ಬೆಳಗಾವಿ : ಪಂಚಮಸಾಲಿ ಸಮಾಜದ 2ಎ ಮೀಸಲಾತಿಗಾಗಿ ಹಲವಾರು ವರ್ಷಗಳ ಬೇಡಿಕೆ ಇದೆ. ಬೇಡಿಕೆಗೆ ಯಾವುದೇ ಹಿನ್ನಡೆಯಾಗಿಲ್ಲ ಎಂದು ಹರಿಹರ ಪಂಚಮಸಾಲಿ ಸಮಾಜದ ಜಗದ್ಗುರು ವಚನಾನಂದ ಸ್ವಾಮೀಜಿ ಭರವಸೆ ನೀಡಿದರು.
ಅವರು ಅಥಣಿ ಪಟ್ಟಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡುತ್ತಾ, ಆಡದೆ ಮಾಡುವವನು ರೂಢಿಯೊಳು ಉತ್ತಮನು ಎನ್ನುತ್ತಾರೆ. ಅದರಂತೆ ಆದಷ್ಟು ಬೇಗನೆ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಸಿಗುವಂತೆ ಮಾಡಲಾಗುವುದು.ಇದರಲ್ಲಿ ಯಾವುದೇ ಸಂಶಯವಿಲ್ಲ. ಪಂಚಮಸಾಲಿ ಸಮಾಜದಲ್ಲಿ ಇನ್ನೂ ಹಲವು ಪೀಠಗಳು ಸ್ಥಾಪನೆ ಆದರೂ ಯಾವುದೇ ತೊಂದರೆಯಿಲ್ಲ ಎಂದು ವಚನಾನಂದ ಸ್ವಾಮೀಜಿ ತಿಳಿಸಿದರು.
ಪಂಚಮಸಾಲಿ ಪೀಠಗಳ ನಡುವೆ ಮತ್ತು ಯಾರ ನಡುವೆಯೂ ಭಿನ್ನಾಭಿಪ್ರಾಯವಿಲ್ಲ. ಸಮಾಜದ ಏಳಿಗೆಗೆ ಸ್ವಾಮೀಜಿಗಳು ಇರುತ್ತಾರೆ ಎಂದು ತಿಳಿಸಿದರು. ಹಾಗೆ ನಾನು ಗಡುವು ಕೊಡುವ ಸ್ವಾಮೀಜಿ ಅಲ್ಲ, ಮೀಸಲಾತಿ ಕೊಡಿಸುವ ಸ್ವಾಮೀಜಿ ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.