ಗದಗ: ಸಂಪುಟ ವಿಸ್ತರಣೆಯಲ್ಲಿ ಶಾಸಕ ಹೆಚ್.ಕೆ ಪಾಟೀಲ್ಗೆ ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಗದಗ ಜಿಲ್ಲೆಯಲ್ಲಿ ಕಾಂಗ್ರೆಸ್ ನಗರಸಭೆ ಸದಸ್ಯರು, ವಿವಿಧ ಘಟಕಗಳ ಪದಾಧಿಕಾರಿಗಳು ತಮ್ಮ ಸ್ಥಾನಕ್ಕೆ ಸಾಮೂಹಿಕ ರಾಜೀನಾಮೆ ನೀಡಿದ್ದಾರೆ.
ಗದಗ ಕ್ಷೇತ್ರದ ಹಿರಿಯ ಶಾಸಕ ಹೆಚ್.ಕೆ ಪಾಟೀಲ್ ಅವರಿಗೆ ಡಿ.ಕೆ. ಶಿವಕುಮಾರ್ ಸಚಿವ ಸಂಪುಟದಲ್ಲಿ ಮಂತ್ರಿ ಸ್ಥಾನ ನೀಡದಕ್ಕೆ ಗದಗ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರು ಅಸಮಾಧಾನಗೊಂಡಿದ್ದಾರೆ. ಅವರ ಅಭಿಮಾನಿಗಳು, ವಿವಿಧ ಘಟಕಗಳ ಪದಾಧಿಕಾರಿಗಳು, ಕಾರ್ಯಕರ್ತರೆಲ್ಲ ಸೇರಿ ರಾಜ್ಯ ನಾಯಕರು ಹಾಗೂ ಹೈಕಮಾಂಡ್ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದ ಕಾರ್ಯಪ್ಪ ಸರ್ಕಲ್ ಬಳಿ ಪಾಲಾ ಬಾದಾಮಿ ರಾಜ್ಯ ಹೆದ್ದಾರಿ ರಸ್ತೆ ತಡೆದು, ಮಾನವ ಸರಪಳಿ ನಿರ್ಮಿಸಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ಇನ್ನು ಗದಗ-ಬೆಟಗೇರಿ ನಗರಸಭೆಯ 17 ಚುನಾಯಿತ ಸದಸ್ಯರು, 5 ನಾಮನಿರ್ದೇಶಿತ ಸದಸ್ಯರು, ಪಕ್ಷದ ಎಸ್ಸಿ, ಎಸ್ಟಿ ಘಟಕ, ಅಲ್ಪಸಂಖ್ಯಾತರ ಘಟಕಗಳ ಪದಾಧಿಕಾರಿಗಳು ತಮ್ಮ ಸ್ಥಾನಕ್ಕೆ ಸಾಮೂಹಿಕ ರಾಜೀನಾಮೆ ನೀಡುವ ಮೂಲಕ ಕೈ ನಾಯಕರಿಗೆ ಎಚ್ಚರಿಕೆ ಸಂದೇಶ ನೀಡಿದ್ದಾರೆ. ಹೆಚ್.ಕೆ ಪಾಟೀಲ್ರನ್ನು ಪರಿಗಣಿಸಿ ಸಚಿವ ಸ್ಥಾನ ನೀಡಬೇಕು. ಇಲ್ಲವಾದರೆ ಉಗ್ರ ಹೋರಾಟ ಮಾಡುವುದಾಗಿ ಹೈಕಮಾಂಡ್ಗೆ ಎಚ್ಚರಿಕೆ ನೀಡಿದ್ದಾರೆ.
ನಾವೆಲ್ಲಾ ಬ್ಯಾನರ್ ಕಟ್ಟೊಕೆ, ಕುರ್ಚಿ ಹಾಕೋಕೆ, ಸಂಘಟನೆ ಮಾಡೋಕೆ ಮಾತ್ರ ಬೇಕು. ಉನ್ನತ ಹುದ್ದೆಗಳು ಬೆಂಗಳೂರು ಹಾಗೂ ಹಳೆ ಮೈಸೂರು ಭಾಗಕ್ಕೆ ಮಾತ್ರ ಸೀಮಿತವಾಗಿವೆ. ಉತ್ತರ ಕರ್ನಾಟಕದ ಪ್ರಭಾವಿ ನಾಯಕರಿಗೆ ಸೂಕ್ತ ಸ್ಥಾನಮಾನ ನೀಡುತ್ತಿಲ್ಲವೆಂದು ಕಾಂಗ್ರೆಸ್ ಕಟ್ಟಾಳುಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಭಾಗದ ಜನರಿಗೆ ನಿರಂತರವಾಗಿ ಅನ್ಯಾಯವಾಗುತ್ತಿರುವುದರಿಂದ ಪ್ರತ್ಯೇಕ ರಾಜ್ಯ ಮಾಡುವಂತೆ ಒತ್ತಾಯಿಸಿದ್ದಾರೆ. ಉತ್ತರ ಕರ್ನಾಟಕ ಅಭಿವೃದ್ಧಿಯಾಗಬೇಕಾದರೆ ಪ್ರತ್ಯೇಕ ರಾಜ್ಯವೇ ಪರಿಹಾರ ಎಂದು ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಅರೆ ಬೆತ್ತಲಾಗಿ ಹೆಚ್.ಕೆ. ಪಾಟೀಲ್ ಅಭಿಮಾನಿ ಪ್ರತಿಭಟನೆ
ಇನ್ನು ಹೆಚ್.ಕೆ ಪಾಟೀಲ್ ಅಭಿಮಾನಿ, ಕಾಂಗ್ರೆಸ್ ಸೇವಾದಳ ಸದಸ್ಯ ರಾಚಪ್ಪ ಗಡಾದ ಎಂಬಾತ ಶರ್ಟ್ ಬಿಚ್ಚಿ ಅರೆ ಬೆತ್ತಲಾಗಿ ಪ್ರತಿಭಟನೆ ಮಾಡಿದ್ದಾನೆ. ಹೆಚ್.ಕೆ. ಪಾಟೀಲ್ರಿಗೆ ಸಚಿವ ಸ್ಥಾನ ಸಿಗುವವರೆಗೆ ನಾನು ಶರ್ಟ್ ಧರಿಸುವುದಿಲ್ಲ ಎಂದು ಘೋಷಿಸಿದ್ದಾನೆ. ಅವರಿಗೆ ಅನ್ಯಾಯ ಮಾಡಿದ್ರೆ ಸರ್ಕಾರಕ್ಕೆ ಒಳ್ಳೆಯದಾಗಲ್ಲ ಎಂದು ಹಿಡಿಶಾಪ ಹಾಕಿದ್ದಾನೆ.

