ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ 2026ರ ದಸರಾ ಗಜಪಯಣಕ್ಕೆ ಚಾಲನೆ ದೊರೆತಿದೆ. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ದಸರಾ ಗಜಪಡೆಗೆ ಚಾಲನೆ ನೀಡಿದ್ದಾರೆ.
ಹುಣಸೂರಿನ ವೀರನಹೊಸಳ್ಳಿಯಲ್ಲಿ ಗಜಪಯಣದ ಕಾರ್ಯಕ್ರಮ ಜರುಗಿದ್ದು, ಬೆಳಗ್ಗೆ 10 ರಿಂದ 10:28ರ ಶುಭ ತುಲಾ ಲಗ್ನದಲ್ಲಿ ಗಜಪಡೆಗೆ ಪೂಜೆ ಸಲ್ಲಿಕೆಯಾಗಿದೆ. ದಸರಾ ಗಜಪಡೆಗೆ ಪೂಜೆ ಸಲ್ಲಿಸಿದ ಬಳಿಕ, ಫಲತಾಂಬೂಲ ನೀಡುವ ಮೂಲಕ ಚಾಲನೆ ನೀಡಲಾಯಿತು. ಆನಂತರ ಗಜಪಡೆ ಕಾಡಿನಿಂದ ನಾಡಿನತ್ತ ಹೆಜ್ಜೆ ಹಾಕಿವೆ.
ದಸರಾ ಗಜಪಯಣದ ಮೊದಲ ಹಂತದಲ್ಲಿ ಒಟ್ಟು 9 ಆನೆಗಳಾದ ಧನಂಜಯ, ಮಹೇಂದ್ರ, ಏಕಲವ್ಯ, ಪ್ರಶಾಂತ, ಗೋಪಿ, ಶ್ರೀರಾಮ, ಸುಗ್ರೀವ, ಲಕ್ಷ್ಮೀ ಹಾಗೂ ಅಭಿಮನ್ಯು ಆಗಮಿಸಿವೆ. ಕಾರ್ಯಕ್ರಮದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಭಾಗಿಯಾಗಲಿದ್ದರು.
ಕ್ಯಾಪ್ಟನ್ ಅಭಿಮನ್ಯುವಿಗೆ ಬೀಳ್ಕೊಡುಗೆ:
ಸತತ 6 ವರ್ಷಗಳ ಕಾಲ ನಿರ್ವಿಘ್ನವಾಗಿ ಜಂಬೂ ಸವಾರಿ ನೆರವೇರಿಸಿಕೊಟ್ಟಿದ್ದ ಅಭಿಮನ್ಯು ಆನೆಗೆ ಗಜಪಯಣದ ವೇಳೆ ಅರಣ್ಯ ಇಲಾಖೆಯು ವಿಶೇಷ ಬೀಳ್ಕೊಡುಗೆ ಸಲ್ಲಿಸಿದೆ. ಬಣ್ಣ ಬಣ್ಣದ ಚಿತ್ತಾರ ಬಿಡಿಸಿಕೊಂಡು ಸಿಂಗಾರಗೊಂಡ ಅಭಿಮನ್ಯುವನ್ನು ಶಂಖ, ಚಕ್ರ, ಗಂಡಭೇರುಂಡ ಹೂವಿನ ಬಳ್ಳಿ ಬಿಡಿಸಿದ ದಾರಿಯುದ್ದಕ್ಕೂ ಹೂಮಳೆ ಸುರಿಸಿ ಸಿಬ್ಬಂದಿ ಕರೆತಂದಿದ್ದಾರೆ. ಅರಣ್ಯ ಇಲಾಖೆಯ ಅಚ್ಚುಮೆಚ್ಚಿನ ಆನೆಯಾಗಿರುವ ಅಭಿಮನ್ಯುವಿಗೆ ಬೀಳ್ಕೊಡುಗೆ ನೀಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದರು. ಈ ಹಿನ್ನೆಲೆ ಗಜಪಯಣ ವೇಳೆ ಅಭಿಮನ್ಯುವಿಗೆ ಬೀಳ್ಕೊಡುಗೆಯನ್ನು ಹಮ್ಮಿಕೊಳ್ಳಲಾಗಿತ್ತು.




