ಚಿಕ್ಕೋಡಿ: ನನಗೆ 1 ಲಕ್ಷ 20 ಸಾವಿರ ಮತಗಳು ನನಗೆ ಬರುವ ನಿರೀಕ್ಷೆ ಇದೆ. 40 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ನಾನು ಗೆಲ್ಲುತ್ತೇನೆ ಎಂದು ಅಥಣಿ ಕೈ ಅಭ್ಯರ್ಥಿ, ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಹೇಳಿದ್ದಾರೆ.
ಅಥಣಿ ಸ್ವಗೃಹದಲ್ಲಿ ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ ಸೇರಿದ ಮೇಲೆ ಈ ಬಾರಿ ಉತ್ಸಾಹ ಹುಮ್ಮಸ್ಸಿನಿಂದ ಚುನಾವಣೆ ಎದುರಿಸಿದ್ದೇನೆ. ಕಾಂಗ್ರೆಸ್ ವೋಟ್ ಬ್ಯಾಂಕ್ ಜೊತೆಗೆ ಬಿಜೆಪಿ ತೊರೆದು ನನ್ನ ಬೆಂಬಲಿಗರು ಬಂದಿದ್ದಾರೆ ಎಂದರು.
ಎಕ್ಸಿಟ್ ಪೋಲ್ ಗಳಲ್ಲಿ ಕಾಂಗ್ರೆಸ್ ಮುನ್ನೆಡೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಕರ್ನಾಟಕದಲ್ಲಿ 35 ವರ್ಷಗಳಿಂದ ಸತತವಾಗಿ ಒಂದೇ ಸರ್ಕಾರ ಎರಡು ಬಾರಿ ಅಧಿಕಾರಕ್ಕೆ ಬಂದಿಲ್ಲ. ಬಿಜೆಪಿ ಪಕ್ಷದಲ್ಲಿ ಪ್ರಾಮಾಣಿಕರು ನಿಷ್ಠಾವಂತರಿಗೆ ನಿರ್ಲಕ್ಷ್ಯ ಆಗಿದೆ. ವ್ಯಾಪಾರೀಕರಣದಿಂದ ಬಿಜೆಪಿ ಪಕ್ಷಕ್ಕೆ ಬಹಳ ದೊಡ್ಡ ಹಾನಿಯಾಗಿದೆ. ಕಾಂಗ್ರೆಸ್ ನಾಯಕರು ಒಗ್ಗಟ್ಟಿನ ಪ್ರದರ್ಶನ ಮಾಡಿದ್ದಾರೆ. 5 ಗ್ಯಾರಂಟಿ ಯೋಜನೆಗಳಿಂದ ಬಡವರು, ಕಾರ್ಮಿಕರಿಗೆ ಬಹಳಷ್ಟು ಆಶಾ ಕಿರಣ ಮೂಡಿದೆ. ಬಡವರು ಕಾರ್ಮಿಕರು ಹಾಗೂ ಮಧ್ಯಮ ವರ್ಗದವರು ಜನಪ್ರಿಯ ಯೋಜನೆಗಳಿಂದ ಕಾಂಗ್ರೆಸ್ ಪಕ್ಷವನ್ನ ಬೆಂಬಲಿಸಿದ್ದಾರೆ ಎಂದು ಹೇಳಿದರು.
ಈಗಾಗಲೇ ಅನೇಕ ಸಂಸ್ಥೆಗಳ ಸಮೀಕ್ಷೆಗಳು ಕಾಂಗ್ರೆಸ್ ಬಹುಮತ ಅಂತಾ ಹೇಳಿವೆ. ಬೇರೆ ಜಿಲ್ಲೆಗಳಿಂದ ನಾವು ಮಾಹಿತಿ ಪಡೆದಾಗ 127 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಲಿದೆ. ನನ್ನ ಪ್ರಕಾರ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ 127 ರಿಂದ 130 ಕ್ಷೇತ್ರದಲ್ಲಿ ಗೆಲುವು ಸಾಧಿಸಲಿದೆ. ಬಿಜೆಪಿ ನಾಯಕರು ತಮ್ಮ ಪರವಾಗಿ ಸಮೀಕ್ಷೆ ಬಂದಾಗ ಸರಿಯಿದೆ ಎನ್ನುತ್ತಾರೆ. ಅವರ ವಿರುದ್ಧ ಬಂದಾಗ ಅದನ್ನ ವಿರೋಧಿಸುತ್ತಾರೆ ಎಂದು ತಿಳಿಸಿದ್ದಾರೆ.
ಬಿಜೆಪಿಯಲ್ಲಿ ಲಿಂಗಾಯತ ನಾಯಕರ ಸೈಡ್ ಲೈನ್ ಆರೋಪ ವಿಚಾರದ ಕುರಿತು ಮಾತನಾಡಿ, ಮೇಲ್ನೋಟಕ್ಕೆ ಬಿಜೆಪಿ ಅವರು ಲಿಂಗಾಯತರನ್ನ ಕಡೆಗಣಿಸುತ್ತಿರುವಂತೆ ಕಾಣುತ್ತಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಿಎಂ ಯಾರಾಗಬೇಕು ಎನ್ನುವದನ್ನ ಹೈ ಕಮಾಂಡ ತೀರ್ಮಾನ ಮಾಡುತ್ತೆ ಎಂದರು.