ಬೆಂಗಳೂರು: ವೆನ್ನಿಲಾ ಕೊಲೆ ಪ್ರಕರಣದಲ್ಲಿ ತಾಯಿ ಪ್ರಿಯಾಂಕಾ ವಿರುದ್ಧ ಅನುಮಾನಗಳು ಮುಂದುವರಿದಿವೆ. ಪ್ರಕರಣದ ಸತ್ಯ ಬಯಲಿಗೆಳೆಯಲು ಪಾಲಿಗ್ರಾಫ್ ಟೆಸ್ಟ್ ಗೆ (ಸುಳ್ಳುಪತ್ತೆ ಪರೀಕ್ಷೆ) ಪೊಲೀಸರು ಸಿದ್ಧತೆ ನಡೆಸಿದ್ದು, ಹೆಚ್ಚಿನ ವಿಚಾರಣೆಗಾಗಿ ಆರೋಪಿಗಳನ್ನು ಮತ್ತೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.
ಕಾಡುಗೋಡಿ ಬಾಲಕಿ ವೆನ್ನಿಲಾ ಕೊಲೆ ಪ್ರಕರಣದ ತನಿಖೆಯನ್ನು ಪೊಲೀಸರು ಮತ್ತಷ್ಟು ತೀವ್ರಗೊಳಿಸಿದ್ದಾರೆ. ಪ್ರಕರಣದ ಇಬ್ಬರು ಆರೋಪಿಗಳಾದ ಮೋಹನ್ ಮತ್ತು ಪ್ರಿಯಾಂಕಾರನ್ನು ಬಾಣಸವಾಡಿ ಎಸಿಪಿ ಅನುಷಾ ನೇತೃತ್ವದ ವಿಶೇಷ ತನಿಖಾ ತಂಡ ನ್ಯಾಯಾಲಯಕ್ಕೆ ಹಾಜರುಪಡಿಸಿತು. ಹೆಚ್ಚಿನ ವಿಚಾರಣೆ ಮತ್ತು ಸಾಕ್ಷ್ಯ ಸಂಗ್ರಹಕ್ಕಾಗಿ ಆರೋಪಿಗಳನ್ನು ಮತ್ತೆ ಪೊಲೀಸ್ ಕಸ್ಟಡಿಗೆ ನೀಡುವಂತೆ ಪೊಲೀಸರು ಮನವಿ ಮಾಡಿದ್ದರು. ಮನವಿಯನ್ನು ಪರಿಗಣಿಸಿದ ಒಂದನೇ ಎಸಿಜೆಎಂ ನ್ಯಾಯಾಲಯ, ಮೋಹನ್ಗೆ ೫ ದಿನ ಹಾಗೂ ಪ್ರಿಯಾಂಕಾಗೆ ೧೦ ದಿನಗಳ ಪೊಲೀಸ್ ಕಸ್ಟಡಿ ನೀಡಿ ಆದೇಶಿಸಿದೆ.
ಪ್ರಕರಣದ ತನಿಖೆಯಲ್ಲಿ ಈಗಾಗಲೇ ಆರೋಪಿ ಮೋಹನ್ ಕೊಲೆ ಕುರಿತು ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ. ಮಾರ್ಚ್ ೨೪ರಂದು ಇಂದಿರಾನಗರದಲ್ಲಿ ಶಾಪಿಂಗ್ ವೇಳೆ ಐಸ್ಕ್ರೀಂ ವಿಚಾರಕ್ಕೆ ಬಾಲಕಿ ಅಳುತ್ತಿದ್ದಾಗ ಕೋಪಗೊಂಡು ಆಕೆಯ ಹೊಟ್ಟೆಗೆ ಒದ್ದಿದ್ದಾಗಿ ಮತ್ತು ಬಳಿಕ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಗಿ ಹೇಳಿದ್ದಾನೆ. ಆದರೆ ಪ್ರಕರಣದಲ್ಲಿ ಸಹ ಆರೋಪಿ ಆಗಿರುವ ತಾಯಿ ಪ್ರಿಯಾಂಕಾ, ಕೊಲೆ ಬಗ್ಗೆ ತನಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳುತ್ತಿದ್ದು, ನನ್ನ ಮಗಳ ಕೊಲೆಯಾಗಿದ್ದೇ ಗೊತ್ತಾಗಿಲ್ಲ, ನನ್ನದೇನು ತಪ್ಪಿಲ್ಲ ಎಂದು ಹೇಳುವ ಮೂಲಕ ಆರೋಪವನ್ನು ತಳ್ಳಿಹಾಕಿದ್ದಾಳೆ. ಇದೇ ಕಾರಣಕ್ಕೆ ಆಕೆಯ ಹೇಳಿಕೆಗಳ ಸತ್ಯಾಸತ್ಯತೆ ಪರಿಶೀಲಿಸಲು ಪೊಲೀಸರು ವೈಜ್ಞಾನಿಕ ತನಿಖೆಯ ಮೊರೆ ಹೋಗಿದ್ದಾರೆ.
ಪ್ರಿಯಾಂಕಾ ವಿರುದ್ಧ ಗಂಭೀರ ಅನುಮಾನಗಳು ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಆಕೆಗೆ ಪಾಲಿಗ್ರಾಫ್ ಪರೀಕ್ಷೆ ನಡೆಸಲು ಸಿದ್ಧತೆ ನಡೆಯುತ್ತಿದೆ. ಪರೀಕ್ಷೆಗೆ ಪ್ರಿಯಾಂಕಾ ಸಮ್ಮತಿ ನೀಡಿರುವುದಾಗಿ ತಿಳಿದುಬಂದಿದ್ದು, ಇದಕ್ಕಾಗಿ ಅಗತ್ಯ ಕಾನೂನು ಮತ್ತು ನ್ಯಾಯಾಲಯದ ಪ್ರಕ್ರಿಯೆ ಆರಂಭಿಸಲಾಗಿದೆ.




