ಬೆಳಗಾವಿ : ಭೂ ಪರಿವರ್ತನೆಗೆ ಮತ್ತಷ್ಟು ಸರಳೀಕರಣ ಮಾಡುವ ಉದ್ದೇಶದ ಕರ್ನಾಟಕ ಭೂ ಕಂದಾಯ (ಎರಡನೇ ತಿದ್ದುಪಡಿ) ವಿಧೇಯಕ-2022ಕ್ಕೆ ವಿಧಾನ ಪರಿಷತ್ತ್ತಿನಲ್ಲಿ ಅನುಮೋದನೆ ಸಿಕ್ಕಿತು.
ತಿದ್ದುಪಡಿ ವಿಧೇಯಕವನ್ನು ವಿಧಾನ ಪರಿಷತ್ನಲ್ಲಿ ಪರ್ಯಾಲೋಚಿಸಿ ಕೋರಿ ಕಂದಾಯ ಸಚಿವ ಆರ್.ಅಶೋಕ್ ಮಾತನಾಡಿದರು. 2021-2022ರ ವರ್ಷದ ಆಯವ್ಯಯ ಭಾಷಣದಲ್ಲಿ ಮಾಡಿದ ಪ್ರಸ್ತಾವನೆಗಳನ್ನು ಜಾರಿ ತಂದು ಕೃಷಿಯೇತರ ಉದ್ದೇಶಕ್ಕಾಗಿ ಭೂ ಪರಿವರ್ತನೆಯನ್ನು ಸರಳಗೊಳಿಸುವುದಕ್ಕಾಗಿ ಕರ್ನಾಟಕ ಭೂ ಕಂದಾಯ ಅಧಿನಿಯಮ 1964 (1964ರ ಕರ್ನಾಟಕ ಅಧಿನಿಯಮ 12)ರ 95ನೇ ಮತ್ತು 96ನೇ ಪ್ರಕರಣವನ್ನು ಮತ್ತಷ್ಟು ತಿದ್ದುಪಡಿ ಮಾಡುವುದು ಅವಶ್ಯಕವೆಂದು ಪರಿಗಣ ಸಿ ವಿಧೇಯಕ ಜಾರಿ ಮಾಡಲಾಗುತ್ತದೆ. ಭೂಪರಿವರ್ತನೆಗಾಗಿ ಅರ್ಜಿ ಸಲ್ಲಿಸಿದಾಗ ಅಧಿಕಾರಿಗಳು ಜನರನ್ನು ಕಚೇರಿಗೆ ಅಲೆಯಸುತ್ತಾರೆ. ಇದನ್ನು ತಪ್ಪಿಸಲು 7 ದಿನಗಳೊಳಗಡೆ ಭೂಪರಿವರ್ತನೆ ಮಾಡಲು ಅನುಕೂಲವಾಗುವ ಹಾಗೆ ಕಾಯ್ದೆಯಲ್ಲಿ ತಿದ್ದುಪಡಿ ತರಲಾಗಿದೆ ಎಂದರು.
ಈ ವೇಳೆ ಪರಿಷತ್ತಿನ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಮಾತನಾಡಿ, ಭೂ ತಿದ್ದುಪಡಿ ಕಾಯ್ದೆ ಬಡಜನರ ಪರವಾಗಿಲ್ಲ. ಇದು ಭೂ ಮಾಫಿಯಾ ಪರವಾಗಿದೆ. ಜನಹಿತ ದೃಷ್ಟಿಯಿಂದ ಈ ಕಾಯಿದೆಗೆ ತಮ್ಮ ಬೆಂಬಲವಿಲ್ಲ ಎಂದು ತಿಳಿಸಿದರು. ಇದಕ್ಕೆ ಧ್ವನಿಗೂಡಿ ಮಾತನಾಡಿದ ಸದಸ್ಯ ಕೆ.ಎ.ತಿಪ್ಪೇಸ್ವಾಮಿ ಸರ್ಕಾರ ಕಾಯಿದೆಯನ್ನು ಪುನರಾವಲೋಕನ ಮಾಡಿ ಜಾರಿ ಮಾಡಬೇಕು ಎಂದರು. ಕಾಯ್ದೆ ಶ್ರೀಮಂತರ ಪರವಾಗಿದೆ. ಅಧಿಕಾರಿಗಳನ್ನು ಭ್ರಷ್ಟರನ್ನಾಗಿ ಮಾಡುವ ಕಾಯಿದೆ ಇದಾಗಿದೆ ಎಂದು ಸದಸ್ಯ ಮರಿತಿಬ್ಬೇಗೌಡ ಅಸಮಾಧಾನ ವ್ಯಕ್ತಪಡಿಸಿದರು.
ಭೂಪರಿವರ್ತನೆಗೆ ಸಂಬಂಧಿಸಿದಂತೆ ಕಾನೂನನ್ನು ಸರಳೀಕರಣಗೊಳಿಸಲಾಗುತ್ತದೆ. ಈ ಕಾಯಿದೆ ಜಾರಿ ಮಾಡುವ ಮೂಲಕ ಮಧ್ಯೆವರ್ತಿಗಳ ಹಾವಳಿ ತಡೆಯಲಾಗುತ್ತದೆ. ಈ ವಿಧೇಯಕವನ್ನು ಅಂಗೀಕರಿಸಬೇಕು ಎಂದು ಕಂದಾಯ ಸಚಿವರು ಸದನವನ್ನು ಕೋರಿದರು. ಸಭಾಪತಿಗಳು ಪ್ರಸ್ತಾವವನ್ನು ಮಂಡಿಸಿದರು. ತಿದ್ದುಪಡಿ ವಿಧೇಯಕವು ಪರಿಷತ್ ಅನುಮೋದನೆ ಪಡೆಯಿತು.