ಚಿಕ್ಕಮಗಳೂರು: ಮೂಡಿಗೆರೆ ತಾಲೂಕು ಕುಂದೂರು ಸಮೀಪದ ಹುಲ್ಲೆಮನೆ ಗ್ರಾಮದ ಶೋಭಾ (45) ಕಾಡಾನೆ ದಾಳಿಯಿಂದ ಮೃತಪಟ್ಟಿದ್ದು, ಸ್ಥಳಕ್ಕೆ ತಡವಾಗಿ ಬಂದ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರನ್ನು ಅಟ್ಟಾಡಿಸಿ ಹಲ್ಲೆ ಮಾಡಿರುವುದಲ್ಲದೇ ಬಟ್ಟೆಯನ್ನು ಹರಿದಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
ಮೂಡಿಗೆರೆ ತಾಲೂಕಿನ ಹುಲ್ಲೆಮನೆ ಗ್ರಾಮದಲ್ಲಿ ಕಾಡಾನೆ ದಾಳಿಯಿಂದಾಗಿ ಶೋಭಾ ಮೃತಪಟ್ಟಿದ್ದರು. ಘಟನೆ ಬೆಳಗ್ಗೆ ನಡೆದಿದ್ದರೂ ಕ್ಷೇತ್ರದ ಶಾಸಕ ಎಂ.ಪಿ.ಕುಮಾರಸ್ವಾಮಿ ಸಂಜೆ ಗ್ರಾಮಕ್ಕೆ ಬಂದಿದ್ದಾರೆ.
ಈ ವೇಳೆ ಗ್ರಾಮಸ್ಥರು ಆಕ್ರೋಶಗೊಂಡು ಶಾಸಕ ಕುಮಾರಸ್ವಾಮಿ ಅವರಿಗೆ ಘೇರಾವ್ ಹಾಕಿದಲ್ಲದೆ. ಗ್ರಾಮದ ಮುಖ್ಯರಸ್ತೆಯಲ್ಲಿ ಅಟ್ಟಾಡಿಸಿಕೊಂಡು ಬಂದಿದ್ದಾರೆ. ತೀವ್ರ ಅಕ್ರೋಶಗೊಂಡಿದ್ದ ಕೆಲ ಗ್ರಾಮಸ್ಥರು ಅವಾಚ್ಯ ಶಬ್ಧಗಳಿಂದ ನಿಂದಿಸಿದಲ್ಲದೆ. ಶಾಸಕರನ್ನು ಹಿಡಿದು ಎಳೆದಾಡಿದ್ದಾರೆ.
ಪರಿಸ್ಥಿತಿ ಕೈ ಮೀರಿದ ವೇಳೆ ಲಾಠಿ ಲಾಠಿ ಚಾರ್ಜ್ ಮಾಡಿ ಶಾಸಕರನ್ನು ಕರೆದುಕೊಂಡು ಬಂದ ಕಾರಿನಲ್ಲಿ ಕೂಡಿಸಿದ್ದಾರೆ. ಈ ಸಂದರ್ಭದಲ್ಲಿ ಎಂ.ಪಿ. ಕುಮಾರಸ್ವಾಮಿ ಅವರ ಬಟ್ಟೆ ಹರಿದಿಲ್ಲ.
ಆದ್ರೆ, ಕುಮಾರಸ್ವಾಮಿ ಅವರು ಈ ಘಟನೆ ಬಗ್ಗೆ ವಿಡಿಯೋ ಹೇಳಿಕೆಯೊಂದನ್ನು ನೀಡಿದ್ದು, ಆ ವಿಡಿಯೋದಲ್ಲಿ ಶಾಸಕರ ಶರ್ಟ್ ಹರಿದಿದೆ. ಅಲ್ಲದೇ ಇದೊಂದು ವ್ಯವಸ್ಥಿತ ಪಿತೂರಿ ಎಂದು ಕುಮಾರಸ್ವಾಮಿ ವಿಡಿಯೋದಲ್ಲಿ ಆರೋಪಸಿದ್ದಾರೆ.