ಬೆಂಗಳೂರು: ಬಂಗಾರಪೇಟೆಯಲ್ಲಿ (Bangarpet) ನಾನು ಬರುವ ಮೊದಲು ಕಾಂಗ್ರೆಸ್ ಅನಾಥವಾಗಿತ್ತು ಎಂದು ಶಾಸಕ ಬಂಗಾರಪೇಟೆ ನಾರಾಯಣಸ್ವಾಮಿ ಅಸಮಾಧಾನ ಹೊರಹಾಕಿದ್ದಾರೆ.
ಸಿಎಂ ಡಿಕೆ ಶಿವಕುಮಾರ್ ಸಂಪುಟದಲ್ಲಿ ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆ ಕಾಂಗ್ರೆಸ್ ಸಮಾನ ಮನಸ್ಕ ಶಾಸಕರ ಸಭೆ ನಡೆಸಿ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇವತ್ತು ದಲಿತ ಬಲಗೈ ಸಮುದಾಯದವರು ಹೆಚ್ಚಿನ ಮತದಾರರು. ಇವರೆಲ್ಲ ನಮ್ಮ ಸ್ವಂತ ವರ್ಚಸ್ಸು ನೋಡಿ ಮತ ಹಾಕುತ್ತಿದ್ದಾರೆ. ನಾವು ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯವರು ಸ್ವಂತ ಬಲದ ಮೇಲೆ ಚುನಾವಣೆ ಗೆದ್ದವರು. 2004ರಿಂದ ಇಲ್ಲಿ ತನಕ ಸರಿಯಾದ ಸಚಿವ ಸ್ಥಾನ ಮಾನ ಸಿಕ್ಕಿಲ್ಲ. 2017ರಲ್ಲಿ ಕೆಲವೇ ಅವಧಿಗೆ ರಮೇಶ್ ಕುಮಾರ್ ಸಚಿವರಾದರು. ಕೋಲಾರ, ಚಿಕ್ಕಬಳ್ಳಾಪುರ ಸಮಗ್ರ ಅಭಿವೃದ್ಧಿಗೆ ಅವಕಾಶ ಕೊಡಬೇಕಾಗಿತ್ತು. ಏಳು ಮಂದಿ ಶಾಸಕರು ಎರಡು ಜಿಲ್ಲೆಯಲ್ಲಿ ಇದ್ದೇವೆ. ಕಾಂಗ್ರೆಸ್ 2028ರ ಚುನಾವಣೆಯಲ್ಲಿ 11 ಶಾಸಕರು ಗೆಲ್ಲಬೇಕು ಅಂತ ಭಾವಿಸಿದ್ದೇವೆ ಎಂದರು.
ನಾವೆಲ್ಲ ಸಭೆ ಸೇರಿ ಚರ್ಚೆ ಮಾಡಿದ್ದೇವೆ. ಸಚಿವರ ಪದಗ್ರಹಣ ಆಯ್ತು. ಅವಿಭಜಿತ ಕೋಲಾರ, ಚಿಕ್ಕಬಳ್ಳಾಪುರ ಅನ್ಯಾಯದ ಬಗ್ಗೆ ಚರ್ಚೆ ಮಾಡಿದ್ದೇವೆ. ಮೊದಲಿನಿಂದ ಕಾಂಗ್ರೆಸ್ ಭದ್ರಕೋಟೆ ಆಗಿದೆ. ದಳಕ್ಕೆ ಹೆಸರುವಾಸಿಯಾದ ಜಿಲ್ಲೆಯಲ್ಲಿ ಕಾಂಗ್ರೆಸ್ ಗೆಲ್ಲುತ್ತಾ ಬಂದಿದೆ. ಸಿದ್ದರಾಮಯ್ಯ ಕೂಡ ಕೋಲಾರದಲ್ಲಿ ನಿಲ್ಲಬೇಕು ಅಂತ ಬಯಸಿದ್ರು. ಅಲ್ಲಿ ಕಾಂಗ್ರೆಸ್ ಗೆಲ್ಲುವಂತೆ ಮಾಡಿದ್ದು ಕೊತ್ತೂರು ಮಂಜುನಾಥ್. ಮಾಲೂರಲ್ಲಿ 15 ವರ್ಷದಿಂದ ತಮ್ಮ ವರ್ಚಸ್ಸಿನಿಂದ ನಂಜೇಗೌಡ ಗೆಲ್ಲುತ್ತಾ ಬಂದಿದ್ದಾರೆ. ಚಿಂತಾಮಣಿಯಲ್ಲೂ ಕೂಡ ಸುಧಾಕರ್ ಕಾರಣದಿಂದ ಕಾಂಗ್ರೆಸ್ ಗೆದ್ದಿದೆ. ಕಾಂಗ್ರೆಸ್ ಉಳಿಸಬೇಕು ಎಂದು ನಾವೆಲ್ಲ ಶ್ರಮ ಪಟ್ಟಿದ್ದೇವೆ. ಕೆಜಿಎಫ್ನಲ್ಲೂ ಕೂಡ ಕಾಂಗ್ರೆಸ್ ಗೆಲ್ಲಲು ನಮ್ಮ ಕಾರ್ಯಕರ್ತರು ಕೆಲಸ ಮಾಡಿದ್ದಾರೆ ಎಂದು ಹೇಳಿದರು.
ನಮ್ಮ ಜಿಲ್ಲೆಯ ಸ್ಪಷ್ಟ ಚಿತ್ರಣ ಎಲ್ಲ ನಾಯಕರಿಗೂ ಹೇಳಿದ್ದೆವು. ಜಿಲ್ಲೆಯ ಅಭಿವೃದ್ಧಿಗಾಗಿ ಪರಿಪರಿಯಾಗಿ ಮನವಿ ಮಾಡಿಕೊಂಡಿದ್ದೆವು. ಯಾಕೋ ಏನೋ ಹಿರಿಯರು ನಮ್ಮ ಜನತೆಗೆ ಅನ್ಯಾಯ ಮಾಡಿದ್ದಾರೆ. ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗೆ ದೊಡ್ಡ ದ್ರೋಹ ಆಗಿದೆ. ಕಾಂಗ್ರೆಸ್ ಕಾರ್ಯಕರ್ತರಿಗೆ ನಾವು ಮುಖ ತೋರಿಸಲು ಆಗುತ್ತಿಲ್ಲ. ಇದಕ್ಕೆ ಸರ್ಕಾರ ನಡೆಸುವವರ ಹೆಗ್ಗಳಿಕೆಯೇ ಕಾರಣ. ನಮ್ಮ ಜಿಲ್ಲೆ ಅಭಿವೃದ್ಧಿಗೆ ಸಚಿವ ಸ್ಥಾನ ಕೊಡಬೇಕಾಗಿತ್ತು ಎಂದು ಬೇಸರ ವ್ಯಕ್ತಪಡಿಸಿದರು.
ಕೆಲವು ಜಿಲ್ಲೆಗೆ ಎರಡು ಮೂರು ಸಚಿವ ಸ್ಥಾನ ಕೊಟ್ಟಿದ್ದೀರಿ. ನಮ್ಮ ಎರಡೂ ಜಿಲ್ಲೆಯಲ್ಲಿ ಸಚಿವ ಸ್ಥಾನಕ್ಕೆ ಅರ್ಹರು ಯಾರೂ ಇಲ್ವಾ? ನಮ್ಮ ಹೈಕಮಾಂಡ್ ನಾಯಕರನ್ನು ನಾವು ಭೇಟಿ ಮಾಡುತ್ತೇವೆ. ನಾವು ಕೇವಲ ಪಾರ್ಟಿ ಮೇಲೆ ಗೆಲ್ಲುವವರಲ್ಲ, ಸ್ವಂತ ವರ್ಚಸ್ಸಿನಲ್ಲಿ ಗೆಲ್ಲುವವರು ನಾವು. ಹಿಂದೆ ಮಾಲೂರು ನಂಜೇಗೌಡಗೆ ಸಚಿವ ಸ್ಥಾನದ ಆಫರ್ ಬಿಜೆಪಿಯಿಂದ ಇತ್ತು. ಆದರೂ ನಾವು ಪಕ್ಷಕ್ಕೆ ದ್ರೋಹ ಮಾಡಿಲ್ಲ. ಇಂಥ ಸಮಯದಲ್ಲೂ ಪಕ್ಷದ ಗೌರವ ಉಳಿಸಿದ್ದೆವು. ನಮ್ಮ ಪಕ್ಷದ ಗೌರವ ಉಳಿಸಿದ್ದಕ್ಕೆ ಇದೇನಾ ಕೊಡುಗೆ? ಹೈಕಮಾಂಡ್ ಬಂದು ನಮ್ಮನ್ನು ಗೆಲ್ಲಿಸಲು ಸಾಧ್ಯ ಇಲ್ಲ. ಎರಡೂ ಜಿಲ್ಲೆಯಲ್ಲಿ ನಮ್ಮ ಶಕ್ತಿ ಕಸಿದುಕೊಂಡಿದ್ದೀರಿ. ನಾವು ಮಾಡಿರುವ ಅಪರಾಧ ಏನು? ನಮ್ಮ ಎರಡು ಜಿಲ್ಲೆ ಶಾಸಕರು ಮಾಡಿದ ಅನ್ಯಾಯ ಏನು? ಅಪರಾಧ ಏನು ಎಂದು ಪ್ರಶ್ನಿಸಿದರು.
ಪಕ್ಷದಲ್ಲಿ ಇರಲು ನಮಗೆ ಕಷ್ಟ ಆಗುತ್ತಿದೆ. ಹೀಗೆ ದ್ರೋಹ ಆದರೆ ನಾವು ಮುಂದೆ ಹೇಗೆ ಎದುರಿಸಬೇಕು? ನಾವು ಹೈಕಮಾಂಡ್ ಸಮಯ ತೆಗೆದುಕೊಂಡು ಅವರ ಜೊತೆಗೆ ಚರ್ಚೆ ಮಾಡುತ್ತೇವೆ. ನಾವೆಲ್ಲ ಹಿರಿಯರು ದೊಡ್ಡ ಸಭೆ ಮಾಡುತ್ತೇವೆ. ಎಲ್ಲ ಜಿಲ್ಲೆಯ ಹಿರಿಯ ಶಾಸಕರು ದೊಡ್ಡ ಸಭೆ ಮಾಡಿ ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದರು.

