ಬೆಳಗಾವಿ : ಜಗತ್ತಿನ ಅದ್ಭುತ ಶಿಲ್ಪಗಳಾದ ಅಮರ ಶಿಲ್ಪಿ ಜಕಣಾಚಾರಿ ಅವರು ಬೆಲೂರು ಮತ್ತು ಹಳೆಬೀಡು ಸೇರಿದಂತೆ ಇತರ ಸ್ಥಳಗಳಲ್ಲಿ ಕಲ್ಲಿನಲ್ಲಿ ಕೆತ್ತಿದ ಕಲಾಕೃತಿಗಳನ್ನು ನೋಡುವುದೇ ಒಂದು ಸೌಭಾಗ್ಯ ಎಂದು ಉಪನ್ಯಾಸಕಿ ಪ್ರೇಮಾ ಹಾವನೂರ ಅವರು ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಸಂಯುಕ್ತ ಆಶ್ರಯದಲ್ಲಿ ನಗರದ ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ರವಿವಾರ (ಜ.1) ನಡೆದ ಅಮರ ಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ-2023 ಕಾರ್ಯಕ್ರಮದ ಉಪನ್ಯಾಸದಲ್ಲಿ ಅವರು ಹೇಳಿದರು.
ಅಮರಶಿಲ್ಪಿ ಜಕಣಾಚಾರಿ ಅವರು ಅತ್ಯಂತ ಶ್ರೇಷ್ಠ ಹಲವಾರು ದೇವಾಲಯಗಳನ್ನು ನಿರ್ಮಿಸಿ ದಂತಕಥೆಯಾದ ಶಿಲ್ಪಿಯಾಗಿದ್ದಾರೆ. ಕಲ್ಯಾಣಿ ಚಾಲುಕ್ಯರ ಹಾಗೂ ಹೊಯ್ಸಳರ ಶೈಲಿಯ ದೇವಾಲಯಗಳನ್ನು ಬೇಲೂರು ಹಾಗೂ ಹಳೇಬೀಡಿನಲ್ಲಿ ನಿರ್ಮಿಸಿದ್ದಾರೆ ಎಂದು ತಿಳಿಸಿದರು.
ಅಮರ ಶಿಲ್ಪಿ ಜಕಣಾಚಾರಿ ಪ್ರಾಮಾಣಿಕತೆ:
ಶಿಲ್ಪಿ ಜಕಣಾಚಾರಿ ಮಗನಾದ ಡಂಕಣಾಚಾರಿ ಆತನ ತಂದೆಯನ್ನು ಹುಡುಕುವುದಕ್ಕಾಗಿ ತಾನೇ ಒಬ್ಬ ಪ್ರಖ್ಯಾತ ಶಿಲ್ಪಿಯಾಗಿ ಬೆಳೆದನು. ಬೇಲೂರಿನಲ್ಲಿ ಅವನು ಶಿಲ್ಪಿಯ ಕೆಲಸಕ್ಕಾಗಿ ನೇಮಿಸಲ್ಪಟ್ಟು, ಮಹಾನ್ ಶಿಲ್ಪಿ ಜಕಣಾಚಾರಿ ನಿರ್ಮಿಸಿದ ಒಂದು ಶಿಲ್ಪದಲ್ಲಿ ಒಂದು ಲೋಪವನ್ನು ತೋರಿಸಿಕೊಟ್ಟನು.
ಇದರಿಂದ ಕೋಪಗೊಂಡ ಜಕಣಾಚಾರಿಗಳು ಅವರು ಕೆತ್ತಿದ ಶಿಲ್ಪದಲ್ಲಿ ದೋಷವಿದ್ದರೆ, ತನ್ನ ಬಲಗೈಯನ್ನು ಕತ್ತರಿಸಿಕೊಳ್ಳುವುದಾಗಿ ಪ್ರಮಾಣ ಮಾಡಿದರು. ಬಳಿಕ ಆ ಶಿಲ್ಪವನ್ನು ಪರೀಕ್ಷಿಸಿದ ನಂತರ, ದೋಷವಿರುವುದು ನಿಜವೆಂದು ಗೊತ್ತಾಗಿ ಜಕಣಾಚಾರಿ ತಮ್ಮ ವಾಗ್ದಾನದಂತೆ ತಮ್ಮ ಬಲಗೈಯನ್ನು ಕತ್ತರಿಸಿಕೊಂಡರು.
ಕೊನೆಯಲ್ಲಿ, ಆ ಇಬ್ಬರು ಶಿಲ್ಪಿಗಳು ಅವರಿಬ್ಬರೂ ತಂದೆ,ಮಗ ಎಂಬ ಸಂಬಂಧವನ್ನು ತಿಳಿದುಕೊಂಡರು ಎಂದು ಅಮರ ಶಿಲ್ಪಿ ಜಕಣಾಚಾರಿ ಅವರ ಜೀವನ ಚರಿತ್ರೆಯನ್ನು ಪ್ರೇಮಾ ಹಾವನೂರ ಅವರು ಉಪನ್ಯಾಸದಲ್ಲಿ ತಿಳಿಸಿದರು.
ಡಕಣಾಚಾರಿ ಶಿಲ್ಪಕಲೆ ಮಾಹಿತಿ:
ಮಾಡುವ ಕೆಸದ ಬಗ್ಗೆ ತಿಳಿವಳಿಕೆ, ಶ್ರದ್ಧೆ, ನಿಷ್ಠೆ ಮತ್ತು ಪ್ರಾಮಾಣಿಕತೆ ಇದ್ದಲ್ಲಿ ಯಶಸ್ಸು ಲಭಿಸುತ್ತದೆ. ನಮ್ಮೊಳಗಿನ ಕಲೆಯನ್ನು ನಾವು ಗುರುತಿಸಿದರೆ ಮಾತ್ರ ಸಮಾಜ ನಮ್ಮನ್ನು ಗುರುತಿಸುತ್ತದೆ ಎಂದು ಶಿಲ್ಪಿ ಜಕಣಾಚಾರಿ ತೋರಿಸಿಕೊಟ್ಟಿದ್ದಾರೆ
ಜಕಣಾಚಾರಿ ಅವರು ತಮ್ಮ ಇಡೀ ಜೀವನವನ್ನು ಶಿಲ್ಪ ಕಲೆಯ ಕೆತ್ತನೆಯಲ್ಲಿ ತೊಡಗಿಸಿಕೊಂಡಿದ್ದರು. ಜಕಣಾಚಾರಿ ಅವರ ಮಗ ಡಕಣಾಚಾರಿ ಅವರು ಕೂಡ, ಕಪ್ಪೆಚನ್ನಿಗರಾಯ ದೇವಸ್ಥಾನವನ್ನು ಅದ್ಭುತ ಕಲಾಕೃತಿಯಿಂದ ನಿರ್ಮಿಸಿದ್ದಾರೆ ಎಂದು ಉಪನ್ಯಾಸಕಿ ಪ್ರೇಮಾ ಹಾವನೂರ ಮಾಹಿತಿ ನೀಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕರಾದ ವಿದ್ಯಾವತಿ ಭಜಂತ್ರಿ, ಸಮಾಜದ ಮುಖಂಡರಾದ ಅಶೋಕ ಮುದ್ನಾಳ, ಸಿ,ವಾಯ್ ಪತ್ತಾರ, ಯುವ ಮುಖಂಡರಾದ ಮಲ್ಲಿಕಾರ್ಜುನ ಪತ್ತಾರ, ವೈಶಾಲಿ ಸುತ್ತಾರ, ಜನಾರ್ಧನ ಬಡಿಗೇರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕರಾದ ವಿದ್ಯಾವತಿ ಭಜಂತ್ರಿ, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸಂಗೀತ ಕಾರ್ಯಕ್ರಮ ಸುರೇಶ ಚಂದರಗಿ ಅವರು ಪ್ರಸ್ತುತ, ಪಡಿಸಿದರು.
ಸುನೀತಾ ದೇಸಾಯಿ ನಿರೂಪಿಸಿ, ವಂದಿಸಿದರು,
ಮೆರವಣಿಗೆ ಕಾರ್ಯಕ್ರಮ:
ಇದಕ್ಕೂ ಮುಂಚೆ ಅಮರ ಶಿಲ್ಪಿ ಜಕಣಾಚಾರಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ನಗರದ ಕೋಟೆ ಕೆರೆಯಿಂದ ಕುಮಾರ ಗಂಧರ್ವ ಕಲಾ ಮಂದಿರದವರೆಗೆ ಮೆರವಣಿಗೆ ನಡೆಯಿತು.
ಈ ಸಂಧರ್ಬದಲ್ಲಿ ಬೆಳಗಾವಿ ಉತ್ತರ ವಿಧಾನಸಭಾ ಮತಕ್ಷೇತ್ರದ ಶಾಸಕರಾದ ಅನೀಲ ಬೆನಕೆ,ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕರಾದ ವಿದ್ಯಾವತಿ ಭಜಂತ್ರಿ, ಸಮಾಜದ ಮುಖಂಡರಾದ ಅಶೋಕ ಮುದ್ನಾಳ, ಸಿ,ವಾಯ್ ಪತ್ತಾರ, ಯುವ ಮುಖಂಡರಾದ ಮಲ್ಲಿಕಾರ್ಜುನ ಪತ್ತಾರ, ವೈಶಾಲಿ ಸುತ್ತಾರ, ಜನಾರ್ಧನ ಬಡಿಗೇರ ಹಾಜರಿದ್ದರು.