ತುಮಕೂರು: ಸಿಎಂ ಡಿ.ಕೆ.ಶಿವಕುಮಾರ್ ಅವರ ಕನಸಿನ ಕೂಸು ಹೇಮಾವತಿ ಎಕ್ಸ್ಪ್ರೆಸ್ ಕೆನಾಲ್ಗೆ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಗುಬ್ಬಿ ಕಾಂಗ್ರೆಸ್ ಶಾಸಕ ಎಸ್ಆರ್ ಶ್ರೀನಿವಾಸ್ ವಿರೋಧ ವ್ತಕ್ತಪಡಿಸಿದ್ದಾರೆ.
ತುಮಕೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಜೆಡಿಎಸ್ ಪಕ್ಷ ಬಿಡಲು ಎಕ್ಸ್ಪ್ರೆಸ್ ಕೆನಾಲ್ ನಿರ್ಮಾಣವೂ ಒಂದು ಕಾರಣ ಆಗಿತ್ತು. ಈಗ ನಮ್ಮ ವಿರೋಧ ಮೀರಿ ಮತ್ತೆ ಎಕ್ಸ್ಪ್ರೆಸ್ ಕೆನಾಲ್ ಆರಂಭಿಸಿದರೆ ಪಕ್ಷದಲ್ಲಿ ಇರಬೇಕೋ ಬೇಡವೋ ಅನ್ನೋದನ್ನು ಯೋಚನೆ ಮಾಡಬೇಕಿದೆ ಎಂದು ಎಕ್ಸ್ಪ್ರೆಸ್ ಕೆನಾಲ್ ಕಾಮಗಾರಿ ಆರಂಭಿಸೋದನ್ನು ತೀಕ್ಷ್ಣವಾಗಿ ವಿರೋಧಿಸಿದ್ದಾರೆ.
ಈ ಹಿಂದೆ ಲಿಂಕ್ ಕೆನಾಲ್ ವಿರೋಧಿಸಿ ಜೆಡಿಎಸ್ ತೊರೆದಿದ್ದೇನೆ. ಲಿಂಕ್ ಕೆನಾಲ್ ಮಾಡಿದ್ರೆ ಮುಂದಿನ ನಿರ್ಧಾರ ಮಾಡ್ತೀನಿ ಎಂದ ಎಸ್ಆರ್ ಶ್ರೀನಿವಾಸ್ ಕಾಂಗ್ರೆಸ್ (Congress) ತೊರೆಯುವ ಮಾತನಾಡಿದ್ದಾರೆ. ಈ ಹಿಂದೆ ನಾನು ಕ್ಯಾಬಿನೆಟ್ ಮಂತ್ರಿ ಇದ್ದಾಗ, ನಮ್ಮ ಕ್ಯಾಬಿನೆಟ್ನಲ್ಲೇ ಡಿಕೆ ಶಿವಕುಮಾರ್ ಅವರು ಜಲ ಸಂಪನ್ಮೂಲ ಸಚಿವರಾಗಿದ್ದರು. ಕುಮಾರಸ್ವಾಮಿ ಅವರು ಸಿಎಂ ಆಗಿದ್ರು, ಆಗ ಈ ಕಾಮಗಾರಿಗೆ ಅನುಮೋದನೆ ಕೊಟ್ಟಿದ್ದರು. ನಾನು ಆ ಸಂದರ್ಭದಲ್ಲಿ ಕುಮಾರಸ್ವಾಮಿ ಜೊತೆ ಗಲಾಟೆ ಮಾಡಿದ್ದೆ. ಇದು ಒಳ್ಳೆಯದಲ್ಲ, ಈ ಕಾಮಗಾರಿ ಮಾಡಬೇಡಿ ಅಂತ ಎದ್ದು ಕ್ಯಾಬಿನೆಟ್ ಸಭೆಯಿಂದ ಆಚೆ ಬಂದಿದ್ದೆ. ನಾನು ಅವತ್ತು ಪಕ್ಷ ಬಿಡೋಕೆ ಅದು ಒಂದು ಕಾರಣವಾಗಿತ್ತು. ಅವತ್ತು ಅವರು ನಮಗೆ ಸರಿಯಾಗಿ ಸ್ಪಂದಿಸಲಿಲ್ಲ. ಇವಾಗ ಈ ಪಕ್ಷದಲ್ಲಿ ಇದೀನಿ. ಆಗ ನಮ್ಮ ಮಾತಿಗೆ ಬೆಲೆ ಇಲ್ಲ ಅಂತ ನಾನು ಪಕ್ಷ ಬಿಟ್ಟಿದ್ದು. ಈಗ ನಾನು ನೋಡ್ತಾ ಇದೀನಿ. ಈಗಾಗಲೇ ಮುಖ್ಯಮಂತ್ರಿಗಳಿಗೂ ಕೂಡ ಹೇಳಿದೀನಿ. ನಾಲೆಯಲ್ಲಿ ತೆಗೆದುಕೊಂಡು ಹೋಗಿ ಅಂತ ನನ್ನ ಅಭಿಪ್ರಾಯವನ್ನು ಹೇಳಿದಿನಿ. ನಮ್ಮ ಅಭಿಪ್ರಾಯಕ್ಕೆ ಎಷ್ಟು ಬೆಲೆ ಸಿಗುತ್ತೆ ಅಂತ ನೋಡೋಣ ಎಂದರು.
ಕೆನಾಲ್ ಆರಂಭ ಮಾಡಿದರೆ ಹೋರಾಟಗಳಾಗುತ್ತದೆ. ನಾನು ಕಾಂಗ್ರೆಸ್ ಪಕ್ಷದಲ್ಲಿ ಇರೋದ್ರಿಂದ ಬೀದಿಲಿ ನಿಂತ್ಕೊಂಡು ಹೋರಾಟ ಮಾಡೋದು ಸರಿಯಲ್ಲ ಅಂತ ನನ್ನ ಹಿತೈಷಿಗಳು ಹೇಳಿದ್ದಾರೆ. ಹಾಗಾಗಿ ನನ್ನ ಅಭಿಪ್ರಾಯವನ್ನು ಎಲ್ಲಿ ತಲುಪಿಸಬೇಕು ಅಲ್ಲಿ ತಲುಪಿಸಿದ್ದೇನೆ. ಸ್ಟ್ರಾಂಗ್ ಆಗಿ ಹೇಳುವಂತದ್ದನ್ನು ಕೂಡ ಮಾಡಿದ್ದೇನೆ. ಕೊನೆಗೆ ಏನಾಗುತ್ತೆ ಅಂತ ನನಗೆ ಅದರ ಬಗ್ಗೆ ಗೊತ್ತಿಲ್ಲ. ಈ ಬಗ್ಗೆ ಎಲ್ಲಿ ತಲುಪಿಸಬೇಕು ಅಲ್ಲಿ ತಲುಪಿಸುವಂತಹ ಕೆಲಸ ಮಾಡುತ್ತೇನೆ. ಕಾಮಗಾರಿ ಶುರುವಾಗಲ್ಲ ಅಂತ ಅಂದುಕೊಂಡಿದ್ದೇನೆ. ಇದು ಬೆಟ್ಟಕ್ಕೆ ಕಲ್ಲು ಹೊರುವ ಕೆಲಸ ಮಾಡಿದ ಹಾಗೆ ಆಗುತ್ತೆ. ಆ ಮೇಲೆ ಜನ ಯಾರು ಕೂಡ ಒಪ್ಪಲ್ಲ. ನೋಡೋಣ ಏನೇನಾಗುತ್ತೆ, ಮುಂದಿನ ದಿನದಲ್ಲಿ ನೋಡಿ ಕಾಲಕಾಲಕ್ಕೆ ತೀರ್ಮಾನ ತೆಗೆದುಕೊಳ್ಳಬೇಕಾಗುತ್ತೆ ಎಂದರು.



