ದಾವಣಗೆರೆ: ಇಲ್ಲಿನ ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಸಿಲಿಂಡರ್ ಸ್ಫೋಟಗೊಂಡು , ಆಪರೇಷನ್ ಥಿಯೇಟರ್ನಲ್ಲಿ ಅಗ್ನಿ ಅವಘಡ ಸಂಭವಿಸಿದೆ.
ಆಪರೇಷನ್ ಥಿಯೇಟರ್ನಲ್ಲಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾಗಿವೆ. ಆಪರೇಷನ್ ಥಿಯೇಟರ್ ಸುತ್ತಾಮುತ್ತ ಇರುವ ಕೊಠಡಿಗಳಿಗೂ ಹಾನಿಯಾಗಿದೆ. ಅಗ್ನಿ ಅವಘಡದಿಂದ ದಟ್ಟ ಹೊಗೆ ಆವರಿಸಿದೆ. ಇದರಿಂದ ಭಯಭೀತರಾಗಿ ಸಿಬ್ಬಂದಿ ಅಲ್ಲಿಂದ ಓಡಿ ಹೊರಬಂದಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಆಸ್ಪತ್ರೆ ಸಿಬ್ಬಂದಿ, ಏಳೆಂಟು ಜನ ಸಿಬ್ಬಂದಿ ಮಾತ್ರ ಇದ್ದೆವು. ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಮುಂಜಾಗ್ರತಾ ಕ್ರಮ ತೆಗೆದುಕೊಂಡೆವು. ಅದೃಷ್ಟವಶಾತ್ ಯಾವುದೇ ರೋಗಿ ಆಪರೇಷನ್ ಥಿಯೇಟರ್ನಲ್ಲಿ ಇರಲಿಲ್ಲ. ಕೂಡಲೇ ನಾವೇಲ್ಲ ಸಿಬ್ಬಂದಿ ಹೊರ ಬಂದೆವು. ನಿಜಕ್ಕೂ ಮರುಜೀವ ಪಡೆದಂತಾಗಿದೆ. ಈ ವೇಳೆ ಡಿ ಗ್ರೂಪ್ ನೌಕರರು ಪ್ರಾಣವನ್ನು ಲೆಕ್ಕಿಸದೇ ಕೆಲಸ ಮಾಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಬೆಂಕಿ ನಂದಿಸುವ ಸಿಲಿಂಡರ್, ಫೈಯರ್ ಬಾಲ್ಗಳನ್ನು ಬಳಸಿ ಪ್ರಾರಂಭದಲ್ಲಿ ಡಿ ಗ್ರೂಪ್ ನೌಕರರು ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದರು. ಬಳಿಕ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಾಯಾಮ ಸಂಭವಿಸಿಲ್ಲ.
ಈ ಪ್ರಕರಣದ ತನಿಖೆಗೆ ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ ಆದೇಶಿಸಿದ್ದಾರೆ. ಅಗ್ನಿಶಾಮಕದಳ, ಬೆಸ್ಕಾಂ ರಿಪೋರ್ಟ್ ಆಧರಿಸಿ ಮುಂದಿನ ಕ್ರಮಕೈಗೊಳ್ಳಲಾಗುತ್ತದೆ. ಒಂದು ವಾರದಲ್ಲಿ ರಿಪೇರಿ ಮಾಡಿಸಿ ಆಪರೇಷನ್ಗೆ ಚಾಲನೆ ನೀಡಲಾಗುವುದು. ಮೇಲ್ನೋಟಕ್ಕೆ ಆಕ್ಸಿಜನ್ ಸಿಲಿಂಡರ್ ಬ್ಲಾಸ್ಟ್ ಆಗಿದೆ ಎಂದು ಗೊತ್ತಾಗಿದೆ. ನಿರ್ಲಕ್ಷ್ಯ ಆಗಿದಿಯೋ ಆಥವಾ ಏನಾಗಿದೆ ಅನ್ನೋದನ್ನು ಪತ್ತೆ ಹಚ್ಚುತ್ತೇವೆ. ಈ ಅವಘಡದಲ್ಲಿ ಯಾರಿಗೂ ಹಾನಿಯಾಗಿಲ್ಲ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.



