Ad imageAd image

ಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ 43 ಕೇಸ್ ವಾಪಸ್ ಪಡೆಯುವ ತೀರ್ಮಾನ: ಸಚಿವ ಪರಮೇಶ್ವರ್‌

ratnakar
ಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ 43 ಕೇಸ್ ವಾಪಸ್ ಪಡೆಯುವ ತೀರ್ಮಾನ: ಸಚಿವ ಪರಮೇಶ್ವರ್‌
WhatsApp Group Join Now
Telegram Group Join Now

ಬೆಂಗಳೂರು: ಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ 43 ಕೇಸ್ ವಾಪಸ್ ಪಡೆಯುವ ತೀರ್ಮಾನ ಆಗಿದೆ. ಕಣ್ಮುಚ್ಚಿಕೊಂಡು ಯಾವುದೇ ಕೇಸ್ ವಾಪಸ್ ಪಡೆಯಲ್ಲ. ನಿಯಮಾನುಸಾರ ವಾಪಸ್ ಪಡೆಯುತ್ತೇವೆ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ.

ಈ ಬಗ್ಗೆ ಬೆಂಗಳೂರಿನಲ್ಲಿ ಮಾಧ್ಯಗಳೊಂದಿಗೆ ಮಾತನಾಡಿದ ಅವರು, ಸುಳ್ಳು ಕೇಸ್‌ಗಳನ್ನು ಹಾಕಿದ್ರೆ ಪರಿಶೀಲಿಸಿ ವಾಪಸ್ ಪಡೆಯಲು ಸರ್ಕಾರಕ್ಕೆ ಅವಕಾಶ ಇದೆ. ಯಾರೋ ಹೇಳಿದ್ರು ಅಂತ ಕೇಸ್ ವಾಪಸ್ ಪಡೆಯಲ್ಲ. ಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ 43 ಕೇಸ್ ವಾಪಸ್ ಮಾಡುತ್ತೇವೆ. ಇದರಲ್ಲಿ ಕೇವಲ ಅಲ್ಪಸಂಖ್ಯಾತರಷ್ಟೇ ಇಲ್ಲ, ವಿದ್ಯಾರ್ಥಿಗಳು, ರೈತರು ಇದ್ದಾರೆ. ಡಿಜೆ ಹಳ್ಳಿ, ಕೆಜಿ ಹಳ್ಳಿ ಕೇಸ್‌ಗಳನ್ನೂ ಪರಿಶೀಲನೆ ಮಾಡುತ್ತೇವೆ. ಕಣ್ಮುಚ್ಚಿಕೊಂಡು ಯಾವುದೇ ಕೇಸ್ ವಾಪಸ್ ಪಡೆಯಲ್ಲ ನಿಯಮಾನುಸಾರ ವಾಪಸ್ ಪದೆಯುತ್ತೇವೆ ಎಂದು ಹೇಳಿದರು.

ಹುಬ್ಬಳ್ಳಿ ಗಲಭೆ ಕೇಸ್‌ಗಳು ವಾಪಸ್ ವಿಚಾರವಾಗಿ ಮಾತನಾಡಿ, ಕೇಸ್‌ಗಳನ್ನು ವಾಪಸ್ ಪಡೆಯಲು ಯಾರಾದರೂ ಮನವಿ ಮಾಡ್ತಾರೆ. ಆಗ ನಾವು ಅದರ ಪರಿಶೀಲನೆಗೆ ಸಂಪುಟ ಉಪಸಮಿತಿ ಮಾಡುತ್ತೇವೆ. ಸಂಬಂಧಿಸಿದ ಇಲಾಖೆಗೆ ಮಾಹಿತಿ ಕೇಳುತ್ತೇವೆ. ನಂತರ ಸಂಪುಟ ಉಪಸಮಿತಿ ಅದರ ಬಗ್ಗೆ ತೀರ್ಮಾನ ಮಾಡುತ್ತದೆ. ವಾಪಸ್ ತಗೋಬೇಕಾ ಬೇಡವಾ ಎಂದು ಉಪಸಮಿತಿ ನಿರ್ಧರಿಸುತ್ತೆ. ಹುಬ್ಬಳ್ಳಿ ಕೇಸ್‌ಗಳೂ ಅಷ್ಟೊಂದು ಜನರ ಮೇಲೆ ಹಾಕುವ ಅಗತ್ಯವಿಲ್ಲ ಅಂತ ಸಂಪುಟ ಉಪಸಮಿತಿ ಸದಸ್ಯರು ಅಭಿಪ್ರಾಯ ಪಟ್ಟಿದ್ದಾರೆ. ನಂತರ ಸಂಪುಟ ಸಭೆಯಲ್ಲಿ ಕೇಸ್‌ಗಳನ್ನು ವಾಪಸ್ ಪಡೆಯುವ ನಿರ್ಧಾರ ಆಗಿದೆ. ಇದನ್ನು ಕೋರ್ಟಿಗೆ ಕಳಿಸುತ್ತೇವೆ. ಕೋರ್ಟ್ ಒಪ್ಪಿಕೊಂಡರೆ ಆ ಕೇಸ್‌ಗಳು ವಾಪಸ್ ಆಗುತ್ತವೆ. ಇದನ್ನು ಬಿಜೆಪಿ ರಾಜಕೀಯ ಮಾಡುತ್ತಿದೆ. ಬಿಜೆಪಿ ಇದ್ದಾಗಲೂ ಹಲವು ಕೇಸ್‌ಗಳನ್ನು ವಾಪಸ್ ಪಡೆದಿತ್ತು ಎಂದರು.

ಯುಪಿಯಲ್ಲಿ ಅಲ್ಲಿನ ಸಿಎಂ ವಿರುದ್ಧವೇ ಹಲವು ಕೇಸ್‌ಗಳಿದ್ದವು. ಅದನ್ನೆಲ್ಲ ಅವರು ವಾಪಸ್ ಪಡೆದುಕೊಂಡರು. ಈಗ ಹುಬ್ಬಳ್ಳಿ ಕೇಸ್‌ಗಳನ್ನು ವಾಪಸ್ ಪಡೆಯಲು ಕೋರ್ಟ್ ಒಪ್ಪುತ್ತೋ ಇಲ್ವೋ ಗೊತ್ತಿಲ್ಲ. ನಿಯಮಾನುಸಾರ ಕೇಸ್‌ಗಳನ್ನು ವಾಪಸ್ ಪಡೆಯಬಹುದು. ಹುಬ್ಬಳ್ಳಿ ಕೇಸ್‌ನಲ್ಲಿ ಒಟ್ಟು 56 ಕೇಸ್‌ಗಳಿದ್ದು 43 ನ್ನು ವಾಪಸ್ ಪಡೆಯುವ ತೀರ್ಮಾನ ಆಗಿದೆ. ಬಿಜೆಪಿ ಎಲ್ಲವನ್ನೂ ರಾಜಕೀಯ ಮಾಡಲು ಹೋಗುತ್ತಿದೆ ಎಂದು ತಿಳಿಸಿದರು.

ಸಿದ್ಧಾರ್ಥ ವಿಹಾರ ಟ್ರಸ್ಟ್‌ನಿಂದ 5 ಎಕರೆ ಸಿಎ ನಿವೇಶನ ವಾಪಸ್ ಮಾಡಿದ ವಿಚಾರವಾಗಿ ಮಾತನಾಡಿ, ಇಲ್ಲಿ ತಪ್ಪಾಗಿದೆ ಎಂದು ಅವರು ಭೂಮಿ ವಾಪಸ್ ಮಾಡಿಲ್ಲ. ಕಾನೂನು ಉಲ್ಲಂಘನೆ ಆಗಿರಲಿಲ್ಲ. ಆದರೂ ವಿವಾದ ಸೃಷ್ಟಿಸಲಾಗಿದೆ. ಆಪಾದನೆ ಮಾಡಿದ್ದಕ್ಕೆ ಅವರು ಭೂಮಿ ಬೇಡ ಅಂತ ವಾಪಸ್ ಮಾಡಿದ್ದಾರೆ. ಬಿಜೆಪಿಯವರಿಗೆ ಕಾಮಾಲೆ ಕಣ್ಣು, ಎಲ್ಲವನ್ನೂ ಹಳದಿಯಾಗೇ ಕಾಣ್ಸತ್ತೆ. ಅವರಿಗೆ ಬೇರೆ ಬಣ್ಣ ಕಾಣಲ್ಲ ಎಂದು ಹರಿಹಾಯ್ದರು.

ಅ.15 ರಂದು ಕೆ ಸಿ ವೇಣುಗೋಪಾಲ ರಾಜ್ಯಕ್ಕೆ ಆಗಮನ ವಿಚಾರವಾಗಿ ಮಾತನಾಡಿ, ನಾಳೆ ಕೇಂದ್ರದ ಪಿಎಸಿ ಕಮಿಟಿ ರಾಜ್ಯಕ್ಕೆ ಬರುತ್ತಿದೆ. ರಾಜ್ಯಕ್ಕೆ ಬಂದಾಗ ಸರ್ಕಾರ, ಪಕ್ಷದ ಕೆಲಸಗಳನ್ನು ಗಮನಿಸುತ್ತಾರೆ. ಇಲ್ಲಿ ಏನಾಗುತ್ತಿದೆ ಎಂದು ಸಹಜವಾಗಿ ಗಮನಿಸುತ್ತಾರೆ. ನಾನು ಅವರನ್ನು ವೈಯಕ್ತಿಕವಾಗಿ ಭೇಟಿ ಮಾಡುವ ಅಜೆಂಡಾ ಇಲ್ಲ ಎಂದರು.

WhatsApp Group Join Now
Telegram Group Join Now
Share This Article