಜೋವಧೆ ಮಾಡಲು ಮತ್ತು ಈ ಸಂಚನ್ನು ರೂಪಿಸಲು ನಟ ಪ್ರಕಾಶ್ ರಾಜ್ ಅವರಿಗೆ ಕೇರಳದಿಂದ ಬರೋಬ್ಬರಿ ₹200 ಕೋಟಿ ಹಣದ ನೆರವು ಹರಿದುಬಂದಿದೆ. ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆಯು ಯಾವುದೇ ಪ್ರಭಾವಕ್ಕೆ ಒಳಗಾಗದೆ ನಿಷ್ಪಕ್ಷಪಾತವಾಗಿ ನಡೆಯಬೇಕು ಎಂದೂ ಅವರು ಒತ್ತಾಯಿಸಿದರು.
ಹರಿಹರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪ್ರೊ. ಭಗವಾನ್ ಅವರು ಶ್ರೀರಾಮನ ಚಾರಿತ್ಯದ ಬಗ್ಗೆ ಅತ್ಯಂತ ಹಗುರವಾಗಿ ಮತ್ತು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಅವರ ವಿರುದ್ಧ ಕಾನೂನು ಹೋರಾಟದ ಮಾಡಲಾಗುವುದು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೋಟ್ಯಂತರ ಹಿಂದೂಗಳ ಧಾರ್ಮಿಕ ನಂಬಿಕೆಗೆ ಭಗವಾನ್ ಧಕ್ಕೆ ತಂದಿದ್ದರೂ ಸಹ ರಾಜ್ಯ ಸರ್ಕಾರ ಅವರ ವಿರುದ್ಧ ಯಾವುದೇ ಕಠಿಣ ಕಾನೂನು ಕ್ರಮ ಕೈಗೊಂಡಿಲ್ಲ. ಸರ್ಕಾರದ ಧೋರಣೆಯನ್ನು ಖಂಡಿಸಿದ ಅವರು, ಶ್ರೀರಾಮನಿಗೆ ಅವಮಾನ ಮಾಡಿರುವ ಪ್ರೊ. ಭಗವಾನ್ ವಿರುದ್ಧ ಹೈಕೋರ್ಟ್ನ ಧಾರವಾಡ ಪೀಠದಲ್ಲಿ ಶೀಘ್ರದಲ್ಲೇ ಶ್ರೀರಾಮ ಸೇನೆ ವತಿಯಿಂದ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಎಂದು ಎಚ್ಚರಿಸಿದರು.



