ತುಮಕೂರು: ನೂತನ ಡಿಸಿಎಂ ಜಿ.ಪರಮೇಶ್ವರ್ ಇಂದು ಸಿದ್ದಗಂಗಾ ಮಠಕ್ಕೆ ಭೇಟಿ ಕೊಟ್ಟು ಶಿವಕುಮಾರ ಶ್ರೀಗಳ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿ ಶ್ರೀಗಳ ಆಶೀರ್ವಾದ ಪಡೆದರು.
ಬಳಿಕ ಮಾತನಾಡಿದ ಅವರು, ಎಂದಿನ ಸಂಪ್ರದಾಯದಂತೆ ಯಾವುದೇ ಒಂದು ಶುಭಕಾರ್ಯ ಅಥವಾ ಮುಂದಿನ ಶುಭಗಳನ್ನ ನಾವು ಆಲೋಚನೆ ಮಾಡುವಾಗ ಸಿದ್ದಗಂಗಾ ಮಠಕ್ಕೆ ಭೇಟಿ ಕೊಡುವಂತದ್ದು ಸಂಪ್ರದಾಯವಾಗಿ ನಡೆದುಬಂದಿದೆ. ರಾಜ್ಯದ ಉಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದ ಮೇಲೆ ಮೊದಲ ಬಾರಿಗೆ ತುಮಕೂರಿಗೆ ಬಂದಿದ್ದು, ಮಠಕ್ಕೆ ಭೇಟಿ ಕೊಟ್ಟು ಪೂಜ್ಯ ಸ್ವಾಮೀಜಿಯವರ ಆಶೀರ್ವಾದವನ್ನು ಪಡೆದುಕೊಂಡಿದ್ದೇನೆ. ನನಗೆ ಸಿಕ್ಕಿರುವಂತಹ ಕಂದಾಯ ಇಲಾಖೆಯಲ್ಲಿ ಕೆಲಸ ಮಾಡುವಾಗ ಶ್ರೀಗಳ ಆಶೀರ್ವಾದ ಮುಖ್ಯ ಅಂತ ನಾನು ಅಂದುಕೊಂಡಿದ್ದೇನೆ ಎಂದರು.
ಡಿಕೆ ಶಿವಕುಮಾರ್ ಅವರು ಸಿಎಂ ಆಗಿ ಅಧಿಕಾರ ಸ್ವೀಕಾರ ಮಾಡಿ ಇಂದಿಗೆ ನಾಲ್ಕು ದಿವಸ ಆಗಿದೆ. ಅನೇಕ ಭರವಸೆಗಳ ಮಾತುಗಳನ್ನು ಅವರದೇ ಆದಂತ ರೀತಿಯಲ್ಲಿ ಅನುಷ್ಠಾನ ಮಾಡಲು ಅವರು ಈಗಾಗಲೇ ನೀಲ ನಕ್ಷೆಯನ್ನು ಮಾಡಿಕೊಂಡಿದ್ದಾರೆ. ಆ ಹಿನ್ನೆಲೆಯಲ್ಲಿ ರಾಜ್ಯದ ಜನತೆಗೆ ಒಳ್ಳೆ ಆಡಳಿತವನ್ನು ಕೊಡಬೇಕು ಅನ್ನೋದು ನಮ್ಮ ಚಿಂತನೆಯಿದೆ. ಅವರ ಜೊತೆಯಲ್ಲಿ ನಾವೆಲ್ಲಾ ಸೇರಿ ರಾಜ್ಯದ ಅನೇಕ ಅಭಿವೃದ್ಧಿ ಕಾರ್ಯಗಳು ಇನ್ನು ತ್ವರಿತ ಗತಿಯಲ್ಲಿ ಮಾಡಲು ಅಣಿಯಾಗಿದೆ ಎಂದು ತಿಳಿಸಿದರು.
ವಿಶೇಷವಾಗಿ ತುಮಕೂರು ಜಿಲ್ಲೆಯಲ್ಲಿ ಅನೇಕ ಜ್ವಲಂತ ಸಮಸ್ಯೆಗಳು ಇದ್ದು, ಆದಷ್ಟು ಬೇಗ ಇರುವ ಸಮಯದಲ್ಲಿ ಬಗೆಹರಿಸುವಂತಹ ಕೆಲಸ ಮಾಡುತ್ತೇವೆ. ಅಲ್ಲದೇ ಎತ್ತಿನಹೊಳೆ ಯೋಜನೆಯ ನೀರು ಈ ವರ್ಷದ ಜೂನ್, ಜುಲೈನಲ್ಲಿ ನಮಗೆ ನೀರು ಬರಬೇಕಿತ್ತು, ಆದರೆ ಅರಣ್ಯ ಇಲಾಖೆಯ ಸಮಸ್ಯೆಯಿಂದ ಸ್ವಲ್ಪ ತಡೆಯಾಗಿದೆ. ಅದನ್ನ ಬಗೆಹರಿಸಿ ಆದಷ್ಟು ಶೀಘ್ರವಾಗಿ ನೀರು ತರುವ ಪ್ರಯತ್ನ ಮಾಡುತ್ತೇವೆ ಎಂದು ಭರವಸೆ ಕೊಟ್ಟರು.



