ದಾವಣಗೆರೆ: ಜಿಲ್ಲೆಯಾದ್ಯಂತ ಸುರಿದ ಭಾರೀ ಮಳೆಗೆ ಪರಂಗಿ ಹಾಗೂ ಅಡಿಕೆ ಗಿಡಗಳು ಸೇರಿದಂತೆ ವಿವಿಧೆಡೆ ಅಪಾರ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆ.
ಮಂಗಳವಾರ (ಮೇ 19) ಸುರಿದ ಧಾರಾಕಾರ ಮಳೆಗೆ ಜಗಳೂರು ತಾಲೂಕಿನ ಸಿದ್ದಮ್ಮನಹಳ್ಳಿ, ದೊಣ್ಣೆಹಳ್ಳಿಯಲ್ಲಿ ತಿಪ್ಪೇಸ್ವಾಮಿ ಹಾಗೂ ಬಸಪ್ಪ ಎನ್ನುವ ರೈತರಿಗೆ ಸೇರಿದ ಎರಡು ಎಕರೆ ಪಪ್ಪಾಯ ಬೆಳೆ ನೆಲಕಚ್ಚಿದೆ. ಇದರಿಂದ ರೈತರಿಗೆ ಅಪಾರ ಪ್ರಮಾಣದಲ್ಲಿ ನಷ್ಟವಾಗಿದೆ. ಉದ್ದಘಟ್ಟ ಗ್ರಾಮದಲ್ಲಿ ಮಳೆ ಗಾಳಿಗೆ ಸರ್ಕಾರಿ ಶಾಲೆಯ ಕೊಠಡಿ ಮೇಲೆ ಬೃಹತ್ ಮರ ಬಿದ್ದು ಕೊಠಡಿಯ ಶೀಟ್ಗಳು ಒಡೆದು ಹೋಗಿವೆ. ಶಾಲೆಯ ಅಡುಗೆ ಕೊಠಡಿ ಗೋಡೆ ಕೂಡ ಬಿರುಕು ಬಿಟ್ಟಿದೆ.
ಭರಮಸಮುದ್ರದಲ್ಲಿ ಮರ ಬಿದ್ದು ಮಹಾಂತೇಶ್ ಎನ್ನುವವರ ಮನೆಗೆ ಹಾನಿಯುಂಟಾಗಿದೆ. ಹುಚ್ಚವ್ವನಹಳ್ಳಿ ಗ್ರಾಮದಲ್ಲಿ ಗುಡುಗು ಸಿಡಿಲಿನ ರಭಸಕ್ಕೆ ಮಹಮದ್ ಗನಿ ಎಂಬುವವರ ಆಕಳು ಸಾವನ್ನಪ್ಪಿದೆ. ಕೆಲ ಮನೆಗಳಿಗೆ ಮಳೆ ನೀರು ನುಗ್ಗಿದ ಪರಿಣಾಮ ನೀರನ್ನು ಹೊರಹಾಕಲು ಜನ ಹರಸಾಹಸಪಟ್ಟಿದ್ದಾರೆ.



