ಬೆಂಗಳೂರು: ಸರ್ಕಾರಿ ಕಂಟ್ರಾಕ್ಟರ್ ಆಗಿ ಗೌತಮ್ ಅದಾನಿ ಅವರು ಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿದ್ದಾರೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಸಿಎಂ-ಅದಾನಿ ಭೇಟಿ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅದಾನಿ ಬಗ್ಗೆ ನಮ್ಮ ಅಭಿಪ್ರಾಯ ಏನೇ ಇರಬಹುದು. ನಮ್ಮ ಚಿತ್ತಾಪುರದಲ್ಲಿ ಎಸಿಸಿ ಸಿಮೆಂಟ್ ಫ್ಯಾಕ್ಟರಿ ಖರೀದಿ ಮಾಡಿದ್ದಾರೆ. ನಾನೇನಾದರೂ ಮಾಡಲು ಆಗುತ್ತಾ? ಕಾನೂನು ಪಾಲನೆ ಮಾಡಬೇಕು ಅಷ್ಟೇ. ಸಿಎಂ ಅವರನ್ನು ಭೇಟಿಯಾಗುವುದರಲ್ಲಿ ಏನಿದೆ ಎಂದು ಪ್ರಶ್ನಿಸಿದರು.
ಅವರು ಕಂಟ್ರಾಕ್ಟರ್, ಸರ್ಕಾರಿ ಕಂಟ್ರಾಕ್ಟರ್. ಎರಡು ಪ್ರಾಜೆಕ್ಟ್ಗಳಲ್ಲಿ ಎಲ್-1 ಆಗಿದ್ದಾರೆ. ನಮ್ಮ ರಾಜ್ಯಕ್ಕೆ ಆ ಪ್ರಾಜೆಕ್ಟ್ಗಳು ಮುಖ್ಯವಾಗಿವೆ. ನಾವು ಟೆಂಡರ್ ಮೇಲೆ ಪರಿಣಾಮ ಬೀರಲು ಆಗುವುದಿಲ್ಲ. ಎಲ್-1 ಆಗಿರುವುದರಿಂದ ಸೌಜನ್ಯಕ್ಕಾಗಿ ಭೇಟಿಯಾಗಿರಬಹುದು. ನಮಗೆ ಅವರು ಕಂಟ್ರಾಕ್ಟರ್ ಅಷ್ಟೇ,” ಎಂದು ಹೇಳಿದರು.
ಬಿಜೆಪಿ ಟೀಕೆ ವಿಚಾರವಾಗಿ ಮಾತನಾಡಿದ ಪ್ರಿಯಾಂಕ್ ಖರ್ಗೆ, ಕೇಂದ್ರ ಸರ್ಕಾರ ಅಂಬಾನಿ, ಅದಾನಿ ಗುಲಾಮರು ಎಂಬುದು ನಮ್ಮ ಅಭಿಪ್ರಾಯ. ಆದರೆ ಲೀಗಲ್ ಪ್ರೋಸೆಸ್ ಅನ್ನು ನಾವು ತಡೆಯಲು ಅಥವಾ ಬದಲಾಯಿಸಲು ಆಗುವುದಿಲ್ಲ. ನ್ಯಾಯಯುತವಾಗಿ ಟೆಂಡರ್ ಸಿಕ್ಕಿದ್ದರೆ ಏನು ಮಾಡುವುದು ಎಂದರು.
ನಮಗೆ ಕೆಲಸ ಮಾಡಿಸುವುದು ಮುಖ್ಯ. ಅದು ಅಂಬಾನಿ, ಅದಾನಿ ಅಥವಾ ಅಂಬರೀಶ್ ಯಾರೇ ಆಗಿರಬಹುದು. ನಾವು ಬೇರೆಯವರಿಗೆ ಟೆಂಡರ್ ಕೊಟ್ಟಿದ್ದರೆ ಹಗರಣ ಎನ್ನುತ್ತಿದ್ದಿರಿ. ಟೆಂಡರ್ ಪ್ರಕ್ರಿಯೆ ಪಾರದರ್ಶಕವಾಗಿ ನಡೆದಿದೆ. ಅದಕ್ಕಾಗಿ ಅವರು ಭೇಟಿಯಾಗಿರಬಹುದು ಎಂದು ಸಮರ್ಥಿಸಿಕೊಂಡರು.
ಅದಾನಿಗೆ ಈಗ ಟೆಂಡರ್ ಸಿಕ್ಕಿದೆ. ಬಿಜೆಪಿ ನಾಯಕರು ಟನಲ್ ಮಾಡಬೇಕು ಅಂತಾರಾ, ಬೇಡ ಅಂತಾರಾ? ಎಂಪಿಗಳು ಈ ಹಿಂದೆ ಬಾಯಿ ಬಡಿದುಕೊಳ್ಳುತ್ತಿದ್ದರು. ಈಗ ಅವರ ನೆಂಟರಿಗೆ ಸಿಕ್ಕಿದೆ. ನೆಂಟರು, ಬೀಗರು ಟೆಂಡರ್ ಹಾಕಬಹುದು. ನಾವು ಬೇಡ ಎನ್ನಲು ಆಗುತ್ತಾ? ನಮ್ಮ ಪಾರದರ್ಶಕ ಪ್ರಕ್ರಿಯೆಯಲ್ಲಿ ಅವರಿಗೆ ಟೆಂಡರ್ ಸಿಕ್ಕಿದೆ. ಅದು ಅವರ ನೆಂಟರು, ಬೀಗರು ಯಾರಿಗಾದರೂ ಸಿಕ್ಕಿರಬಹುದು. ನಾವೇನು ಮಾಡಲು ಆಗುತ್ತದೆ ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.




