ಹುಕ್ಕೇರಿ ತಾಲೂಕಿನ ಘೋಡಗೇರಿ ಗ್ರಾಮದ ಮಾಜಿ ಸೈನಿಕ ಸಂದೀಪ್ ಮಂಜರಗಿ (46) ಕೊಲೆ ಪ್ರಕರಣ ರಹಸ್ಯ ಬಯಲಾಗಿದ್ದು, ಪತ್ನಿ, ಆರ್ಎಫ್ಎಸ್ಎಲ್ ಅಧಿಕಾರಿ, ಯ್ಯೂಟೂಬರ್ ಸೇರಿ 9ಜನರನ್ನು ಬಂಧಿಸಲಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ತಿಳಿಸಿದ್ದಾರೆ.
ಅಕ್ರಮ ಸಂಬಂಧ, 2 ಕೋಟಿ ರೂ. ವಿಮೆಗಾಗಿ ನಡೆದಿರುವ ಮಾಜಿ ಸೈನಿಕ ಕೊಲೆ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದ್ದು, ಇದೊಂದು ಪೂರ್ವನಿಯೋಜಿತ ಕೊಲೆ ಎಂಬುದು ಮೃತ ಸೈನಿಕನ ಪತ್ನಿ ಸುಮಾ ಮಂಜರಿಗಿ, ಪುಂಡಲಿಕ ಡೊಂಬರ, ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಯೋಗಾಲಯ(ಆರ್ಎಫ್ಎಸ್ಎಲ್) ಅಧಿಕಾರಿ ನಾಗರಾಜ್ ಪಿ.ಎಂ., ಸಚಿನ್ ಸೇಲಾರ, ಅಪ್ಪಾಸಾಬ ನಾಯಿಕವಾಡಿ, ಚನ್ನಪ್ಪ ಅಡವಿಸ್ವಾಮಠ, ಅಶೋಕ ಗುಜನಾಳ, ಬಸವಾರಜ್ ಬಸ್ಮೆ, ರಾಹುಲ ಜೋಗಿ ಎಂಬುರ ಬಂಧನದಿಂದ ಬೆಳಕಿಗೆ ಬಂದಿದೆ.
ಬೈಕ್ ಮೇಲೆ ಬಿದ್ದು ಗಾಯಗೊಂಡಿದ್ದ ಮಾಜಿ ಸೈನಿಕನನ್ನು ಘಟಪ್ರಭಾದ ಜೆ.ಜೆ.ಕೋ. ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಪಡೆಯುತ್ತಿದ್ದಾಗ ಪತ್ನಿ ಸುಮಾ ಮತ್ತು ಆರೋಪಿ ಪುಂಡಲಿಕ ಡೊಂಬರ ಸೇರಿ ಸೈಲೆನ್ ಬಾಟಲ್ನಲ್ಲಿ ವಿಷ ಬೆರಸಿ, ನಿದ್ರೆ ಮಾತ್ರೆ ಸೇವಿಸಲು ಹೇಳಿ ಹತ್ಯೆ ಮಾಡಿದ್ದರು. ಬಳಿಕ ರಸ್ತೆ ಅಪಘಾತದಲ್ಲಿ ಸಾವು ಎಂದು ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಸುಳ್ಳು ದೂರು ದಾಖಲಿಸಿದ್ದರು. ಈ ಪ್ರಕರಣ ಮುಚ್ಚಿ ಹಾಕಲು ಮರಣೋತ್ತರ ವರದಿಯಲ್ಲಿ ವಿಷದ ಅಂಶ ಕಂಡುಬಾರದಂತೆ ಮಾಡಲು ಆರ್ಎಫ್ಎಸ್ಎಲ್ ವೈದ್ಯರು, ಸಿಬ್ಬಂದಿ ಬಳಸಿಕೊಂಡಿದ್ದರು. ವರದಿಯಲ್ಲಿ ವಿಷದ ಅಂಶ ಬಾರದಂತೆ ಮಾಡಿ ಸಾಕ್ಷ್ಮಿ ನಾಶಪಡಿಸಿದ ಆರೋಪದ ಮೇಲೆ 9 ಜನರನ್ನು ಬಂಧಿಸಲಾಗಿದೆ. ಇನ್ನೂ ಹಲವರವನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ವಿವರಿಸಿದರು.




