ಹುಬ್ಬಳ್ಳಿ: ಬಿಎಲ್ ಸಂತೋಷ್ ಅವರು ಮೊದಲು ಪಕ್ಷದಲ್ಲಿದ್ದವರನ್ನು ಉಳಿಸಿಕೊಳ್ಳಲಿ. ಅವರ ಪಕ್ಷದ ಶಾಸಕರು ಮತ್ತು ಮಾಜಿ ಶಾಸಕರನ್ನು ಉಳಿಸಿಕೊಂಡು, ಪಕ್ಷದ ಅಸ್ತಿತ್ವ ಉಳಿಸಿಕೊಂಡರೆ ಸಾಕಾಗಿದೆ. ಒಂದು ವೇಳೆ ಅವರ ಸಂಪರ್ಕದಲ್ಲಿ ಶಾಸಕರುಗಳು ಇದ್ದರೆ ನಾಳೆಯಿಂದಲೇ ಆಪರೇಶನ್ ಸ್ಟಾರ್ಟ್ ಮಾಡಲಿ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ವ್ಯಂಗ್ಯವಾಡಿದ್ದಾರೆ.
ಕಾಂಗ್ರೆಸ್ ಶಾಸಕರು ಸಂಪರ್ಕದಲ್ಲಿದ್ದಾರೆ ಎಂಬ ಬಿಎಲ್ ಸಂತೋಷ್ ಹೇಳಿಕೆ ವಿಚಾರವಾಗಿ ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಬೇರೆ ಪಕ್ಷದವರನ್ನು ಕರೆದುಕೊಂಡು ಬಂದು ಹೊಸ ಸರ್ಕಾರ ಮಾಡೋದನ್ನು ಬಿಜೆಪಿ ನಾಯಕರು ಬಿಟ್ಟು ಬಿಡಲಿ. ಬರೀ ಆಪರೇಶನ್ ಮಾಡಿ ಸರ್ಕಾರ ರಚನೆ ಮಾಡೋದಾ? ಇಡೀ ರಾಷ್ಟ್ರದಲ್ಲಿ ಬೆಳಗ್ಗೆ ಇಂದ ಸಾಯಂಕಾಲವರೆಗೂ ಆಪರೇಶನ್ ಮಾಡೋದು, ಹಿರಿಯರನ್ನು ಕಡೆಗಣಿಸಿ ಹೊಸಬರನ್ನು ಕರೆದುಕೊಂಡು ಬರೋದು ನಿಮ್ಮ ಕೆಲಸ. ದಿನದಿಂದ ದಿನಕ್ಕೆ ಬಿಜೆಪಿ ಪಕ್ಷ ಅಧೋಗತಿಗೆ ಹೋಗ್ತಿದೆ. ಬಿಜೆಪಿ ಮುಳುಗುತ್ತಿರೋ ಹಡಗು ಎಂದು ಟಾಂಗ್ ನೀಡಿದರು.
ಕರ್ನಾಟಕದಲ್ಲಿ ಬಿಜೆಪಿ ಅಸ್ತಿತ್ವ ಕಳೆದುಕೊಳ್ತಿದೆ. ಇದಕ್ಕೆ ಕಾರಣ ಬಿಜೆಪಿ ಕೆಲವೇ ಜನರ ಕೈಯಲ್ಲಿದೆ. ಅದರಿಂದ ಹೊರಬಂದರೆ ಮಾತ್ರ ಭವಿಷ್ಯ. ಅದರಿಂದ ಹೊರಬರೋಕೆ ಆಗತ್ತೋ ಇಲ್ವೋ, ಆದರೆ ನಾನೇ ಹೊರಗೆ ಬಂದು ಬಿಟ್ಟಿದ್ದೆನೆ. ರಾಜ್ಯ ಬಿಜೆಪಿ ನಾಯಕರ ಪರಸ್ಥಿತಿ ಇಡೀ ಜಗತ್ತಿಗೆ ಗೊತ್ತಾಗಿದೆ. ದೆಹಲಿಯಲ್ಲಿ ಕೂತ ನಾಯಕರು ಈ ಬಗ್ಗೆ ಯೋಚನೆ ಮಾಡಬೇಕು. ಕರ್ನಾಟಕದಲ್ಲಿ ಬಿಜೆಪಿಗೆ ಒಂದು ಸಲವೂ ಬಹುಮತ ಬರಲಿಲ್ಲ. ಆದರೆ ಕಾಂಗ್ರೆಸ್ಗೆ 136 ಸೀಟ್ ಬಂದಿದೆ ಎಂದರು.