ಗದಗ: ಬರ ಘೋಷಣೆ, ಬರ ಪರಿಹಾರ, ಬೆಳೆ ವಿಮೆ ಪರಿಹಾರ, ರಾಷ್ಟ್ರೀಕೃತ ಬ್ಯಾಂಕ್ಗಳ ರೈತರ ಸಾಲ ಮನ್ನಾ ಘೋಷಿಸುವಂತೆ ಆಗ್ರಹಿಸಿ ಜಿಲ್ಲೆಯ ನರಗುಂದ ಪಟ್ಟಣ ಬಂದ್ಗೆ ಇಂದು (ಸೆ.12) ಕರೆ ನೀಡಲಾಗಿದೆ.
ಗದಗ ಜಿಲ್ಲೆಯ ವಿವಿಧ ರೈತ ಸಂಘಟನೆಗಳು, ಮಲಪ್ರಭಾ ಅಚ್ಚುಕಟ್ಟು ಪ್ರದೇಶ ವೇದಿಕೆ ಸೇರಿದಂತೆ ಅನೇಕ ಸಂಘಟನೆಗಳು ಒಟ್ಟಾಗಿ ನರಗುಂದ ಬಂದ್ಗೆ ಕರೆ ನೀಡಿವೆ. ಸದ್ಯ ಬಸ್ ಸಂಚಾರ, ವ್ಯಾಪಾರ, ವಹಿವಾಟು, ಅಂಗಡಿ ಬಂದ್ ಮಾಡಲಾಗಿದೆ. ಹುಬ್ಬಳ್ಳಿ-ನರಗುಂದ-ವಿಜಯಪುರ-ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ, ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಳಿಗ್ಗೆಯಿಂದ ಬಸ್ ಸಂಚಾರ ಸಂಪೂರ್ಣ ಬಂದ್ ಮಾಡಲಾಗಿದೆ. ಇದರಿಂದ ಬೇರೆ ಊರುಗಳಿಗೆ ಹೋಗುವ ಪ್ರಯಾಣಿಕರರು ಪರದಾಡುವಂತಾಗಿದೆ. ಹೈವೆ ಬಂದ್ ಮಾಡಿದ್ದಕ್ಕೆ ಪರ್ಯಾಯ ಮಾರ್ಗ ಕಲ್ಪಿಸಲಾಗಿದೆ. ಎಂದಿನಂತೆ ಇತರೆ ಖಾಸಗಿ ವಾಹನಗಳ ಸಂಚಾರ, ಶಾಲಾ, ಕಾಲೇಜುಗಳು, ಸರ್ಕಾರಿ ಕಚೇರಿಗಳು ಆರಂಭವಾಗಿವೆ.
ನರಗುಂದ ಮುಖ್ಯ ರಸ್ತೆಯಲ್ಲಿ ವಾಹನ ತಡೆದು ರೈತರು ಹೋರಾಟ ಮಾಡಿದ್ದು, ಗದಗ ಜಿಲ್ಲೆಯ 7 ತಾಲೂಕು ಬರ ಘೋಷಣೆಗೆ ಒತ್ತಾಯಿಸಿದ್ದಾರೆ. ಜೊತೆಗೆ ಸರ್ಕಾರ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು. ಈ ವೇಳೆ ಅನೇಕ ರೈತ ಸಂಘಟನೆ ಹಾಗೂ ವಿವಿಧ ಸಂಘಟನೆ ಕಾರ್ಯಕರ್ತರು ಭಾಗವಹಿಸಿದ್ದರು.
