ಬಾಗಲಕೋಟೆ: ಜ್ಞಾನವು ಭಾಷೆಗಿಂತ ದೊಡ್ಡದಾಗಿದ್ದು ನಿರಂತರ ಅದ್ಯಯನದಿಂದ ಭಾಷಾ ಸಾಮರ್ಥ್ಯವನ್ನು ಅರಿತುಕೊಳ್ಳಲು ಸಾಧ್ಯ. ಓದುವ, ಗ್ರಹಿಸುವ ಮತ್ತು ಕಲ್ಪನಾ ಪ್ರವೃತ್ತಿ ಬೆಳಸಿಕೊಳ್ಳಲು ಬರವಣಿಗೆಯು ಉತ್ತಮ ಮಾದ್ಯಮ ಎಂದು ವಿಶ್ರಾಂತ ಪ್ರಾಚಾರ್ಯರಾದ ಡಾ. ವ್ಹಿ.ಎಸ್ ಕಟಗಿಹಳ್ಳಿಮಠ ಹೇಳಿದರು.
ಬಿವಿವಿ ಸಂಘದ ಬಸವೇಶ್ವರ ಕಲಾ ಮಾಹಾವಿದ್ಯಾಲಯದಲ್ಲಿ ಕರ್ನಾಟಕ ಸಾಹಿತ್ಯ ಸಂಘ ಹಾಗೂ ಐಕ್ಯೂಎಸಿ ಘಟಕದ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಳ್ಳಲಾದ ಕನ್ನಡ ಬರವಣಿಗೆಯ ಕೌಶಲ್ಯ ಸರ್ಟಿಫಿಕೇಟ್ ಕೋರ್ಸ್ ಉದ್ಘಾಟನಾ ಸಮಾರಂಭವನ್ನು ಕಪ್ಪೆ ಅರೆಭಟ್ಟನ ಶಾಸನದ ಮೊದಲ ಕನ್ನಡ ತ್ರಿಪದಿಯನ್ನು ಓದುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸಾವಿರಾರು ವರ್ಷಗಳಿಂದ ಭಾಷೆಗಳು ಸರಳೀಕರಣವಾಗುತ್ತ ಸುಲಭ ಭಾಷೆಗಳಾಗಿ ಬಂದಿದ್ದು ಇದಕ್ಕೆ ಬರವಣಿಗೆಯು ಮೂಲವಾಗಿದೆ ಎಂದರು.
ಎಲ್ಲರೂ ಮಾತಗಳನ್ನಾಡಬಹುದು ಆದರೆ ಮೆಚ್ಚುಗೆಯಾಗುವ ಬರವಣಿಗೆ ಬರೆಯಬೇಕಾದರೆ ಕೌಶಲ್ಯ ಮುಖ್ಯ. ಬರವಣಿಗೆಗೂ ತನ್ನದೆಯಾದ ಭಾಷೆಯಿದೆ. ಹಿರಿಯ ದರ್ಜೆಯ ಸ್ಪರ್ಧಾತ್ಮಕ ಪರೀಕ್ಷೆಗಳು ಪರಿಣಾಮಕಾರಿ ಬರವಣಿಗೆಯನ್ನು ನಿರೀಕ್ಷಿಸುವುದರಿಂದ ಪರೀಕ್ಷೆಗಳನ್ನು ಎದುರಿಸುವ ಕ್ರಮ ಗೊತ್ತಿದ್ದರೆ ಐಎಸ್, ಕೆಎಸ್ ಪರೀಕ್ಷೆಗಳನ್ನು ಎದುರಿಸುವುದು ಸುಲಭ ಎಂದರು.
ಸಂಕ್ಷಿಪ್ತ ಬರವಣಿಗೆಯಲ್ಲಿ ಸಮಗ್ರ ವಿವರಣೆಯನ್ನು ನೀಡಬೇಕಾದರೆ ಭಾಷೆಯ ಮಿತಿ ಅರಿತಿರಬೇಕು. ಬಡತನ, ಸಿರಿತನದ ಆಧಾರದ ಮೇಲೆ ಸಾಧಕರಾಗಲು ಸಾಧ್ಯವಿಲ್ಲ. ಆತ್ಮಸ್ಥೈರ್ಯ ಮತ್ತು ಛಲದಿಂದ ಮಾತ್ರ ಗುರಿ ತಲುಪಲು ಸಾಧ್ಯ. ಪ್ರಾಚಿನ ಭಾರತವನ್ನು ಅಧ್ಯಯನ ಮಾಡಿದರೆ ದಕ್ಷಿಣ ಭಾರತದಲ್ಲಿ ಕನ್ನಡ ಭಾಷೆಯೇ ಮೊದಲ ಭಾಷೆಯಾಗಿದ್ದು ಅದಕ್ಕೆ ಬೇಕಾದಷ್ಟು ಪುರಾವೆಗಳಿವೆ. ಇಂತಹ ಭಾಷೆಯನ್ನು ಬಳಸಿಕೊಂಡು ಉಳಿಸಿಕೊಂಡು ಹೋಗುವ ಕಲೆಯನ್ನು ಬೆಳಸಿಕೊಳ್ಳಬೇಕಿದೆ ಎಂದರು.
ಪ್ರಾಚಾರ್ಯರಾದ ಪ್ರೊ. ಎಸ್.ಆರ್ ಮುಗನೂರಮಠ ಅವರು ಮಾತನಾಡಿ ಮಾತುಗಳು ಕ್ಷಣಿಕ ರೂಪವಾಗಿದ್ದು ಅದನ್ನು ಶಾಶ್ವತವಾಗಿ ಉಳಿಸಲು ಬರವಣಿಗೆಯಿಂದ ಮಾತ್ರ ಸಾಧ್ಯ. ವಿಷಯ ವಸ್ತುಗಳನ್ನು ಪ್ರಶ್ನಾರ್ಥಕ ರೂಪದಲ್ಲಿ ನೋಡುವುದನ್ನು ಕಲಿತರೆ ಅರಿವನ್ನು ಬೆಳಸಿಕೊಳ್ಳಬಹುದು. ಬರಹ ದಾಖಲೆಯಾಗುವ ವಿಧಾನವಾಗಿದ್ದು ಕಥೆ, ಸಾಹಿತ್ಯ, ಕಲೆ, ವಿಜ್ಞಾನ ಪ್ರತಿಯೊಂದಕ್ಕೂ ತನ್ನದೆಯಾದ ಬರಹ ಕೌಶಲ್ಯಗಳಿರುತ್ತವೆ ಅವುಗಳನ್ನು ವಿದ್ಯಾರ್ಥಿ ಜೀವನದಲ್ಲಿ ಬೆಳಸಿಕೊಳ್ಳಬೇಕು. ಭಾಷೆಯನ್ನು ಬರೆಯದಿದ್ದರೆ ಭಾಷೆಯು ಸತ್ತಂತೆ, ಭಾಷೆಯನ್ನು ಬರೆಯಲು ಕಲಿಯದಿದ್ದರೆ ಮನುಷ್ಯನು ಬದುಕಿಯೂ ಸತ್ತಂತೆ ಎಂದರು.
ಕಾರ್ಯಕ್ರಮದಲ್ಲಿ ಪ್ರಾದ್ಯಾಪಕರಾದ ಡಾ. ಎಸ್. ಡಿ ಕೆಂಗಲಗುತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಐಕ್ಯೂಎಸಿ ಸಂಯೋಜಕ ಡಾ. ಎ.ಯು ರಾಠೋಡ, ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ವೀರುಪಾಕ್ಷ ಎನ್.ಬಿ ಸೇರಿದಂತೆ ವಿವಿಧ ವಿಭಾಗಗಳ ಪ್ರಾದ್ಯಾಪಕರುಗಳು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.