ಬಾಗಲಕೋಟೆ : ಬಿ.ವಿ.ವಿ.ಎಸ್. ಹೋಮಿಯೋಪಥಿಕ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಆಸ್ಪತ್ರೆಯಲ್ಲಿ ವಿದ್ಯಾರ್ಥಿಗಳಲ್ಲಿ ಸಾಂಸ್ಕೃತಿಕ ಜಾಗೃತಿ ಮತ್ತು ರಾಷ್ಟ್ರೀಯ ಏಕತೆಯ ಮನೋಭಾವ ಬೆಳೆಸುವ ಉದ್ದೇಶದಿಂದ "ವೈವಿಧ್ಯದಲ್ಲಿ ಏಕತೆ" ಎಂಬ ಶೀರ್ಷಿಕೆಯಡಿ ಭಾರತದ ವಿವಿಧ ರಾಜ್ಯಗಳ ಸಾಂಪ್ರದಾಯಿಕ ಉಡುಪುಗಳ ಪ್ರದರ್ಶನವನ್ನು ಆಯೋಜಿಸಲಾಯಿತು.
ಕಾರ್ಯಕ್ರಮವನ್ನು ಮಹಾವಿದ್ಯಾಲಯದ ಸಾಂಸ್ಕೃತಿಕ ಸಂಯೋಜಕಿ ಡಾ. ತೃಪ್ತಿ ಶಿಂದೆ ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿ, ಭಾರತದ ಪ್ರತಿಯೊಂದು ರಾಜ್ಯದ ಉಡುಪಿನಲ್ಲಿ ಆ ರಾಜ್ಯದ ಸಂಸ್ಕೃತಿ, ಹವಾಮಾನ ಹಾಗೂ ಕಲೆಯ ಪ್ರತಿಬಿಂಬ ಅಡಗಿದೆ. ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ದೇಶದ ವೈವಿಧ್ಯತೆ ಕುರಿತು ಗೌರವ ಮತ್ತು ಅರಿವು ಮೂಡಿಸುತ್ತವೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಅರುಣ ಹೂಲಿ ಮಾತನಾಡಿ, ವೈದ್ಯಕೀಯ ವಿದ್ಯಾರ್ಥಿಗಳಾದ ನಾವು ರೋಗಿಯ ಚಿಕಿತ್ಸೆ ವೇಳೆ ಜಾತಿ, ಧರ್ಮ, ಭಾಷೆ ಅಥವಾ ರಾಜ್ಯವನ್ನು ನೋಡುವುದಿಲ್ಲ. ಪ್ರತಿಯೊಬ್ಬ ರೋಗಿಯೂ ನಮಗೆ ಸಮಾನ. ಅದೇ ರೀತಿ ಉಡುಪುಗಳು ವಿಭಿನ್ನವಾಗಿದ್ದರೂ ನಾವೆಲ್ಲರೂ ಭಾರತೀಯರು. ನಮ್ಮೆಲ್ಲರ ರಕ್ತದ ಬಣ್ಣ ಒಂದೇ ಎಂಬ ಸಂದೇಶವನ್ನು ಈ ಕಾರ್ಯಕ್ರಮ ನೀಡುತ್ತದೆ ಎಂದು ಹೇಳಿದರು.
ಪ್ರದರ್ಶನದಲ್ಲಿ ಕಾಲೇಜಿನ ೫೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾರತದ ೨೦ಕ್ಕೂ ಹೆಚ್ಚು ರಾಜ್ಯಗಳ ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿ ಭಾಗವಹಿಸಿ ವೈವಿಧ್ಯಮಯ ಸಾಂಸ್ಕೃತಿಕ ಪರಂಪರೆಯನ್ನು ಅನಾವರಣಗೊಳಿಸಿದರು.
ವೈದ್ಯ ವಿದ್ಯಾರ್ಥಿನಿ ಅಪೂರ್ವಾ ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ಸಂಜಯ ಸಾವಂತ ಸ್ವಾಗತಿಸಿದರು. ನಿಕುಂಜ ವಂದಿಸಿದರು.ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರಾದ ಡಾ. ರವಿ ಕೋಟೆಣ್ಣವರ, ಡಾ. ಸುಧೀರ ಬೆಟಗೇರಿ, ಡಾ. ಫಾತಿಮಾ ಬಾಲಸಿಂಗ, ಡಾ. ಅಖಿಲಾ ಹುಲ್ಲೂರ, ಡಾ. ಪ್ರದೀಪ, ಡಾ. ಜಯಲಕ್ಷ್ಮಿ, ಡಾ. ದೀಪಕ, ಡಾ. ಲಕ್ಷ್ಮಿ, ಡಾ. ಮಂಜುನಾಥ ಪಾಟೀಲ ಹಾಗೂ ಡಾ. ಪವನ ಟಾವನಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಯಶಸ್ವಿ ಆಯೋಜನೆಯಲ್ಲಿ ವೈದ್ಯಕೀಯ ವಿದ್ಯಾರ್ಥಿಗಳಾದ ಐಶ್ವರ್ಯ, ಸಮರ್ಥ, ಅಭಿಷೇಕ, ತನ್ವಿ, ರಾಕೇಶ ಗೌಡ, ಮಂಜುನಾಥ, ಅಂಜನಾ ಹಾಗೂ ರೂಪಾ ಪ್ರಮುಖ ಪಾತ್ರವಹಿಸಿದ್ದರು




