ಬೆಳಗಾವಿ: ಸರ್ಕಾರಿ ಕಚೇರಿಯಲ್ಲಿ ನೌಕರಿ ಮಾಡುತ್ತಿರುವ ಮಗನನ್ನು ಹುಡುಕಿ ಕೊಡುವಂತೆ ವೃದ್ಧೆಯೊಬ್ಬರು ಜಿಲ್ಲಾಧಿಕಾರಿ ಮೂಲಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಮಾಡಿದ್ದಾರೆ. ರಾಮದುರ್ಗ ತಾಲೂಕಿನ ಖಾನಪೇಟನಗರದ ಬಸವಣ್ಣೆವ್ವ ಕೋರಿಶೆಟ್ಟಿ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿರುವ ವೃದ್ಧೆ.
ಕಳೆದ 18 ವರ್ಷಗಳ ಹಿಂದೆ ನನ್ನ ಹಿರಿಯ ಮಗ ಬಸಪ್ಪ ಕೋರಿಶೆಟ್ಟಿ ನನಗೆ 2 ಎಕರೆ ಜಮೀನು ನೀಡಿ, ಮೂರು ಮನೆಗಳ ಪೈಕಿ ಒಂದು ಮನೆಯನ್ನು ನಾನು ಬದುಕಿರುವರೆಗೆ ವಾಸಿಸಲು ಕೊಟ್ಟಿದ್ದನು. ಆದ್ರೆ , ಕಿರಿಯ ಮಗ ಶಿಂಗಪ್ಪ ನನಗೆ ನೀಡಿದ ಜಮೀನನ್ನು ಮಾರಾಟ ಮಾಡಲು ಪ್ರಚೋದಿಸಿ, ಜಮೀನನ್ನು 2 ಲಕ್ಷ 50 ಸಾವಿರ ರೂ.ಗಳಿಗೆ ನಾನು ಮಾರಾಟ ಮಾಡಿದೆ.
ಬಂದ ಹಣವನ್ನು ಬ್ಯಾಂಕ್ನಲ್ಲಿ ಸುರಕ್ಷಿತವಾಗಿ ನಿನ್ನ ಹೆಸರಿಲ್ಲಿ ಇಡುವುದಾಗಿ ಹೇಳಿ ಹಣದ ಜೊತೆ ಪರಾರಿ ಆಗಿದ್ದಾನೆ ಎಂದು ಆರೋಪಿಸಿದ್ದಾರೆ. ಇತ್ತ ಇರುವ ಮನೆಯನ್ನು ಬೀಳಿಸಿ ಹೋಗಿದ್ದಾನೆ. ಇದರಿಂದ ನನಗೆ ವಾಸಿಸಲು ಸ್ಥಳವಿಲ್ಲ. ಬೇರೆಯವರ ಮನೆಯ ಮುಂದಿನ ಕಟ್ಟೆಯ ಮೇಲೆ ವಾಸಿಸುತ್ತಿದ್ದೇನೆ ಎಂದು ಮನವಿಯಲ್ಲಿ ದೂರಿದ್ದಾರೆ.
ಆದರೆ 15 ದಿನಗಳ ಹಿಂದೆ ರಾಮದುರ್ಗದಲ್ಲಿ ಅವನನ್ನು ನೋಡಿದ್ದೇನೆ. ನಾನು ಜೀವನಕ್ಕಾಗಿ ಕೂಲಿ ಮಾಡಿ ಜೀವನ ನಡೆಸುತ್ತಿದ್ದೇನೆ. ವಯಸ್ಸಾದ ಕಾರಣ ನಾನು ಅಶಕ್ತಳಾಗಿದ್ದು ಕೆಲಸ ಮಾಡಲು ಆಗುತ್ತಿಲ್ಲ,ಸರ್ಕಾರಿ ನೌಕರಿಯಲ್ಲಿರುವ ನನ್ನ ಮಗನನ್ನು ಹುಡುಕಿಕೊಡಿ ಎಂದು ಮನವಿ ಮಾಡಿಕೊಂಡಿದ್ದಾರೆ.