ಕಲಬುರಗಿ: ಟಾರ್ಚ್ ಹಿಡಿದು ಬಸ್ ಚಲಾಯಿಸಿದ್ದ KKRTC ಅಧಿಕಾರಿಗಳು ಚಾಲಕ ಸೇರಿ ಮೂವರು ಸಿಬ್ಬಂದಿಯನ್ನು ಅಮಾನತು ಮಾಡಿದ್ದಾರೆ.
KKRTC ಬಸ್ ಕಲಬುರಗಿಯಿಂದ ಚಿಂಚೋಳಿಗೆ ಸಂಚರಿಸುತ್ತಿತ್ತು. ಈ ವೇಳೆ ಮೊಬೈಲ್ ಟಾರ್ಚ್ ಹಿಡಿದು ಸುಮಾರು 90 ಕಿಲೋಮೀಟರ್ ದೂರ ಬಸ್ ಚಲಾಯಿಸಿದ್ದರು. ಎಚ್ಚೆತ್ತ ಕೆಕೆಆರ್ಟಿಸಿ ಅಧಿಕಾರಿಗಳು ಇಲಾಖಾ ತನಿಖೆ ನಡೆಸಿದ್ದರು. ತನಿಖೆಯಲ್ಲಿ ಡಿಪೋ ಸಿಬ್ಬಂದಿ ಹಾಗೂ ಚಾಲಕನ ಅಜಾಗೃತೆ ಘಟನೆಗೆ ಕಾರಣ ಎನ್ನುವುದು ದೃಢವಾಗಿದೆ.
ತನಿಖೆಯ ವರದಿ ಬೆನ್ನಲ್ಲೇ ಅಧಿಕಾರಿಗಳು ತಾಂತ್ರಿಕ ಸಿಬ್ಬಂದಿ ಶಿವಾನಂದ್, ತಾಂತ್ರಿಕ ಮೇಲ್ವಿಚಾರಕ ಬಸವರಾಜ್ ಹಾಗು ಚಾಲಕ ಆಕಾಶ್ನನ್ನು ಅಮಾನತು ಮಾಡಿ, ಆದೇಶ ಹೊರಡಿಸಿದ್ದಾರೆ.
ಏನಿದು ಪ್ರಕರಣ?
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಬಸ್ವೊಂದು ಹೆಡ್ಲೈಟ್ ಇಲ್ಲದೇ ರಾತ್ರಿ ವೇಳೆ ಸಂಚರಿಸಿದ್ದು, ಕಂಡಕ್ಟರ್ ಮೊಬೈಲ್ ಟಾರ್ಚ್ ಬೆಳಕಿನ ಸಹಾಯದಿಂದ ಚಾಲಕ ಬಸ್ ಚಲಾಯಿಸಿರುವ ಘಟನೆ ಕಲಬುರಗಿಯಲ್ಲಿ ನಡೆದಿತ್ತು. ಬಸ್ನ ಹೆಡ್ಲೈಟ್ ಕಾರ್ಯನಿರ್ವಹಿಸದಿದ್ದರೂ ಅದನ್ನು ದುರಸ್ತಿ ಮಾಡದೆ ಸಂಚಾರಕ್ಕೆ ಬಿಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.



