ಬೆಂಗಳೂರು: ಮದುವೆಯಾಗುವುದಾಗಿ ನಂಬಿಸಿ ವಂಚಿಸಿದ್ದಾನೆಂದು ವಿವಾಹಿತೆ ಆರೋಪಿಸುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಏಕಸದಸ್ಯ ಪೀಠ ಬುಧವಾರ ಮಹತ್ವದ ತೀರ್ಪು ನೀಡಿದೆ.
ಜತೆಗೆ, ಆರೋಪಿ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 498 ಎ, 417 ಅಡಿಯಲ್ಲಿ ದಾಖಲಿಸಿದ್ದ ಪ್ರಕರಣವನ್ನು ರದ್ದುಪಡಿಸಿದೆ. ವಿವಾಹವಾಗಿರುವವರು ವಿಚ್ಛೇದನ ಪಡೆಯದೇ ಇದ್ದಂಥ ಸಂದರ್ಭದಲ್ಲಿ ಮತ್ತೊಬ್ಬ ವ್ಯಕ್ತಿಯ ವಿರುದ್ಧ ವಿವಾಹವಾಗುವುದಾಗಿ ವಂಚಿಸಿದ್ದಾರೆ ಎಂದು ಆರೋಪ ಮಾಡಲಾಗದು ಎಂದು ಕೋರ್ಟ್ ಹೇಳಿದೆ.
ವಿವಾಹಿತೆಯೊಂದಿಗೆ ಸ್ನೇಹ ಬೆಳೆಸಿ ಹಣಕಾಸಿನ ನೆರವು ನೀಡಿದ್ದ ಆರೋಪಿ ಪ್ರಜೀತ್, ವಿದೇಶಕ್ಕೆ ತೆರಳಿದ ನಂತರ ಸಂಪರ್ಕ ಕಡಿತಗೊಳಿಸಿದ್ದರು.ವಿವಾಹವಾಗುವುದಾಗಿ ನಂಬಿಸಿ ವಂಚನೆ ಎಂದು ವಿವಾಹಿತ ಮಹಿಳೆ ಆರೋಪಿಸಿದ್ದರು. ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಪೀಠ, ವಿವಾಹಿತೆಯು ಪತಿಯಿಂದ ವಿಚ್ಛೇದನ ಪಡೆದಿಲ್ಲ. ವಿಚ್ಛೇದನವಾಗದೇ ಮತ್ತೊಬ್ಬನನ್ನು ಪತಿಯಾಗಿ ಹೊಂದುವುದು ಸಾಧ್ಯವಿಲ್ಲ. ಹೀಗಾಗಿ ವಿವಾಹವಾಗುವುದಾಗಿ ನಂಬಿಸಿ ವಂಚನೆ ಪ್ರಕರಣ ಹೂಡುವಂತಿಲ್ಲ ಎಂದು ಆದೇಶ ನೀಡಿದೆ.