ಕಲಬುರಗಿ: ಆರ್ಎಸ್ಎಸ್ ಪಥಸಂಚಲನದಲ್ಲಿ ಭಾಗಿಯಾಗಿದ್ದ ಇಬ್ಬರು ಶಿಕ್ಷಕರ ಅಮಾನತು ಆದೇಶಕ್ಕೆ ತಡೆಯಾಜ್ಞೆ ನೀಡಿ ಕಲಬುರಗಿಯ ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ (KAT) ತೀರ್ಪು ನೀಡಿದೆ.
ಅಮಾನತುಗೊಂಡ ಶಿಕ್ಷಕರು ಸಲ್ಲಿಸಿದ ಮೇಲ್ಮನವಿ ಅರ್ಜಿಯನ್ನು ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿಯು ಇಂದು (ಸೆ.3) ವಿಚಾರಣೆ ನಡೆಸಿತು. ಈ ವೇಳೆ ಆರ್ಎಸ್ಎಸ್ ಪಥಸಂಚಲನದಲ್ಲಿ ಭಾಗಿಯಾಗಿದ್ದ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಸರ್ಕಾರಿ ಶಾಲೆಯ ಶಿಕ್ಷಕರಾದ ಗುರುರಾಜ್ ಜೋಷಿ ಹಾಗೂ ಅಣ್ಣಾ ಸಾಹೇಬ್ ದೇಶಮುಖ ಅವರನ್ನು ಅಮಾನತುಗೊಳಿಸುವಂತೆ ನೀಡಿದ್ದ ಆದೇಶಕ್ಕೆ ತಡೆ ನೀಡಿದೆ.
ಕಳೆದ ವರ್ಷ ಆರ್ಎಸ್ಎಸ್ ವತಿಯಿಂದ ಹಮ್ಮಿಕೊಂಡಿದ್ದ ಪಥಸಂಚಲನದಲ್ಲಿ ಇಬ್ಬರು ಶಿಕ್ಷಕರು ಭಾಗಿಯಗಿದ್ದರು. ಈ ಹಿನ್ನೆಲೆ ಇಬ್ಬರು ಶಿಕ್ಷಕರ ವಿರುದ್ಧ ಶಾಲಾ ಶಿಕ್ಷಣ ಇಲಾಖೆ ಯಾದಗಿರಿ ಡಿಡಿಪಿಐ ಅವರು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದರು. ಬಳಿಕ ಡಿಡಿಪಿಐ ಅವರ ಅಮಾನತು ಆದೇಶವನ್ನು ಪ್ರಶ್ನಿಸಿ ಅಮಾನತುಗೊಂಡ ಶಿಕ್ಷಕರು ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿಯ ಕೋರ್ಟ್ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಿದರು.
ಸದ್ಯ ನ್ಯಾಯಮಂಡಳಿ ಅಮಾನತು ಆದೇಶಕ್ಕೆ ತಡೆ ನೀಡಿದ ಬೆನ್ನಲ್ಲೇ ಶಿಕ್ಷಕರು ನಿಟ್ಟುಸಿರು ಬಿಟ್ಟಿದ್ದಾರೆ.




