ಬೆಳಗಾವಿ : ಸಿದ್ದರಾಮಯ್ಯನವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವುದರಿಂದ ಕಾಂಗ್ರೆಸ್ ಇನ್ನು ಮುಂದೆ ಅಧಃಪತನಕ್ಕೆ ಹೋಗುತ್ತದೆ. ಸಿದ್ದರಾಮಯ್ಯನವರ ಈಗಿನ ಕಣ್ಣೀರು 2028ಕ್ಕೆ ಜ್ವಾಲಾಮುಖಿಯಾಗಿ ಸ್ಪೋಟಿಸಲಿದೆ ಎಂದು ವಿಧಾನ ಪರಿಷತ್ ಸದಸ್ಯ ಲಖನ ಜಾರಕಿಹೊಳಿ ಭವಿಷ್ಯ ನುಡಿದಿದ್ದಾರೆ.
ನಗರದಲ್ಲಿ ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೂರು ವರ್ಷ ಸಿದ್ದರಾಮಯ್ಯ ಆರ್ಥಿಕ ಪರಿಸ್ಥಿತಿಯನ್ನು ಯಾರಿಗೂ ಸಮಸ್ಯೆಯಾಗದಂತೆ ನಿಭಾಯಿಸಿದ್ದಾರೆ. ಚುನಾವಣೆ ವೇಳೆ ಕಾಂಗ್ರೆಸ್ ಘೋಷಿಸಿದ್ದ ಗ್ಯಾರಂಟಿ ಯೋಜನೆಗಳು ಸಿದ್ದರಾಮಯ್ಯ ಇದ್ದಿದ್ದರಿಂದ ಯಾವುದೇ ಸಮಸ್ಯೆ ಇಲ್ಲದಂತೆ ಜಾರಿಯಾಗಿದ್ದವು. ಇನ್ನು ಮುಂದೆ ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳು ನಿಲ್ಲುತ್ತವೆ. ಸರ್ಕಾರಿ ನೌಕರರ ಸಂಬಳ ಕೊಡಲು ಸಾಧ್ಯವಾಗುವದಿಲ್ಲ ಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್ ಮುಖಂಡರಾದ ವೇಣುಗೋಪಾಲ, ಸುರ್ಜೇವಾಲಾರಿಗೆ ಕನ್ನಡ ಬರುವುದಿಲ್ಲ. ರಾಜ್ಯದ ಸಮಸ್ಯೆಗಳು ಅವರಿಗೆ ಗೊತ್ತಿಲ್ಲ. ಹೈಕಮಾಂಡ್ ನಿರ್ದೇಶನದ ಮೇರೆಗೆ ರಾಜೀನಾಮೆ ಎನ್ನುತ್ತಿದ್ದಾರೆ. ಆದರೆ ಸಿದ್ದರಾಮಯ್ಯ ಕುರುಬ ಸಮುದಾಯದ ದೊಡ್ಡ ನಾಯಕ. ರಾಜ್ಯದ ಮಾಸ್ ಲೀಡರ್. ವೀರೇಂದ್ರ ಪಾಟೀಲರಿದ್ದಾಗ ಲಿಂಗಾಯತರಿಗೆ ಅನ್ಯಾಯವಾಗಿತ್ತು. ಈಗ ಕುರುಬ ಸಮುದಾಯಕ್ಕೆ ಅನ್ಯಾವಾಗಿದೆ ಎಂದರು.
ಸಿದ್ದರಾಮಯ್ಯನವರನ್ನು ಈ ರೀತಿ ನಡೆಸಿಕೊಂಡಿದ್ದರಿಂದ 2028ರಲ್ಲಿ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ 40 ಸ್ಥಾನ ಗೆಲ್ಲುವುದಕ್ಕೂ ಸಾಧ್ಯವಾಗುವುದಿಲ್ಲ. ಸಿದ್ದರಾಮಯ್ಯನವರನ್ನು ಪೂರ್ಣಾವಧಿ ಮುಖ್ಯಮಂತ್ರಿ ಮಾಡಿ, ಅವರ ನೇತೃತ್ವದಲ್ಲೇ ಚುನಾವಣೆಗೆ ಹೋಗಬೇಕಿತ್ತು. ಈಗಾಲೇ ಡಿ.ಕೆ.ಶಿವಕುಮಾರರಿಗೆ ಉಪಮುಖ್ಯಮಂತ್ರಿ ಸ್ಥಾನ ಇತ್ತು. ಎಲ್ಲ ಹಿರಿಯರಿಗೆ ಸಚಿವ ಸ್ಥಾನಗಳಿದ್ದವು. ಹೀಗಿದ್ದಾಗಲೂ ಹೈಕಮಾಂಡ್ ಜೇಣುಗೂಡಿಗೆ ಕೈ ಹಾಕುವ ಕೆಲಸ ಮಾಡಿದ್ದಾರೆ. ಅಹಿಂದ ವರ್ಗಕ್ಕೆ ದೊಡ್ಡ ಅನ್ಯಾಯವಾಗಿದೆ. ಯಡಿಯೂರಪ್ಪರನ್ನು ಕೆಳಗಿಳಿಸಿ ಬಸವರಾಜ ಬೊಮ್ಮಾಯಿರನ್ನು ಸಿಎಂ ಮಾಡಿದಾಗ ಬಿಜೆಪಿಯ ಕಥೆ ಏನಾಯಿತು? ಈಗ ಸಿದ್ದರಾಮಯ್ಯ ಕೆಳಗಿಳಿಸಿದ್ದಾರೆ ಕಾಂಗ್ರೆಸ್ ಪರಿಸ್ಥಿತಿ ಕೂಡ ಹೀಗೆ ಆಗಲಿದೆ ಎಂದು ಹೇಳಿದರು.



