ವಿಜಯಪುರ: ಬೆಳಗಾವಿ ಗೋಲ್ಫ್ ಮೈದಾನದಲ್ಲಿ ಪತ್ತೆಯಾಗಿರುವ ಚಿರತೆಯನ್ನು ಸೆರೆ ಹಿಡಿಯಲಾಗದ ಕಾರಣಕ್ಕೆ ನನ್ನ ರಾಜೀನಾಮೆ ಕೇಳುತ್ತಿದ್ದಾರೆ. ನಾನು ರಾಜೀನಾಮೆ ನೀಡಿದರೆ ಚಿರತೆ ಸೆರೆ ಆಗುತ್ತದೆ ಎಂದಾದರೆ ಈಗಲೇ ರಾಜಿನಾಮೆ ನೀಡುತ್ತೇನೆ ಎಂದು ಅರಣ್ಯ ಸಚಿವ ಉಮೇಶ ಕತ್ತಿ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿರತೆ ಸೆರೆ ಹಿಡಿಯಲು ಉತ್ತರ ಕರ್ನಾಟಕ ಭಾಗದ ಸಿಬ್ಬಂದಿಯನ್ನು ಹಾಕಿದ್ದೇವೆ. ಪಳಗಿದ ಆನೆಗಳನ್ನು ತಂದಿದ್ದೇವೆ, ಆದರೂ ಚಿರತೆ ಸೆರೆ ಸಾಧ್ಯವಾಗಿಲ್ಲ. ಎರಡು ದಿನಗಳಿಂದ ಚಿರತೆ ಬೆಳಗಾವಿ ಪಟ್ಟಣದಲ್ಲಿ ಎಲ್ಲೂ ಕಂಡು ಬಂದಿಲ್ಲ.
ಚಿರತೆ ಗೋಲ್ಫ್ ಕೋರ್ಟ್ ಸುತ್ತಮುತ್ತ ತಿರುಗಾಡುತ್ತಿದೆ ಎನ್ನಲಾಗಿದೆ. ಸಿಬ್ಬಂದಿ ಚಿರತೆ ಸೆರೆಹಿಡಿಯುವ ಕಾರ್ಯಾಚರಣೆ ಚುರುಕುಗೊಳಿಸಿದ್ದಾರೆ ಎಂದರು.