ಧಾರವಾಡ: 'ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಿಭಜಿಸಿ ಪ್ರತ್ಯೇಕ ಪಾಲಿಕೆ ರಚನೆ ಪ್ರಸ್ತಾವಕ್ಕೆ ರಾಜ್ಯಪಾಲರು ಅನುಮೋದನೆ ನೀಡಬೇಕು ಎಂದು ಆಗ್ರಹಿಸಿ ನಡೆಯುತ್ತಿರುವ ಹೋರಾಟ ತೀವ್ರಗೊಂಡಿದ್ದು, ಪಾಲಿಕೆಯ 12ಕಾಂಗ್ರೆಸ್ ಸದಸ್ಯರು (ಒಬ್ಬರು ನಾಮನಿರ್ದೇಶಿತ ಸದಸ್ಯರು) ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.
ಬ್ಲಾಕ್ (ವಿಧಾನಸಭಾ ಕ್ಷೇತ್ರ 71 ಮತ್ತು 74) ಕಾಂಗ್ರೆಸ್ ಅಧ್ಯಕ್ಷರಿಗೆ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ. ಎರಡನೇ ವಾರ್ಡ್ನ ಸದಸ್ಯೆ ಸೂರವ್ವ ಪಾಟೀಲ, ನಾಲ್ಕನೇ ವಾರ್ಡ್ನ ರಾಜಶೇಖರ ಕಮತಿ, 6ನೇ ವಾರ್ಡ್ನ ದಿಲಶಾದ್ ಬೇಗಂ ನದಾಫ್, 7ನೇ ವಾರ್ಡ್ನ ದೀಪಾ ನೀರಲಕಟ್ಟಿ, ಅವರು ನಾಮನಿರ್ದೇಶಿತ ಸದಸ್ಯ ಪ್ರಕಾಶ ಬಾಬುರಾವ ಘಾಟಗೆ ಒಟ್ಟು ಐವರು ಒಂದೇ ಪತ್ರದಲ್ಲಿ ಸಹಿ ಹಾಕಿ ಬ್ಲಾಕ್ ಅಧ್ಯಕ್ಷರಿಗೆ (71) ನೀಡಿದ್ದಾರೆ.
14ನೇ ವಾರ್ಡ್ ಸದಸ್ಯ ಶಂಭುಗೌಡ ಸಾಲಮನಿ, 16ನೇ ವಾರ್ಡ್ನ ಪರ್ವಿನ್ ದೇಸಾಯಿ, 17ನೇ ವಾರ್ಡ್ನ ಗಣೇಶ ಮುಧೋಳ, 20ನೇ ವಾರ್ಡ್ನ ಕವಿತಾ ಕಬ್ಬೇರ, 22ನೇ ವಾರ್ಡ್ನ ಬಿಲ್ಕಿಸ್ಬಾನು ಮುಲ್ಲಾ, 23 ಮಂಜುನಾಥ ಬಡಕುರಿ ಹಾಗೂ 24ನೇ ವಾರ್ಡ್ನ ಮಯೂರ ಮೋರೆ ಒಟ್ಟು 7 ಸದಸ್ಯರು ಒಂದೇ ಪತ್ರದಲ್ಲಿ ಸಹಿ ಹಾಕಿ ಬ್ಲಾಕ್ ಅಧ್ಯಕ್ಷರಿಗೆ (74) ನೀಡಿದ್ದಾರೆ.
ಪ್ರತ್ಯೇಕ ಪಾಲಿಕೆಗಾಗಿ 10 ದಿನಳಿಂದ ಹೋರಾಟ ನಡೆಯುತ್ತಿದೆ. ಹೋರಾಟ ಪಕ್ಷಾತೀತ ಮತ್ತು ಜಾತ್ಯತೀತವಾಗಿದೆ. ನಮಗೆ ವೈಯುಕ್ತಿಕ ಅಧಿಕಾರಕ್ಕಿಂತಲೂ ಜನರ ಹಿತ, ಅವರ ಭಾವನೆಗಳು ಮುಖ್ಯ. ಹೋರಾಟಕ್ಕೆ ಸಂಪೂರ್ಣ ಧ್ವನಿಯಾಗುವ ನಿಟ್ಟಿನಲ್ಲಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಮತ್ತು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸದಸ್ಯತ್ವಕ್ಕೆ ಸ್ವಇಚ್ಛೆಯಿಂದ ರಾಜೀನಾಮೆ ನೀಡುತ್ತಿದ್ದೇವೆ ಎಂದು ಪತ್ರದಲ್ಲಿ ಬರೆದಿದ್ದಾರೆ.
'ಪ್ರತ್ಯೇಕ ಪಾಲಿಕೆ ವಿಚಾರದಲ್ಲಿ ಕಾಂಗ್ರೆಸ್ನವರು ಹೋರಾಟಗಾರರ ಜತೆ ಸೇರಿ ರಾಜಕೀಯ ಮಾಡುತ್ತಿದ್ಧಾರೆ ಎಂದು ಕೆಲವರು ಆರೋಪಿಸಿದ್ಧಾರೆ. ಪಕ್ಷಾತೀತವಾಗಿ ಮತ್ತು ಜಾತ್ಯತೀತವಾಗಿ ಹೋರಾಟ ಮಾಡುವ ನಿಟ್ಟಿನಲ್ಲಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇವೆ' ಎಂದು ಕವಿತಾ ಕಬ್ಬೇರ 'ಪ್ರಜಾವಾಣಿ'ಗೆ ತಿಳಿಸಿದರು.
ಸದಸ್ಯರು ರಾಜೀನಾಮೆ ಪತ್ರವನ್ನು ನೀಡಿದ್ಧಾರೆ. ರಾಜೀನಾಮೆ ಪತ್ರವನ್ನು ಪಕ್ಷದ ಜಿಲ್ಲಾಧ್ಯಕ್ಷರಿಗೆ ಕಳುಹಿಸುತ್ತೇವೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರವಿಂದ ಏಗನಗೌಡರ ತಿಳಿಸಿದರು.



