ಬೆಳಗಾವಿ: ಕಳೆದ ಕೆಲವು ದಿನಗಳ ವಿರಾಮದ ಬಳಿಕ ಇದೀಗ ಪಶ್ಚಿಮ ಘಟ್ಟದಲ್ಲಿ ವರುಣನ ಅಬ್ಬರ ಜೋರಾಗಿದೆ. ಘಟಪ್ರಭಾ ನದಿಗೆ ಜೀವಕಳೆ ಬಂದಿದ್ದು, ಗೋಕಾಕ್ ಫಾಲ್ಸ್, ಬಟವಾಡೆ ಜಲಪಾತದಲ್ಲಿ ನೀರು ಹಾಲ್ನೊರೆಯಂತೆ ಧುಮ್ಮುಕ್ಕುತ್ತಿದೆ.
ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಗೋಕಾಕ್ ಜಲಪಾತವು ಮೈದುಂಬಿ ಹರಿಯುತ್ತಿದೆ. ಮಳೆ ಹೆಚ್ಚಾದ ಹಿನ್ನೆಲೆ ದೃಶ್ಯ ವೈಭವವೇ ಸೃಷ್ಟಿಯಾಗಿದ್ದು, 171 ಅಡಿ ಮೇಲಿನಿಂದ ನೀರು ಹಾಲ್ನೊರೆಯಂತೆ ಧುಮ್ಮುಕ್ಕುತ್ತಿದೆ.
ಬಿಟ್ಟುಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲೆಯ ಜಲಪಾತಗಳಿಗೆ ಜೀವಕಳೆ ಬಂದಿದೆ. ಖಾನಾಪುರ ತಾಲೂಕಿನ ಬಟವಾಡೆ ಜಲಪಾತ 50 ಅಡಿ ಮೇಲಿಂದ ಧುಮ್ಮಿಕ್ಕುತ್ತಿದೆ. ಜಲಪಾತಗಳಿಗೆ ಜೀವ ಕಳೆ ಬಂದರೂ ಪ್ರವಾಸಿಗರಿಗೆ ತೀವ್ರ ನಿರಾಸೆಯಾಗಿದ್ದು, ಜಲಪಾತಗಳ ಪ್ರವೇಶಕ್ಕೆ ಅರಣ್ಯ ಇಲಾಖೆ ನಿರ್ಬಂಧ ವಿಧಿಸಿದೆ. ಈ ಹಿನ್ನೆಲೆ ಪ್ರವಾಸಿಗರಿಲ್ಲದೇ ಜಲಪಾತಗಳು ಬಣಗುಟ್ಟುತ್ತಿವೆ.
ಇನ್ನೂ ಶಿಂಗಳಾಪುರ ಮಾರ್ಕಂಡೇಯ ಹಾಗೂ ಘಟಪ್ರಭಾ ನದಿ ಸ್ಥಾನದಲ್ಲಿ ನೀರಿನ ಮಟ್ಟ ಹೆಚ್ಚಳವಾದ ಹಿನ್ನೆಲೆ ಗೋಕಾಕ್ ನಗರ ಹಾಗೂ ಶಿಂಗಳಾಪುರ ಗ್ರಾಮದ ಮಧ್ಯೆಯಿರುವ ಬ್ರಿಡ್ಜ್ ಕಮ್ ಬ್ಯಾರೇಜ್ ಮುಳುಗಡೆ ಆಗಿದೆ. ಮುಳುಗಡೆಯಾದ ಹಿನ್ನೆಲೆ ಸವಾರರು ಪರ್ಯಾಯ ಮಾರ್ಗ ಬಳಸುತ್ತಿದ್ದಾರೆ.

