ಯರಗಟ್ಟಿ: ಸರ್ಕಾರ ಕೃಷಿ ವಿಜ್ಞಾನಿಗಳಿಂದ ಸಂಸ್ಕರಿಸಿದ ಉತ್ತಮ ಬಿತ್ತನೆ ಬೀಜ ಸಬ್ಸಿಡಿಯಲ್ಲಿ ವಿತರಿಸುತ್ತಿದೆ. ರೈತರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ಶಿವಪ್ರಕಾಶ ಪಾಟೀಲ ಹೇಳಿದರು.
ಎಪಿಎಂಸಿ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕೃಷಿ ಇಲಾಖೆ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ಸಹಾಯ ಧನ ಯೋಜನೆಯಡಿ ಬಿತ್ತನೆ ಬೀಜ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕಳೆದ ಬಾರಿಗಿಂತ ಅಧಿಕ ಪ್ರಮಾಣದಲ್ಲಿ ಉದ್ದು, ಗೋವಿನ ಜೋಳ ಬೀಜಗಳ ದಾಸ್ತಾನು ಮಾಡಲಾಗಿದೆ. ಯಾವುದೇ ಕಾರಣಕ್ಕೂ ಬೀಜ ಕೊರತೆ ಆಗಬಾರದು. ಪ್ರಸ್ತುತ ವಾಡಿಕೆಗಿಂತ ಕಡಿಮೆ ಮಳೆಯಿದ್ದು, ರೈತರು ತೇವಾಂಶ ನೋಡಿಕೊಂಡು ಬಿತ್ತನೆ ಮಾಡಬೇಕು. ಕಬ್ಬು ಬೆಳಗಾರರು ಜಾಗರೂಕತೆ ವಹಿಸಬೇಕು. ರಾಸಾಯನಿಕ ಗೊಬ್ಬರ ಕಡಿಮೆಗೊಳಿಸಿ ಲಾಭದಾಯಕ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು ಎಂದರು.
ತಹಸೀಲ್ದಾರ್ ಎಂ.ವಿ. ಗುಂಡಪ್ಪಗೋಳ ಮಾತನಾಡಿ, ಸರ್ಕಾರದ ಸಬ್ಸಿಡಿ ಬೀಜ ಪಡೆಯುವ ರೈತರು ಕೃಷಿ ಅಧಿಕಾರಿಗಳು ಮಾರ್ಗದರ್ಶನ ಹಾಗೂ ಅಗತ್ಯ ಸಲಹೆ ಪಡೆದು ಬಿತ್ತನೆ ಮಾಡಬೇಕು ಎಂದು ತಿಳಿಸಿದರು.
ಮುನವಳ್ಳಿ ಪಂಚಲಿಂಗೇಶ್ವರ ರೈತ ಉತ್ಪಾದಕ ಸಂಘದಿಂದ ಬೀಜ ವಿತರಿಸಲಾಯಿತು. ಎಪಿಎಂಸಿ ಅಧ್ಯಕ್ಷ ನೀಲಕಂಠ ಸಿದ್ದಬಸನ್ನವರ, ಆರ್.ಕೆ.ಪಟಾತ, ಸೋಮು ರೈನಾಪುರ, ಯಲ್ಲನಾಯ್ಕ ನಾಯ್ಕರ, ಎಸ್.ಎಲ್.ದೇಸಾಯಿ,
ಎನ್.ಜಿ. ಕಳಸಪ್ಪನವರ, ಉಮೇಶ ಯರಗಟ್ಟಿ, ಮನೋಹರ ದಿನ್ನಿಮನಿ ಇತರರಿದ್ದರು.



